ಸಿಂಗಾಪುರ : ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ, ಒಳಗೆ ಸಿಲುಕಿದ್ದವರ ರಕ್ಷಣೆಗೆ ನೆರವಾಗಿದ್ದ ನಾಲ್ವರು ಭಾರತೀಯರನ್ನು ಸಿಂಗಾಪುರ ಸರ್ಕಾರ ಗೌರವಿಸಿದೆ.
ಕೇಂದ್ರ ಸಿಂಗಾಪುರದಲ್ಲಿರುವ ಕಟ್ಟಡದಲ್ಲಿರುವ ಅಡುಗೆ ಕಲಿಸುವ ಶಾಲೆಯಲ್ಲಿ ಏಪ್ರಿಲ್ 8ರಂದು ಈ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಕಟ್ಟಡದ ಒಳಗೆ 16 ಮಕ್ಕಳು ಹಾಗೂ ನಾಲ್ವರು ಯುವಕರು ಸಿಲುಕಿಕೊಂಡಿದ್ದರು. ಮಕ್ಕಳ ಚೀರಾಟ ಹಾಗೂ ಕಟ್ಟಡದ ಮೂರನೇ ಮಹಡಿಯಲ್ಲಿ ದಟ್ಟ ಹೊಗೆ ಆವರಿಸಿರುವುದನ್ನು ಗಮನಿಸಿದ ಭಾರತ ಮೂಲದ ನಾಲ್ವರು ವಲಸೆ ಕಾರ್ಮಿಕರು ತಕ್ಷಣವೇ ಸ್ಥಳಕ್ಕೆ ಧಾವಿಸಿ 10 ಮಕ್ಕಳನ್ನು ರಕ್ಷಿಸಿದ್ದರು.
ಸಿಂಗಾಪುರ ನಾಗರಿಕ ರಕ್ಷಣಾ ಪಡೆ (ಎಸ್ಸಿಡಿಎಫ್) ಸಿಬ್ಬಂದಿ ಸ್ಥಳಕ್ಕೆ ಬರುವ ಮುನ್ನ ಇಂದ್ರಜಿತ್ ಸಿಂಗ್, ಸುಬ್ರಮಣಿಯನ್ ಶರಣ್ರಾಜ್, ನಾಗರಾಜನ್ ಅಂಬರಾಸನ್ ಮತ್ತು ಶಿವಾಮಿ ವಿಜಯರಾಜ್ ಅವರು 10 ಮಕ್ಕಳನ್ನು ಕಾಪಾಡಿದ್ದರು. ಹೀಗಾಗಿ ಈ ನಾಲ್ವರು ವಲಸೆ ಕಾರ್ಮಿಕಕರ ಯೋಗಕ್ಷೇಮ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುವ ಮಾನವಸಂಪನ್ಮೂಲ ಸಚಿವಾಲಯದ ‘ಭರವಸೆ, ರಕ್ಷಣೆ ಮತ್ತು ಒಪ್ಪಂದ’ (ಎಸಿಇ) ಗುಂಪು, ‘ಫ್ರೆಂಡ್ಸ್ ಆಫ್ ಎಸಿಇ’ ನಾಣ್ಯಗಳನ್ನು ನೀಡಿ ಗೌರವಿಸಿದೆ