ಚಿತ್ರದುರ್ಗ : ಬಾಹ್ಯಾಕಾಶ ವಿಜ್ಞಾನಕ್ಕೆ ಕರ್ನಾಟಕದ ಬಹುಭಾಗ ಕೊಡುಗೆಯಿದೆ. ಎಚ್.ಎ.ಎಲ್. ಬಾಹ್ಯಾಕಾಶ, ಡಿ.ಆರ್.ಡಿ.ಓ. ರಾಜ್ಯದಲ್ಲಿದೆ. ಸಾಂಸ್ಕøತಿಕ, ವೈಜ್ಞಾನಿಕ, ಸಾಹಿತ್ಯಿಕವಾಗಿ ಚಿತ್ರದುರ್ಗ ಗುರುತಿಸಿಕೊಂಡಿದೆ ಎನ್ನುವುದು ಇಂದಿನ ಮಕ್ಕಳಿಗೆ ಗೊತ್ತಾಗಬೇಕಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಶ್ರೀನಾಥ್ ರತ್ನಾಕರ ಹೇಳಿದರು.
ಚಿತ್ರದುರ್ಗ ಸೈನ್ಸ್ ಫೌಂಡೇಷನ್(ರಿ) ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸಿಲಿಕಾನ್ ಇನ್ಸ್ಟಿಟ್ಯುಟ್ ಆಫ್ ಟೆಕ್ನಾಲಜಿ ಚಿತ್ರದುರ್ಗ ಇವುಗಳ ಸಂಯುಕ್ತಾಶ್ರಯದಲ್ಲಿ ಐ.ಎಂ.ಎ.ಹಾಲ್ನಲ್ಲಿ ಭಾನುವಾರ ವಿಜ್ಞಾನ ಲೇಖಕ ಹೆಚ್.ಎಸ್.ಟಿ.ಸ್ವಾಮಿ ರವರ ಕನ್ನಡ ವಿಜ್ಞಾನ ಕೃತಿ ನಾ ಕಂಡ ಖಗೋಳ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ವೈಚಾರಿಕ ಲೇಖನ ಬರೆಯುವಾಗ ಗುಂಡಿಗೆಯಿರಬೇಕು. ವಿಜ್ಞಾನಿಗಳನ್ನು ಟೀಕಿಸುವವರು, ದಾಳಿಕೋರರು ಇದ್ದಾರೆ. ವಿಜ್ಞಾನಗಳನ್ನು ಹೇಳುವಾಗ ಯಾರ ಮನಸ್ಸಿಗೂ ನೋವಾಗಬಾರದು. ಎಚ್ಚರಿಕೆಯಿಂದ ಇರಬೇಕು. ವಿಜ್ಞಾನಕ್ಕೆ ಸಂಬಂಧಿಸಿದ ಬಹಳಷ್ಟು ವಿಚಾರಗಳು ಗಂಭೀರವಾಗಿವೆ. ಗ್ರಹ, ನಕ್ಷತ್ರ, ಗ್ಯಾಲಕ್ಸಿಗೆ ಸಂಬಂಧಿಸಿದ ಲೇಖನಗಳಿರುವ ನಾ ಕಂಡ ಖಗೋಳ ಪುಸ್ತಕ ಮನೆ ಮನೆಗೆ ತಲುಪಬೇಕೆಂದು ತಿಳಿಸಿದರು.
ಜಾತಿ ವರ್ಗ ಹೇಗೆ ವರ್ಗಿಕರಣವಾಗಿದೆಯೋ ಅದೇ ರೀತಿ ವಿಜ್ಞಾನದಲ್ಲಿಯೂ ವರ್ಗಿಕರಣವಾಗಿದೆ. ಸಮಾಜದ ಒಳಿತಿಗಾಗಿ ವಿಜ್ಞಾನ ಯೋಚಿಸಬೇಕು. ವಿಜ್ಞಾನವೆಂದರೆ ಮತ್ತೊಬ್ಬರ ನಂಬಿಕೆ, ಧಾರ್ಮಿಕ ಆಚರಣೆಗಳ ವಿರುದ್ದವಾಗಿರಬಾರದು. ವಿಜ್ಞಾನಿಯಾದ ಕೂಡಲೆ ಅಹಂ ಬೇಡ. ಸದಾ ಎಚ್ಚರಿಕೆಯಿಂದಿರಬೇಕು. ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸಬೇಕಿದೆ. ವಿಜ್ಞಾನಕ್ಕೆ ಸಂಬಂಧಿಸಿದ 278 ಲೇಖನಗಳಿರುವ ಈ ಪುಸ್ತಕ ಪ್ರತಿಯೊಂದು ಶಾಲೆಗೂ ತಲುಪಬೇಕು. ಹೆಚ್.ಎಸ್.ಟಿ.ಸ್ವಾಮಿ ಮೊದಲಿನಿಂದಲೂ ವಿಜ್ಞಾನಕ್ಕೆ ಸಂಬಂಧಿಸಿದ ಕೆಲಸಗಳನ್ನು ಲೇಖನಗಳ ಮೂಲಕ ಮಾಡುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯೂ ಇಂತಹ ಚಟುವಟಿಕೆಗಳು ಜಾಸ್ತಿಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಅಧ್ಯಕ್ಷ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನೊಳಗೊಂಡಿರುವ ಹೆಚ್.ಎಸ್.ಟಿ.ಸ್ವಾಮಿರವರ ನಾ ಕಂಡ ಖಗೋಳ ಪುಸ್ತಕವನ್ನು ಪ್ರತಿಯೊಬ್ಬರು ಓದಿ ಮತ್ತೊಂದು ಪೀಳಿಗೆಗೆ ದಾಟಿಸುವ ಅಗತ್ಯವಿದೆ. ಆದಿ ಮಾನವನಿಂದ ಹಿಡಿದು ಆಧುನಿಕ ಮಾನವ ಇಷ್ಟೊಂದು ಸೌಲಭ್ಯಗಳನ್ನು ಪಡೆಯುತ್ತಿದ್ದಾನೆಂದರೆ ಅದಕ್ಕೆ ವಿಜ್ಞಾನ ಕಾರಣ. ವಿಜ್ಞಾನದಿಂದ ಮಾತ್ರ ಮೂಢನಂಬಿಕೆಯನ್ನು ಓಡಿಸಿ ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗಬಹುದೆಂದು ಹೇಳಿದರು.
ಯಾವುದು ವಿಜ್ಞಾನ, ಯಾವುದು ವಿಜ್ಞಾನ ಅಲ್ಲ ಎನ್ನುವುದನ್ನು ಮೊದಲು ಎಲ್ಲರೂ ತಿಳಿದುಕೊಳ್ಳಬೇಕು. ಬದುಕಿನ ಎಲ್ಲಾ ಮುಖಗಳಲ್ಲೂ ವಿಜ್ಞಾನ ಹಾಸು ಹೊಕ್ಕಾಗಿದೆ.
ಎಲ್ಲಿ ವಿಜ್ಞಾನವಿರುವುದಿಲ್ಲವೋ ಅಲ್ಲಿ ಸತ್ಯವಿಲ್ಲ. ಯಾರಲ್ಲಿ ವಿಜ್ಞಾನದ ಬಗ್ಗೆ ಅರಿವಿರುವುದಿಲ್ಲವೋ ಅಂತಹವರು ಹೆಚ್ಚು ಮೂಢನಂಬಿಕೆಗಳನ್ನು ಆಚರಿಸುವುದುಂಟು. ಹಾಗಾಗಿ ವಿಜ್ಞಾನವೆಂದರೆ ಏನು ಎನ್ನುವುದನ್ನು ತಿಳಿದುಕೊಳ್ಳಬೇಕು. ನಾ ಕಂಡ ಖಗೋಳ ಪುಸ್ತಕದಲ್ಲಿ ಸರಳ, ನೇರ, ಸಂವಹನವಿದೆ. ಪುಸ್ತಕಗಳು ಓದುಗರ ಹೃದಯ ಮತ್ತು ಮನಸ್ಸನ್ನು ತಲುಪದಿದ್ದರೆ ನಿರಾಕರಣೆಗೊಳಗಾಗಬೇಕಾಗುತ್ತದೆಂದು ನುಡಿದರು.
ಬರಹಗಾರರಿಗೆ ನಿಸರ್ಗ ತನ್ನಷ್ಟಕ್ಕೆ ತಾನೆ ಶಕ್ತಿ ಕೊಡುತ್ತದೆ. ಪುಸ್ತಕ ಜ್ಞಾನವನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾಯಿಸಬೇಕು. ವಿಜ್ಞಾನಿಗಳಿಗೆ ಪ್ರಾಂಜಲ ಮನಸ್ಸಿರಬೇಕು. ಲೇಖಕ ಕಲಾವಿದ ಬೆಳೆಯಬೇಕಾದರೆ ಕಲೆ ಬಹಳ ಮುಖ್ಯ. ಹೆಚ್.ಎಸ್.ಟಿ. ಸ್ವಾಮಿರವರಿಗೆ ವಿಜ್ಞಾನದ ಲೇಖನಗಳನ್ನು ಬರೆಯುವ ಕಲೆ ಸಿದ್ದಿಸಿದೆ. ಗ್ರಂಥಾಲಯದಲ್ಲಿ ಆಕರ ಗ್ರಂಥವಾಗುವ ಎಲ್ಲಾ ಅರ್ಹತೆ ಈ ಪುಸ್ತಕಕ್ಕಿದೆ. ವಿಜ್ಞಾನವನ್ನು ಮಾನವೀಯ ನೆಲೆಯಿಂದ ನೋಡಬೇಕು. ಪುಸ್ತಕ ಬರೆಯುವವರ ಮೇಲೆ ಹೊಣೆಗಾರಿಕೆಯಿದೆ. ಒಳ್ಳೆಯ ಪುಸ್ತಕಕ್ಕೆ ಮುಖ ಪುಟವೆ ಭೂಷಣ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ಎಂ.ವೀರೇಶ್ ಮಾತನಾಡುತ್ತ ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಚಿತ್ರದುರ್ಗದಲ್ಲಿ ಸಾಕಷ್ಟು ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಾ ಬರುತ್ತಿದೆ. ಖಗೋಳ ಕುರಿತ ಕಾರ್ಯಕ್ರಮಗಳು ಚಿತ್ರದುರ್ಗಕ್ಕೆ ಸೀಮಿತವಾಗಿರದೆ ರಾಜ್ಯ ವ್ಯಾಪ್ತಿಯಾಗಿ ಪಸರಿಸಲಿ. ಖಗೋಳ ವಿಜ್ಞಾನದಲಿವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಬೇಕಾಗಿರುವುದರಿಂದ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಪ್ರೋತ್ಸಾಹಿಸಬೇಕು. ಇಂತಹ ಕೃತಿಗಳು ಎಲ್ಲರ ಕೈ ಸೇರಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೆಚ್.ಎಸ್.ಟಿ.ಸ್ವಾಮಿರವರ ನಾ ಕಂಡ ಖಗೋಳ ಪುಸ್ತಕದ ಪ್ರಯೋಜನ ಪಡೆಯಲಿ ಎಂದು ಆಶಿಸಿದರು.
ವಿಜ್ಞಾನ ಲೇಖಕ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಕಾರ್ಯದರ್ಶಿ ಹೆಚ್.ಎಸ್.ಟಿ. ಸ್ವಾಮಿ ಮಾತನಾಡಿ ವಿಜ್ಞಾನಿಗಳನ್ನು ಕರೆಸಿ ಚಿತ್ರದುರ್ಗದಲ್ಲಿ ಮನೆ ಮನೆಗೆ ವಿಜ್ಞಾನ ಕಾರ್ಯಕ್ರಮಗಳನ್ನು ತಲುಪಿಸಿದ್ದೇನೆ. ಪ್ರತಿ ವಾರವು ಎರಡೆರಡು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಇದರಿಂದ ವಿಜ್ಞಾನಕ್ಕೆ ಸಂಬಂಧಿಸಿದಂತೆ
ಅಪಾರ ಜ್ಞಾನ ಸಂಪಾದಿಸಿದ್ದೇನೆ. ಎಂಟು ವರ್ಷಗಳ ಕಾಲ ಆರುನೂರು ಲೇಖನಗಳನ್ನು ಬರೆದಿದ್ದೇನೆ. ಎಲ್ಲರ ಸಹಕಾರದಿಂದ ಆರು ನೂರು ಪುಟಗಳ ಪುಸ್ತಕವನ್ನು ಹೊರತರಲು ಸಾಧ್ಯವಾಯಿತು ಎಂದು ಬಂಧುಗಳು, ಸ್ನೇಹಿತರು ಹಾಗೂ ಕುಟುಂಬದವರನ್ನು ಸ್ಮರಿಸಿದರು.
ಕೋರೋನಾ ಸಂದರ್ಭದಲ್ಲಿಯೆ ಈ ಪುಸ್ತಕ ಲೋಕಾರ್ಪಣೆಯಾಗಬೇಕಿತ್ತು. ಕಾರಣಾಂತರಗಳಿಂದ ತಡವಾಯಿತು. ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯಲು ಎಲ್ಲರೂ ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದಾರೆ. ದೊಡ್ಡವರು ಈ ಪುಸ್ತಕವನ್ನು ಓದಿ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸಿ ಎಂದು ಹೆಚ್.ಎಸ್.ಟಿ. ಸ್ವಾಮಿ ಮನವಿ ಮಾಡಿದರು.
ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಿಲಿಕಾನ್ ಇನ್ಸ್ಟಿಟ್ಯುಟ್ ಆಫ್ ಟೆಕ್ನಾಲಜಿಯ ವ್ಯವಸ್ಥಾಪಕ ಡಿ.ಗೋಪಾಲಸ್ವಾಮಿ ನಾಯಕ, ಚಿತ್ರದುರ್ಗ ಸೈನ್ಸ್ ಫೌಂಡೇಷನ್ ನಿರ್ದೇಶಕ ಡಾ.ಈ.ರುದ್ರಮುನಿ, ಖಜಾಂಚಿ ಕೆ.ವಿ.ನಾಗಲಿಂಗರೆಡ್ಡಿ ಇವರುಗಳು ವೇದಿಕೆಯಲ್ಲಿದ್ದರು.
ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ, ಯಶೋಧ ರಾಜಶೇಖರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಶಿವಲಿಂಗಪ್ಪ, ಬಸವರಾಜಪ್ಪ, ಕೃಷ್ಣಮೂರ್ತಿ, ಸಿ.ಆರ್.ಮೂರ್ತಿ ಹಾಗೂ ಹೆಚ್.ಎಸ್.ಟಿ.ಸ್ವಾಮಿರವರ ಕುಟುಂಬದವರು ಸೇರಿದಂತೆ ಅನೇಕರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು

































