ಚಿತ್ರದುರ್ಗ: ಚಿತ್ರದುರ್ಗ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ಸೋಮವಾರ ನಡೆದ ಚುನಾವಣೆಯಲ್ಲಿ, ಅಧ್ಯಕ್ಷರಾಗಿ ಸುಮಿತ.ಬಿ.ಎನ್ ಹಾಗೂ ಉಪಾಧ್ಯಕ್ಷರಾಗಿ ಶ್ರೀದೇವಿ.ಜಿ.ಎಸ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಘೋಷಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಸದಸ್ಯರಾದ ಸುಮಿತ.ಬಿ.ಎಂ ಹಾಗೂ ತಾರಕೇಶ್ವರಿ ಎಸ್.ಸಿ, ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯರಾದ ಶ್ರೀದೇವಿ.ಜಿ.ಎಸ್ ಹಾಗೂ ರೋಹಿಣಿ.ಬಿ.ಎಸ್ ನಾಮಪತ್ರ ಸಲ್ಲಿಸಿದ್ದರು. ಯಾರೂ ಕೂಡ ನಾಮಪತ್ರ ಹಿಂಪಡೆಯದ ಕಾರಣ ಮತದಾನ ಪ್ರಕ್ರಿಯೆ ಕೈಗೊಳ್ಳಲಾಯಿತು.
ಚಿತ್ರದುರ್ಗ ನಗರಸಭೆ 35 ಜನ ಚುನಾಯಿತ ಸದಸ್ಯ ಬಲ ಹೊಂದಿದೆ. ಈ ಪೈಕಿ ಓರ್ವ ಸದಸ್ಯರು ಮೃತ ಪಟ್ಟಿದ್ದರಿಂದ ಚುನಾಯಿತ ನಗರಸಭೆ ಸದಸ್ಯರ ಬಲ 34ಕ್ಕೆ ಇಳಿಕೆಯಾಗಿತ್ತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ನಗರಸಭೆ ವ್ಯಾಪ್ತಿ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹಾಜರಾಗಿದ್ದರು.
ಸೋಮವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಒಟ್ಟು 35 ಸದಸ್ಯರು ಮತ ಚಲಾಯಿಸಿದರು. ಈ ಪೈಕಿ ಸುಮಿತ.ಬಿ.ಎನ್ ಹಾಗೂ ಶ್ರೀದೇವಿ.ಜಿ.ಎಸ್ ತಲಾ 22 ಮತಗಳನ್ನು ಪಡೆಯುವ ಮೂಲಕ ಅನುಕ್ರಮವಾಗಿ ನಗರಸಭೆ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಗಾದಿಗೆ ಏರಿದ್ದಾರೆ.
ಚುನಾವಣಾ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ನಗರದ ಅಭಿವೃದ್ಧಿಗಾಗಿ ಸದಸ್ಯರು ಸುಮಿತ.ಬಿ.ಎನ್ ಅವರನ್ನು ಅಧ್ಯಕ್ಷರಾಗಿ ಹಾಗೂ ಶ್ರೀದೇವಿ.ಜಿ.ಎಸ್ ಉಪಾಧ್ಯಕ್ಷರನ್ನಾಗಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಇವರ ಆಯ್ಕೆ ಸಹರಿಸಿದ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.
ನೂತನ ಅಧ್ಯಕ್ಷೆ ಸುಮಿತ. ಬಿ.ಎನ್. ಮಾತನಾಡಿ ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಒತ್ತು ನೀಡಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ನೂತನ ಉಪಾಧ್ಯಕ್ಷೆ ಶ್ರೀದೇವಿ.ಜಿ.ಎಸ್ ಮಾತನಾಡಿ ಶಾಸಕರ ನೇತೃತ್ವದಲ್ಲಿ ವಾರ್ಡ್ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಮುಂದೆಯೂ ಜನಪ್ರತಿನಿಧಿಗಳ ಸಹಕಾರ ಪಡೆದು ಅಭಿವೃದ್ಧಿ ಕಾರ್ಯ ಮುಂದುವರೆಸುವುದಾಗಿ ತಿಳಿಸಿದರು.
ಚುನಾವಣೆಯ ವೇಳೆ ತಹಶೀಲ್ದಾರ್ ಡಾ.ನಾಗವೇಣಿ ಹಾಗೂ ನಗರಸಭೆ ಆಯುಕ್ತೆ ರೇಣುಕಾ.ಎಂ ಉಪಸ್ಥಿತರಿದ್ದರು.
				
															
                    
                    
                    
                    
                    

































