ಬೆಂಗಳೂರು : ವೇತನ ಪರಿಷ್ಕರಣೆಗೆ ಒತ್ತಾಯಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಮೇ 20 ರಿಂದ ಕರೆದಿರುವ ಅನಿರ್ದಿಷ್ಟಾವಧಿ ಬಸ್ ಮುಷ್ಕರವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದ್ದು, ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ನಾಳಿನ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ.
ಸಾರಿಗೆ ನೌಕರರ ಮುಷ್ಕರವನ್ನು ಪ್ರಶ್ನಿಸಿ ಮನೆ ಕೆಲಸದ ಮಹಿಳೆ ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಲೆಕ್ಕಸಂದ್ರದ ಶ್ರೀಧರ್ ಎಂಬುವವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಗೋವಿಂದರಾಜ ಅವರು ನಡೆಸಿದರು.ಸಾರ್ವಜನಿಕರಿಗೆ ಮತ್ತು ಶ್ರಮಿಕ ವರ್ಗಕ್ಕೆ ಆಗುವ ತೊಂದರೆಯನ್ನು ಗಮನಿಸಿದ ಹೈಕೋರ್ಟ್, ಮುಷ್ಕರ ನಡೆಸದಂತೆ ಸಾರಿಗೆ ಸಂಘಟನೆಗಳಿಗೆ ತಕ್ಷಣವೇ ಜಾರಿಗೆ ಬರುವಂತೆ ನಿರ್ಬಂಧ ವಿಧಿಸಿದೆ.
ಸರ್ಕಾರಕ್ಕೆ ಹೈಕೋರ್ಟ್ ಸೂಚನೆ: ಸಾರಿಗೆ ಸಂಘಟನೆಗಳ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ಅವರೊಂದಿಗೆ ಕೂಡಲೇ ಚರ್ಚೆ ನಡೆಸಬೇಕು ಎಂದು ಕೋರ್ಟ್ ತಿಳಿಸಿದೆ. ಅಲ್ಲದೆ, ಸಾರಿಗೆ ಸಚಿವರೊಂದಿಗೆ ತುರ್ತು ಸಭೆ ನಡೆಸುವಂತೆ ಸೂಚಿಸಿ, ಸರ್ಕಾರ ಮತ್ತು ಸಾರಿಗೆ ಸಂಘಟನೆಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ದಿನಗೂಲಿ ನೌಕರರು, ರೋಗಿಗಳು ಹಾಗೂ ಸದ್ಯ ನಡೆಯುತ್ತಿರುವ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಬಸ್ ಬಂದ್ನಿಂದ ತೀವ್ರ ತೊಂದರೆಯಾಗಲಿದ್ದು, ಮುಷ್ಕರಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದ್ದು, ಈ ಹಿನ್ನೆಲೆ ಹೈಕೋರ್ಟ್ ನಾಳಿನ ಮುಷ್ಕರಕ್ಕೆ ಬ್ರೇಕ್ ಹಾಕಿದೆ ಹಾಗೂ ಸರ್ಕಾರ ಸಾರಿಗೆ ಸಂಘಟನೆಗಳೊಂದಿಗೆ ಚರ್ಚಿಸಲಿ ಎಂದು ಹೈಕೋರ್ಟ್ ಹೇಳಿದೆ.
ರಾಜ್ಯ ಸರ್ಕಾರವು ಈಗಾಗಲೇ ಜೂನ್ 30 ರವರೆಗೆ ‘ಎಸ್ಮಾ’ (Essential Services Maintenance Act) ಜಾರಿಗೊಳಿಸಿ ಸಾರಿಗೆ ಮುಷ್ಕರವನ್ನು ನಿಷೇಧಿಸಿರುವ ಬೆನ್ನಲ್ಲೇ, ಈ ಮುಷ್ಕರ ಕೈಗಾರಿಕಾ ವಿವಾದ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ನಲ್ಲಿ ಆಕ್ಷೇಪಿಸಲಾಗಿದೆ. ಪ್ರತಿದಿನ ರಾಜ್ಯದ ಸುಮಾರು 1.20 ಕೋಟಿ ಪ್ರಯಾಣಿಕರು, ವಿಶೇಷವಾಗಿ ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳೆಯರು ಬಸ್ ಅವಲಂಬಿತರಾಗಿದ್ದು, ಹೈಕೋರ್ಟ್ ಮಧ್ಯಪ್ರವೇಶಿಸಿ ಮುಷ್ಕರಕ್ಕೆ ಬ್ರೇಕ್ ಹಾಕಬೇಕೆಂದು ಅರ್ಜಿದಾರರು ವಿನಂತಿಸಿದ್ದರು.ಈ ಹಿನ್ನೆಲೆ ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ನಾಳಿನ ಮುಷ್ಕರಕ್ಕೆ ಬ್ರೇಕ್ ಹಾಕಿ ಮುಷ್ಕರ ನಡೆಸದಂತೆ ಸೂಚನೆ ನೀಡಿದೆ.






























