ಚಿತ್ರದುರ್ಗ : ಉದ್ಯೋಗ ನೀಡುವಲ್ಲಿ ಸರ್ಕಾರ ನುಣುಚಿಕೊಳ್ಳುತ್ತಿರುವುದರಿಂದ ಸಾರ್ವಜನಿಕ ಹೂಡಿಕೆ ಕುಸಿಯುತ್ತಿದೆ. ಹೀಗಾದರೆ ಉದ್ಯೋಗ ಹೇಗೆ ಸೃಷ್ಟಿಯಾಗುತ್ತದೆ. ಸರ್ಕಾರಕ್ಕೆ ತಾಯಿ ಗುಣ, ಜನರನ್ನು ಸಲಹುವ ಜವಾಬ್ದಾರಿಯಿರಬೇಕು. ಪ್ರಶ್ನೆ ಮಾಡುವವರನ್ನು ಕ್ರಿಮಿನಲ್ಗಳಂತೆ ನೋಡಬಾರದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಟಿ.ಆರ್.ಚಂದ್ರಶೇಖರ್ ಹೇಳಿದರು.
ಕರ್ನಾಟಕ ರಾಜ್ಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ನಿವೃತ್ತ ಶಿಕ್ಷಕರ ಒಕ್ಕೂಟ ಜಿಲ್ಲಾ ಘಟಕ, ರೋಟರಿ ಕ್ಲಬ್ ಚಿನ್ಮೂಲಾದ್ರಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮತ್ತು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ವತಿಯಿಂದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಭಾರತದಲ್ಲಿ ನಿರುದ್ಯೋಗಿಗಳು : ಆದವರೋ ಇಲ್ಲ ಮಾಡಿದವರೋ ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಭಾರತದಲ್ಲಿ ನಿರುದ್ಯೋಗ ಒಂದು ಅವಲೋಕನ ಎಂಬ ವಿಷಯ ಕುರಿತು ಮಾತನಾಡಿದರು.
ನಿರುದ್ಯೋಗಕ್ಕೆ ದೊಡ್ಡ ಸ್ಥರಗಳಿವೆ. ಉನ್ನತ ಪದವಿ ಪಡೆದವರಿಗೂ ಉದ್ಯೋಗ ಸಿಗುವುದಿಲ್ಲ. ಲೇಬರ್ ಮಾರ್ಕೆಟ್ ದೊಡ್ಡ ತಾರತಮ್ಯದಿಂದ ಕೂಡಿರುವ ವ್ಯವಸ್ಥೆ. ನೋಟು ಅಮಾನ್ಯಿಕರಣದಿಂದ ಅಸಂಘಟಿತ ವಲಯ ದೊಡ್ಡ ಆಘಾತ ಅನುಭವಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಮಾಡುವವರು ಅಸಂಘಟಿತ ವಲಯದವರು. ಕೌಶಲ್ಯಕ್ಕು ಉದ್ಯೋಗಕ್ಕೂ ನಡುವೆ ಸಂಬಂಧವೇ ಇಲ್ಲದಂತಾಗಿದೆ. ಸಾಲ ಸೌಲಭ್ಯ, ಸಬ್ಸಿಡಿ, ಕೌಶಲ್ಯ ತರಬೇತಿಗಳನ್ನು ನೀಡುವ ಸರ್ಕಾರ ನಿರುದ್ಯೋಗಿಗಳಿಗೆ ಉದ್ಯೋಗ ನಿರ್ಮಿಸುವ ಜವಾಬ್ದಾರಿಯಿಂದ ದೂರವಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರದಿಂದ ಉದ್ಯೋಗ ಸೃಷ್ಠಿಸುವ ಒಂದೆ ಒಂದು ಕಾರ್ಯಕ್ರಮವಿಲ್ಲದಿದ್ದರೂ ಎಲ್ಲವನ್ನು ಜನ ಸಹಿಸಿಕೊಂಡು ಸುಮ್ಮನಿದ್ದಾರೆ. ದೇಶದಲ್ಲಿ ಹಸಿವು, ಬಡವತನವಿದೆ. ಅಭಿವೃದ್ದಿಯೆಂದರೆ ದಾನ, ದತ್ತಿಯಲ್ಲ. ಮನುಷ್ಯನ ಬದುಕು ದುರ್ಬಲವಾಗಿದೆ. ಸಾಮಾಜಿಕವಾಗಿ ಅನ್ಯಾಯ, ನೋವು ಅನುಭವಿಸುವವರ ಪರ ಆಳುವ ಸರ್ಕಾರಗಳು ನಿಲ್ಲಬೇಕು. ಪ್ರಶ್ನೆ ಕೇಳುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು. ಅಸಂಘಟಿತ ವಲಯದಲ್ಲಿ 65 ಕೋಟಿ ಜನರಿದ್ದಾರೆ. ದುಡಿಮೆ, ಬೆವರಿಗೆ ಗೌರವವಿಲ್ಲದಂತಾಗಿರುವುದನ್ನು ಯುವ ಜನಾಂಗ ಪ್ರತಿಭಟಿಸಬೇಕೆಂದು ತಿಳಿಸಿದರು.
ಭಾರತದಲ್ಲಿ ನಿರುದ್ಯೋಗಿಗಳು : ಆದವರೋ ಇಲ್ಲಾ ಮಾಡಿದವರೋ ಎನ್ನುವ ವಿಷಯ ಕುರಿತು ನಿವೃತ್ತ ಪ್ರಾಂಶುಪಾಲರು ಹಾಗೂ ಆರ್ಥಿಕ ಚಿಂತಕರಾದ
ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ ದೇಶದಲ್ಲಿರುವ ಅಸಮಾನತೆ ವ್ಯವಸ್ಥೆ ಪ್ರಜಾಪ್ರಭುತ್ವದ ಲಕ್ಷಣವಲ್ಲ. ನಿವೃತ್ತ ನೌಕರರಿಗೆ ಪಿಂಚಣಿ ಕೊಡುವುದರಲ್ಲಿ ಭಾರತ 52 ನೇ ಕಡೆಯ ಸ್ಥಾನದಲ್ಲಿದೆ. ಮೂರ್ಖತನದ ವ್ಯವಸ್ಥೆಗೆ ಒಗ್ಗಿಕೊಂಡಿದ್ದೇವೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೆ ನಿರುದ್ಯೋಗವಿದೆಯೆಂದು ಒಪ್ಪಿಕೊಂಡಿದ್ದಾರೆ. ಬಡತನ, ಜಾತಿ ಅವಮಾನಕ್ಕಿಂತಲೂ ನಿರುದ್ಯೋಗ ಎನ್ನುವುದು ಅತ್ಯಂತ ಅಮಾನವೀಯವಾದುದು. ನಿರುದ್ಯೋಗ ಎನ್ನುವುದು ಕೂಡ ಒಂದು ಮನಸ್ಥಿತಿ ಎಂದರು.
ಪ್ರತಿ ವರ್ಷ ಒಂದು ಕೋಟಿ ಪದವೀಧರರು ವಿಶ್ವವಿದ್ಯಾನಿಲಯಗಳಿಂದ ಹೊರ ಬರುತ್ತಿದ್ದಾರೆ. ನಿರುದ್ಯೋಗ ಯಾವ ದೇಶದಲ್ಲಿರುತ್ತೋ ಆ ದೇಶದಲ್ಲಿ ಬಡತನ, ಆರ್ಥಿಕ
ಅಸಮಾನತೆಯಿರುತ್ತದೆ. ಹೆಚ್ಚು ಪದವೀಧರ ನಿರುದ್ಯೋಗಿಗಳನ್ನು ಹೊಂದಿರುವ ದೇಶ ಭಾರತ. ಶಿಕ್ಷಣ ನಾಳಿನ ಬದುಕು ಎನ್ನುವ ನಿಖರತೆಯನ್ನು ಮಕ್ಕಳಿಗೆ ತಿಳಿಸಬೇಕು.
ಶಿಕ್ಷಣದ ಜೊತೆ ಕೌಶಲ್ಯ ಶಿಕ್ಷಣವೂ ಒಂದು ಭಾಗವಾಗಬೇಕು. ಇಚ್ಚಿತ ಉದ್ಯೋಗ ಕೈಗೊಳ್ಳುವ ರೀತಿಯ ಶಿಕ್ಷಣ ಬೇಕಾಗಿದೆ. ನಿರುದ್ಯೋಗ ಕೌಟುಂಬಿಕ ಅಶಾಂತಿಗೆ ಕಾರಣವಾಗುತ್ತಿದೆ. ಸರ್ಕಾರಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ಎಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲರು ಹಾಗೂ ನಿವೃತ್ತ ಶಿಕ್ಷಕರ ಒಕ್ಕೂಟದ ಅಧ್ಯಕ್ಷರಾದ ಪ್ರೊ.ಟಿ.ಹೆಚ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಶಾಪವಾಗಿ ಪರಿಣಮಿಸಿದೆ. ಇದಕ್ಕೆ ವ್ಯವಸ್ಥೆಯ ವೈಫಲ್ಯವೇ ಕಾರಣ. ಭಾರತದಲ್ಲಿ ನಿರುದ್ಯೋಗಿಗಳು ಆದವರೋ ಇಲ್ಲಾ ಮಾಡಿದವರೋ ಎನ್ನುವುದು ಇನ್ನು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಸಂದರ್ಭಕ್ಕೆ ತಕ್ಕಂತೆ ಇಂತಹ ಕಾರ್ಯಕ್ರಮಗಳು ಎಲ್ಲಿಯೂ ನಡೆದಿಲ್ಲ. ಸೈನ್ಸ್ ಪೌಂಢೇಶನ್ನವರು ವಿದ್ಯಾರ್ಥಿಗಳಿಗೆ ಇಂತಹ ಉಪನ್ಯಾಸ ಏರ್ಪಡಿಸಿರುವುದು ನಿಜಕ್ಕೂ ಅರ್ಥಪೂರ್ಣ ಎಂದು ಶ್ಲಾಘಿಸಿದರು.
ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷೆ ದಿಲ್ಷಾದ್ ಉನ್ನಿಸಾ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಬಿ.ಕೆ.ಶಿವರಶ್ಮಿ ಅಕ್ಕ, ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಹೆಚ್.ಎಸ್.ಟಿ.ಸ್ವಾಮಿ ಇವರುಗಳು ವೇದಿಕೆಯಲ್ಲಿದ್ದರು.






























