ಜಿಲ್ಲಾ ವಕೀಲರ ಸಂಘ : “ರಾಜವೀರ ಮದಕರಿನಾಯಕ”ಕ್ಕೆ ಭರ್ಜರಿ‌ ತಾಲೀಮು

ಚಿತ್ರದುರ್ಗ:   ಜಿಲ್ಲಾ ವಕೀಲರ ಸಂಘ ಚಿತ್ರದುರ್ಗ ಹಾಗೂ ಜಿಲ್ಲಾ ವಕೀಲರ ಸಾಂಸ್ಕೃತಿಕ ಬಳಗ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 13 ರಂದು ಮದಕರಿ ನಾಯಕ ಜಯಂತಿ ಹಾಗೂ ದಸರಾ ಹಬ್ಬದ ಅಂಗವಾಗಿ ರಾಜವೀರ ಮದಕರಿ ನಾಯಕ ಎಂಬ ಐತಿಹಾಸಿಕ ನಾಟಕ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರೂ ಹಾಗೂ ನಾಟಕದ ನಿರ್ದೇಶಕರಾದ ಎಸ್. ವಿಜಯಕುಮಾರ್ ಹೇಳಿದರು.

ವಕೀಲರ ಭವನದಲ್ಲಿ ಹಮ್ಮಿಕೊಂಡಿದ್ದ ರಾಜವೀರ ಮದಕರಿ ನಾಯಕ ಎಂಬ ಐತಿಹಾಸಿಕ ನಾಟಕದ ಅಂತಿಮ ತಾಲೀಮು ನಿರ್ದೇಶನದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,  ಚಿತ್ರದುರ್ಗ ಜಿಲ್ಲಾ  ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರೋಣ್ ವಾಸುದೇವ್ ಹಾಗೂ ಅಪರ ಜಿಲ್ಲಾ ನ್ಯಾಯಾಧೀಶರುಗಳಾದ ಶಂಕರಪ್ಪ ನಿಂಬಣ್ಣ ಕಲ್ಕಣಿ ಹಾಗೂ ಗಂಗಾಧರ ಹಡಪದ ಕಾನೂನು ಸೇವಾ ಪ್ರಾಧಿಕಾರದ ವಿಜಯ್ ಅವರುಗಳ ಸಮ್ಮುಖದಲ್ಲಿ ಪೋಸ್ಟರ್ ( ಬಿತ್ತಿಪತ್ರ) ಗಳನ್ನು ಲೋಕಾರ್ಪಣೆ ಮಾಡುವ‌ ಮೂಲಕ ನಗರ ಸೇರಿದಂತೆ ಇಡೀ ಜಿಲ್ಲಾಧ್ಯಂತ  ಪ್ರಚಾರ ಮಾಡಲಾಗಿದ್ದು ಈ ಬಾರಿ ಸುಮಾರು ಹತ್ತು ಸಾವಿರ ಜನರ ನಿರೀಕ್ಷೆ ಇಡಲಾಗಿದೆ ಎಂದರು.

ಜಿಲ್ಲಾ ವಕೀಲರ ಸಾಂಸ್ಕೃತಿಕ ಕಲಾ ಬಳಗದ ವ್ಯವಸ್ಥಾಪಕರಾದ ಹಿರಿಯ ವಕೀಲರಾದ  ಪಿ.ಆರ್ ವೀರೇಶ್ ಮಾತನಾಡಿ, ಚಿತ್ರದುರ್ಗ ಜಿಲ್ಲಾ ವಕೀಲರ ಸಾಂಸ್ಕೃತಿಕ ಕಲಾ ಬಳಗದಿಂದ ರಾಜ್ಯದ ವಿವಿಧೆಡೆ ಹಲವು ಕ್ರೀಡೆಗಳು ಮತ್ತು ಗಾಯನ, ನೃತ್ಯ ಮತ್ತು ಜಾನಪದ ಸಮೂಹ ಗೀತೆ ಸೇರಿದಂತೆ ಹಲವು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದು ಚಿತ್ರದುರ್ಗದ ವಕೀಲರು ರಂಗಭೂಮಿಯಲ್ಲೂ ಖಡಕ್ ಪ್ರದರ್ಶನ ನೀಡಲು ತಯಾರಾಗಿದ್ದಾರೆ ಎಂದರು.

Advertisement

ಎಸ್. ವಿಜಯಕುಮಾರ್ ಅಧ್ಯಕ್ಷರಾಗಿದ್ದಾಗ  ಆಶಾಲತಾ ಎಂಬ ಸಾಮಾಜಿಕ ನಾಟಕ, ನಂತರ ಸಿ. ಶಿವು ಯಾದವ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ  ಕುರುಕ್ಷೇತ್ರ ಪೌರಾಣಿಕ ನಾಟಕ ಎರಡು ಬಾರಿ ಅದ್ಭುತವಾಗಿ ಮಾಡಿದ್ದು ಇದೀಗ ವೈ.ತಿಪ್ಪೇಸ್ವಾಮಿ ಅಧ್ಯಕ್ಷರಾಗಿರುವಾಗ ರಾಜವೀರ ಮದಕರಿನಾಯಕ ನಾಟಕವನ್ನು   ಮದಕರಿನಾಯಕ ಜಯಂತಿ ಅಂಗವಾಗಿ ಮತ್ತು ದಸರಾ ಹಬ್ಬದ ಅಂಗವಾಗಿ ಅಕ್ಟೋಬರ್ 13 ರ ಭಾನುವಾರ ಪ್ರದರ್ಶನ ಮಾಡಲಿದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹ ನೀಡಿ ಎಂದರು.

 

 

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಅನಿಲ್ ಕುಮಾರ್, ಪ್ರಧಾನ‌ ಕಾರ್ಯದರ್ಶಿ ಆರ್. ಗಂಗಾಧರ್  ಉತ್ತಮ ಪ್ರೋತ್ಸಾಹದೊಂದಿಗೆ  ಸಂಗೀತ ಶಿಕ್ಷಕರಾಗಿ ಜಿ.ಮೂಗಬಸಪ್ಪ, ನಾಟಕ ತರಬೇತುದಾರರಾಗಿ, ಎಂ.ಎಚ್ ಮರಿಸ್ವಾಮಿ ಅವರ ನೇತೃತ್ವದಲ್ಲಿ ಆ13 ರಂದು ಸಂಜೆ 7 ಗಂಟೆಗೆ ತುಮಕೂರಿನ ಶ್ರೀ ಲತಾ ಹೈಡ್ರಾಲಿಕ್ ಆಟೋಮೇಟಕ್ ಎಲ್.ಇ.ಡಿ.ಡ್ರಾಮ ಸೀನರಿಯಲ್ಲಿ  ಡಿ.ಟಿ.ಎಸ್ ಧ್ವನಿವರ್ಧಕ ಯಂತ್ರಗಳಿಂದ  ಝಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕೃತವಾದ ಭವ್ಯ ರಂಗ ಸಜ್ಜಿಕೆಯಲ್ಲಿ ವಕೀಲರು ರೋಚಕ ಇತಿಹಾಸದ ನಾಟಕವನ್ನು   ಪ್ರಪ್ರಥಮ ಬಾರಿಗೆ ಚಿತ್ರದುರ್ಗದ ವಕೀಲರು ಅಭಿನಯಿಸಲಿದ್ದಾರೆ.

ಪಾತ್ರವರ್ಗದಲ್ಲಿ ರಾಜವೀರ ಮದಕರಿನಾಯಕರಾಗಿ ಎಸ್.ವಿದ್ಯಾಧರ, ದೊಡ್ಡ ಮದಕರಿನಾಯಕರಾಗಿ ಎನ್. ಶರಣಪ್ಪ, ಶಾಂತವೀರ ಮುರುಘಾ ಸ್ವಾಮಿಜಿಯಾಗಿ ಜಿ.ಸಿ.ದಯಾನಂದ, ಸಿದ್ದಪುರುಷರಾಗಿ ಟಿ. ಶಿವಾರಾಧ್ಯ, ಪರಶುರಾಮ ನಾಯಕರಾಗಿ ಎಂ.ಮೂರ್ತಿ, ಭರಮಣ್ಣ ನಾಯಕರಾಗಿ ಟಿ.ಭೋಸಯ್ಯ,  ಹೈದರಾಲಿಖಾನ್ ಪಾತ್ರದಲ್ಲಿ ಶಿವುಯಾದವ್ ,ಕೃಷ್ಣಪ್ಪ ನಾಯಕರಾಗಿ ಎಂ.ಕೆ.ಲೋಕೇಶ್, ನಿಡುಗಲ್ ದೊರೆ ಕಾಮರಾಜರಾಗಿ ಟಿ.ರವಿ ಸಿದ್ದಾರ್ಥ,  ಸೋಮಶೇಖರ್ ನಾಯಕರಾಗಿ ಸೋಮಶೇಖರ್ ರೆಡ್ಡಿ, ದಿವಾನ್ ಪೂರ್ಣಯ್ಯರಾಗಿ ಮಾಲತೇಶ್‌ ಅರಸ್ , ಲಾವಣಿ ಲಿಂಗಯ್ಯರಾಗಿ ಡಾ.ಎಂ.ಸಿ.ನರಹರಿ, ಶಕುನಿ ಶಂಕರಯ್ಯನಾಗಿ‌ ಜೆ.ಕಿರಣ್ ಜೈನ್, ಧನ್ ಸಿಂಗ್ ಪಾತ್ರದಲ್ಲಿ ಕೆ.ಚಂದ್ರಶೇಖರಪ್ಪ, ರಾಜಮಾತೆ ಓಬವ್ವ ನಾಗತಿಯಾಗಿ ಲಕ್ಷ್ಮಿ ಶ್ರೀಧರ್, ಪದ್ಮಾಂಬಿಕೆಯಾಗಿ ಚಂದನ, ನೃತ್ಯ ಕಲಾವಿದೆಯಾಗಿ ಮೌನೇಶ್ ಬಡಿಗೇರ ಪಾತ್ರ ಮಾಡಿದ್ದಾರೆ. ಕ್ಯಾಷಿಯೋ ಪ್ರವೀಣ್, ತಬಲ ಸಾಗರ್, ರಿದಂ ಬದ್ರಿ ನಿರ್ವಹಿಸಲಿದ್ದಾರೆ.

ಜಿಲ್ಲೆಯ ಜನರಿಗೆ ಮತ್ತು ತಮ್ಮ ಕುಟುಂಬಸ್ಥರು ಮತ್ತು ಸಮಸ್ತ ಸಾರ್ವಜನಿಕರಿಗೆ ಮನರಂಜನೆ ನೀಡಲು ಮತ್ತು ವಕೀಲರು ತಾವೂ ಕಲಾವಿದರು ಎಂದು ತಮ್ಮ ಪ್ರತಿಭೆ ಅನಾವರಣ ಮಾಡಲು ತಯಾರಿದ್ದಾರೆ. ಹೀಗಾಗಿ ನ್ಯಾಯಾಲಯ ಇದೀಗ ಕಲಾ ರಂಗಭೂಮಿಯಾಗಿ ಸಿದ್ದವಾಗಿದೆ. ನ್ಯಾಯವಾದಿಗಳ ರಾಜವೀರ ಮದಕರಿನಾಯಕ ನಾಟಕ ತೀವ್ರ ಕುತೂಹಲ ಕೆರಳಿಸಿದೆ.

 

 

ಈ ಸಂದರ್ಭದಲ್ಲಿ ನಾಟಕದ ಎಲ್ಲಾ ಕಲಾವಿದರು ಉಪಸ್ಥಿತರಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement