ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗೆ ಬಹಳ ಟೀಕೆಗೆ ಗುರಿಯಾಗಿದ್ದಾರೆ. ಶಾಸಕ ರವಿಕುಮಾರ್ ಗಾಣಿಗ,ರಶ್ಮಿಕಾ ಮಂದಣ್ಣ ವಿರುದ್ಧ ಸತತ ಟೀಕೆಗಳನ್ನು ಮಾಡಿದ್ದು, ಕಾರ್ಯಕ್ರಮಕ್ಕೆ ಕರೆಯಲು ಹೋದರೆ ಕರ್ನಾಟಕ ಎಲ್ಲಿದೆ ಎಂದು ರಶ್ಮಿಕಾ ಕೇಳಿದ್ದರು. ಆಕೆಗೆ ಸರಿಯಾಗಿ ಬುದ್ಧಿ ಕಲಿಸಬೇಕಿದೆ ಎಂದಿದ್ದರು. ಮುಂಬೈನ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ತಮ್ಮನ್ನು ತಾವು ಹೈದರಾಬಾದ್ನವರು ಎಂದು ಪರಿಚಯಿಸಿಕೊಂಡಿದ್ದು ಸಹ ಸಖತ್ ಟೀಕೆಗೆ ಕಾರಣವಾಗಿತ್ತು. ರಶ್ಮಿಕಾ ವಿರುದ್ಧ ಶಾಸಕ ರವಿಕುಮಾರ್, ಕನ್ನಡ ರಕ್ಷಣಾ ಪಡೆಗಳು ಟೀಕೆ, ನಿಂದನೆ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೆ ಕೊಡವ ನ್ಯಾಷನಲ್ ಕೌನ್ಸಿಲ್ನವರು ನಟಿಯ ಬೆಂಬಲಕ್ಕೆ ಬಂದಿದ್ದಾರೆ.
ಕೊಡಲ ನ್ಯಾಷನಲ್ ಕೌನ್ಸಿಲ್ನ ಅಧ್ಯಕ್ಷ ಎನ್ಯು ನಾಚಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಗೃಹ ಸಚಿವ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದು ರಶ್ಮಿಕಾ ಮಂದಣ್ಣಗೆ ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯಿಸಿದ್ದಾರೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿದ ರಶ್ಮಿಕಾ ಮಂದಣ್ಣ ತಮ್ಮ ಕಠಿಣ ಶ್ರಮ ಮತ್ತು ಪರಿಶ್ರಮದಿಂದ ಇಂದು ಭಾರತೀಯ ಚಿತ್ರರಂಗದಲ್ಲಿ ಅಪ್ರತಿಮ ಸ್ಥಾನ ಸಂಪಾದನೆ ಮಾಡಿದ್ದಾರೆ. ರಶ್ಮಿಕಾರ ಪರಿಶ್ರಮ, ಪ್ರತಿಭೆಯನ್ನು ಅರಿಯದ ಕೆಲವರು ಅನವಶ್ಯಕವಾಗಿ ಟೀಕೆ ಮಾಡುತ್ತಿದ್ದಾರೆ, ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದು ಬೆದರಿಕೆಗೆ ಸಮ ಎಂದು ಅವರು ಆರೋಪ ಮಾಡಿದ್ದಾರೆ.
‘ರಶ್ಮಿಕಾ ಮಂದಣ್ಣ ಒಬ್ಬ ಶ್ರೇಷ್ಠ ನಟಿ, ಅವರ ಸ್ವಂತ ಆಯ್ಕೆ ಮತ್ತು ಸ್ವಾತಂತ್ರ್ಯಗಳನ್ನು ನಾವು ಗೌರವಿಸಬೇಕು. ಯಾರದ್ದೋ ಸೂಚನೆಯಂತೆ, ಯಾರದ್ದೋ ಮರ್ಜಿಯಂತೆ ನಡೆದುಕೊಳ್ಳಬೇಕು ಎಂದು ನಾವು ಒತ್ತಾಯಿಸಬಾರದು. ಒಂದೊಮ್ಮೆ ಹೀಗೆ ಮಾಡಿದರೆ ಅದನ್ನು ಕೊಡವ ಫೋಬಿಯಾ ಎಂದು ಗುರುತಿಸಬೇಕಾಗುತ್ತದೆ. ರಶ್ಮಿಕಾರ ಸಮುದಾಯವನ್ನು ಗುರಿ ಮಾಡಿಕೊಂಡು ಹೇರುತ್ತಿರುವ ಬೆದರಿಕೆ ಎನ್ನುವ ಅರ್ಥ ಬರುತ್ತದೆ’ ಎಂದಿದ್ದಾರೆ ನಟಿ.
‘ಕಾವೇರಿ ನದಿಯನ್ನು ಬಹುವಾಗಿ ಪ್ರೀತಿಸುವ ಮಂಡ್ಯದ ಜನರನ್ನು ಪ್ರತಿನಿಧಿಸುವ ಶಾಸಕರು, ಕಾವೇರಿ ಮಾತೆಯ ಪ್ರೀತಿಯ ಪುತ್ರಿ ಮತ್ತು ಆ ಭಾಗದ ಹೆಮ್ಮೆಯ ಪುತ್ರಿ ರಶ್ಮಿಕಾ ಮಂದಣ್ಣ ಅವರನ್ನು ಟೀಕೆ ಮಾಡಿರುವುದು ವಿಪರ್ಯಾಸ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದಾಗಿ ಮತ್ತು ಜನರ ಆಶಯಗಳನ್ನು ಕಾಪಾಡುವುದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ಶಾಸಕರಾಗಿರುವಂಥಹವರು ಟೀಕಾ ವೈಖರಿ ಆಕ್ಷೇಪಾರ್ಹ ಎಂದು ಅವರು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಅವರು ಚಿತ್ರರಂಗದವರ ನೆಟ್ಟು-ಬೋಲ್ಟು ಟೈಟ್ ಮಾಡುವುದು ಗೊತ್ತಿದೆ ಎಂದು ಹೇಳಿದ ಬೆನ್ನಲ್ಲೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ರವಿಕುಮಾರ್ ರಶ್ಮಿಕಾ ಮಂದಣ್ಣ ಅವರ ಮೇಲೆ ವಾಕ್ಪ್ರಹಾರ ಮಾಡಿದ್ದರು. ಕಾರ್ಯಕ್ರಮಕ್ಕೆ ಕರೆಯಲು ಹೋದಾಗ ಕರ್ನಾಟಕದ ಬಗ್ಗೆ ತುಚ್ಛವಾಗಿ ಮಾತನಾಡಿದ್ದರು ಎಂದು ಆರೋಪ ಮಾಡಿದ್ದರು.