ಬೆಂಗಳೂರು : ‘ನನ್ನ ಜೀವನದ ಅಧೋಗತಿಗೆ ಮುನಿರತ್ನ ಕಾರಣ’, ನಾನು ಸುಮ್ಮನೇ ಬಿಡಲ್ಲ..!

ಬೆಂಗಳೂರು : ರಾಜರಾಜೇಶ್ವರಿನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಇದೀಗ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮೇಲೆ 2021 ರಲ್ಲಿ ಯುವತಿಯೋರ್ವಳು ಇಂಥದ್ದೇ ಆರೋಪ ಮಾಡುವ ಮೂಲಕ ರಮೇಶ್ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತೀವ್ರ ಮುಖಭಂಗ ಅನುಭವಿಸುವಂತಾಗಿತ್ತು. ಅದರ ಬೆನ್ನಲ್ಲೇ ಇದೀಗ ಶಾಸಕ ಮುನಿರತ್ನ ವಿರುದ್ಧವೂ ಅಂಥದ್ದೇ ಆರೋಪ ಕೇಳಿ ಬಂದಿದೆ..! ಏನಿದು ಆರೋಪ..? ಮುಸುಕುಧಾರಿ ಮಹಿಳೆಯೊಬ್ಬಳು ಫೇಸ್ ಬುಕ್ ನಲ್ಲಿ ವಿಡಿಯೋವೊಂದನ್ನು ಹಾಕಿದ್ದು, ಶಾಸಕ ಮುನಿರತ್ನ ವಿರುದ್ಧ ಇಂದು ಬೆಳಗ್ಗೆ ಗಂಭೀರ ಆರೋಪ ಮಾಡಿದ್ದಾಳೆ. ಶಾಸಕ ಮುನಿರತ್ನ ನನ್ನ ಬಾಳನ್ನೇ ಹಾಳು ಮಾಡಿದ್ದಾರೆ. ನನ್ನ ಜೀವನದ ಅಧೋಗತಿಗೆ ಈ ಮಿನಿಸ್ಟರ್ ನೇ ಕಾರಣ. ನನ್ನನ್ನು‌ ಬಳಸಿಕೊಂಡು ಹನಿಟ್ರ್ಯಾಪ್ ಮಾಡಿದ್ದಾರೆ. ಎಲ್ಲ ಪ್ಲಾನ್ ಮಾಡಿಕೊಂಡು‌ ನನ್ನಿಂದ ಇಂಥ ನೀಚ ಕೆಲಸ ಮಾಡಿಸಿದ್ದಾರೆ.‌ ಅಲ್ಲದೇ ನನಗೆ ಮೋಸ ಮಾಡಿದ್ದಾರೆ. ನಾನು ಶಾಸಕ ಮುನಿರತ್ನ ಅವರನ್ನು ಸುಮ್ಮನೇ ಬಿಡೋದಿಲ್ಲ.‌ ನನ್ನಂತೆ ಇತರ ಯಾವ ಹೆಣ್ಣು ಮಕ್ಕಳ ಬಾಳೂ ಹಾಳಾಗಬಾರದು ಎಂದು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಮುಖಕ್ಕೆ ಬಟ್ಟೆ ಸುತ್ತಿಕೊಂಡು ಮಾತನಾಡುವ ಈಕೆ ಯಾರು? ಎಂಬ ಬಗ್ಗೆ ಇದೀಗ ಜಿಜ್ಞಾಸೆ ಉಂಟಾಗಿದ್ದು, ಶಾಸಕರನ್ನು ಸುಮ್ಮನೇ ಬಿಡಲ್ಲ ಅಂತಾ ಖಡಕ್ಕಾಗಿ ಹೇಳಿದ್ದನ್ನು ಗಮನಿಸಿದರೆ ಈಕೆಯ ಹಿಂದೆ ಯಾರೋ ಪ್ರಭಾವಿ ರಾಜಕಾರಣಿ ಇರಬಹುದೆಂಬ ಶಂಕೆ ಮೂಡುವುದು ಸಹಜವೇ. ಇನ್ನು ಸಿಡಿ, ಹನಿಟ್ರ್ಯಾಪ್, ವಿಡಿಯೋ ಅಂತಾ ಕೇಳಿ ಬಂದಿರೋ ತಮ್ಮ ಮೇಲಿನ ಆರೋಪದ ಬಗ್ಗೆ ಶಾಸಕ ಮುನಿರತ್ನ ಪ್ರತಿಕ್ರಿಯೆ ನೀಡಬೇಕಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement