ಬೆಂಗಳೂರು: ಬಿಎಂಆರ್ಸಿಎಲ್ನ ಕಾಮಗಾರಿಗಳ ಹಿನ್ನೆಲೆ ಬೆಂಗಳೂರಿನ ವಿವಿಧೆಡೆ ಇನ್ನೂರ ಐವತ್ತೇಳು ಮರಗಳನ್ನು ಸ್ಥಳಾಂತರಗೊಳಿಸುವ ಮನವಿಗೆ ಕೊನೆಗೂ ಹೈಕೋರ್ಟ್ನ ಅನುಮತಿ ದೊರೆತಿದೆ. ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾ. ಕೃಷ್ಣ ದೀಕ್ಷಿತ್ ಅವರ ವಿಭಾಗೀಯ ಪೀಠ ಕೆಲವೊಂದು ಷರತ್ತುಗಳ ಮೇರೆಗೆ ಬಿಎಂಆರ್ಸಿಎಲ್ನ ಮನವಿಯನ್ನು ಪುರಸ್ಕರಿಸುವ ಮೂಲಕ ಬೆಂಗಳೂರು ಮೆಟ್ರೋ ರೈಲು ನಿಗಮದ ಕಾರ್ಯಗಳಿಗೆ ಗ್ರೀನ್ ಸಿಗ್ನಲ್ ನೀಡಿತು. ಆದರೆ, ಇದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದ ಪರಿಸರವಾದಿಗಳು ಮತ್ತು ಈ ಬಗ್ಗೆ ಹೈಕೋರ್ಟ್ಗೆ ತಕರಾರು ಸಕ್ಕಿಸಿದ್ದ ಬೆಂಗಳೂರು ಎನ್ವಿರಾನ್ ಮೆಂಟ್ ಟ್ರಸ್ಟ್ ಗೆ ಹಿನ್ನಡೆಯಾದಂತಾಗಿದೆ. ಏನಿದು ಕೇಸ್? ಬೆಂಗಳೂರಿನಲ್ಲಿ ಬಿಎಂಆರ್ಸಿಎಲ್ ವತಿಯಿಂದ ನಡೆಸಲಾಗುತ್ತಿರುವ ಮೆಟ್ರೋ ರೈಲು ನಿಲ್ದಾಣ ಮತ್ತು ಮೇಲ್ಸೇತುವೆ ಕಾಮಗಾರಿಗಳ ಹಿನ್ನೆಲೆ ಕಾಮಗಾರಿ ಜಾಗದಲ್ಲಿ ಬರು ಮರಗಳನ್ನು ಕಡಿಯಬೇಕು. ಇಲ್ಲವೇ ಅವುಗಳನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರ ಮಾಡಬೇಕಿದೆ. ಇದಕ್ಕೆ ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಬಿಎಂಆರ್ ಸಿಎಲ್ ಮನವಿಯನ್ನು ಪುರಸ್ಕರಿಸಬಾರದು ಎಂದು ಪರಿಸರ ಸಂಘಟನೆಯ ಭಾಗವಾಗಿರುವ ಟ್ರಸ್ಟ್ವೊಂದು ಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾಮಗಾರಿಗಳ ನೆಪದಲ್ಲಿ ನಗರದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದ್ದು, ಇದರಿಂದ ಪರಿಸರ ನಾಶವಾಗುತ್ತಿದೆ. ಇದಕ್ಕೆ ನ್ಯಾಯಾಲಯ ಅವಕಾಶ ಕೊಡಬಾರದು ಅಂತಾ ವಾದಿಸಲಾಗಿತ್ತು. ಎರಡೂ ಕಡೆಯ ವಾದ ವಿವಾದಗಳನ್ನು ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠ ಕೆಲವೊಂದು ಷರತ್ತುಗಳನ್ನು ವಿಧಿಸಿ ಮರಗಳ ತೆರವಿಗೆ ಗ್ರೀನ್ ಸಿಗ್ನಲ್ ನೀಡಿದೆ.