ಹೊಳಲ್ಕೆರೆ : ಆರೋಗ್ಯದಲ್ಲಿ ಏರುಪೇರಾದರೆ ತುರ್ತು ಸಂದರ್ಭಗಳಲ್ಲಿ ತತಕ್ಷಣ ಚಿಕಿತ್ಸೆ ಸಿಗಲಿ ಎನ್ನುವ ಕಾರಣಕ್ಕಾಗಿ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲಾಗುವುದೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಶಿವಗಂಗ ಗ್ರಾಮದಲ್ಲಿ 65 ಲಕ್ಷ ರೂ.ವೆಚ್ಚದಲ್ಲಿ ನೂತನ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಹೊಳಲ್ಕೆರೆಯಲ್ಲಿ 20 ಕೋಟಿ ರೂ.ವೆಚ್ಚದಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಿಸಿದ್ದೇನೆ. ಹತ್ತು ಕೋಟಿಯಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಕೂಡ ನಿರ್ಮಾಣವಾಗಿದೆ. ಚಿತ್ರಹಳ್ಳಿ ಕ್ರಾಸ್ನಲ್ಲಿ ಆರೋಗ್ಯ ಕೇಂದ್ರ, ಹದಿನೈದು ಕೋಟಿ ರೂ.ವೆಚ್ಚದಲ್ಲಿ ಹೆಚ್.ಡಿ.ಪುರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಿದ್ದೇನೆ. ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ತುಪ್ಪದಹಳ್ಳಿ, ಸಾಸಲು, ಶಿವಪುರದಲ್ಲಿಯೂ ಆಸ್ಪತ್ರೆಗಳನ್ನು ಕಟ್ಟಿಸಿದ್ದೇನೆಂದು ಹೇಳಿದರು.
ಚಿಕ್ಕಜಾಜೂರಿನಲ್ಲಿ ಹದಿನಾರು ಕೋಟಿ ರೂ.ಖರ್ಚು ಮಾಡಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಿದ್ದೇನೆ. ತಾಲ್ಲೂಕಿನಾದ್ಯಂತ ಹದಿನೇಳು ಕಡೆ ವಿದ್ಯುತ್ ಪವರ್ ಸ್ಟೇಷನ್ ಕಟ್ಟುವುದರ ಜೊತೆ ಜೊತೆಗೆ ಚಿಕ್ಕಜಾಜೂರಿನ ಕೋಟೆಹಾಳ್ ಬಳಿ ಹದಿಮೂರುವರೆ ಎಕರೆ ಪ್ರದೇಶದಲ್ಲಿ ಐದು ನೂರು ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಲಾಗುವುದು. ಟೆಂಡರ್ ಫೈನಲ್ ಆದ ಕೂಡಲೆ ಭೂಮಿ ಪೂಜೆ ಮಾಡುತ್ತೇನೆ. ಎಲ್ಲಾ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ತುಂಬಿಸುವುದು ನನ್ನ ಜವಾಬ್ದಾರಿ. ಚಾನಲ್ನಲ್ಲಿ ನೀರು ಹರಿದರೆ ಮೊದಲು ನೀರು ಬರುವುದು ಹೊಳಲ್ಕೆರೆಗೆ. ಬದ್ದತೆ, ಜವಾಬ್ದಾರಿಯಿಟ್ಟುಕೊಂಡು ನಿಮ್ಮಗಳ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆಂದರು.
ಭಾರತ ದೇಶದಲ್ಲಿ ಎಲ್ಲಿಯೂ ಎರಡನೆ ಲಿಫ್ಟ್ ಕೊಡುವುದಿಲ್ಲ. ಮಲಸಿಂಗನಹಳ್ಳಿ ಗುಡ್ಡದ ಮೇಲೆ ದೊಡ್ಡ ಡ್ಯಾಂ ಕಟ್ಟಿಸಿದ್ದೇನೆ. ಅಲ್ಲಿಂದ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುವುದು. ರಸ್ತೆ, ಶಾಲಾ-ಕಾಲೇಜು, ಆಸ್ಪತ್ರೆ, ಅಂಗನವಾಡಿ ಹೀಗೆ ಪ್ರತಿಯೊಂದರೆ ಕಡೆಗೂ ಗಮನ ಕೊಡುತ್ತಿದ್ದೇನೆ. ಕ್ಷೇತ್ರದಲ್ಲಿ ಎಲ್ಲಿಯೂ ಗದ್ದಲ ಗಲಾಟೆಗೆ ಅವಕಾಶ ಕೊಟ್ಟಿಲ್ಲ. ಎಲ್ಲರನ್ನು ಕುಟುಂಬದವರಂತೆ ಕಾಣುತ್ತಿದ್ದೇನೆ. 32 ವರ್ಷಗಳ ಕೆಳಗೆ ಪ್ರಥಮ ಬಾರಿಗೆ ಭರಮಸಾಗರದಿಂದ ಸ್ಪರ್ಧಿಸಿ ಎಂಎಲ್ಎ. ಆದವನು. ಐದು ವರ್ಷಗಳಲ್ಲಿ 386 ಹಳ್ಳಿಗಳಲ್ಲಿ ರಸ್ತೆಗಳನ್ನು ಮಾಡಿಸಿದ್ದರಿಂದ ಜನ ರಸ್ತೆ ರಾಜ ಎಂಬ ಬಿರುದು ನೀಡಿ ಎರಡನೆ ಸಾರಿಗೂ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರು. ಎಲ್ಲಿ ಯಾವ ಊರಿಗೆ ಏನು ಕೆಲಸ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆನ್ನುವ ಅರಿವಿಟ್ಟುಕೊಂಡಿದ್ದೇನೆ. ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡಿಸಿ ಎಂದು ಶಿವಗಂಗಾ ಗ್ರಾಮಸ್ಥರಲ್ಲಿ ಶಾಸಕ ಡಾ.ಎಂ.ಚಂದ್ರಪ್ಪ ಮನವಿ ಮಾಡಿದರು.
ಯುವ ಉದ್ಯಮಿ ನಾರದಮುನಿ ವಸಂತಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ್, ದಾಸಯ್ಯನಹಟ್ಟಿ ರಮೇಶ್, ಯೋಗೇಶ್, ಮೌನೇಶ್, ಚಂದ್ರಣ್ಣ, ದಿನೇಶ್
ಚಿತ್ರಲಿಂಗಪ್ಪ, ಸತೀಶ್ಕುಮಾರ್, ಮಂಜಣ್ಣ ಹಾಗೂ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿದ್ದರು.





























