ಖಡಕ್ ಮಾತಿನಿಂದ ಚೈತ್ರಾ ಕುಂದಾಪುರ ಅವರು ಇನ್ನುಳಿದ ಸ್ಪರ್ಧಿಗಳನ್ನು ಎದುರು ಹಾಕಿಕೊಳ್ಳುತ್ತಿದ್ದರು. ಬಿಗ್ ಬಾಸ್ ಮನೆಯಲ್ಲಿ ಅವರಿಗೆ ಜಗದೀಶ್ ಟಕ್ಕರ್ ಕೊಟ್ಟಿದ್ದಾರೆ. ತಮಗೆ ಸಲಹೆ ನೀಡಲು ಬಂದ ಚೈತ್ರಾಗೆ ಜಗದೀಶ್ ತಿರುಗೇಟು ನೀಡಿದ್ದಾರೆ. ಇದರಿಂದಾಗಿ ಚೈತ್ರಾ ಮಾತು ನಿಲ್ಲಿಸುವುದು ಅನಿವಾರ್ಯ ಆಯಿತು.
‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಮಾತನಾಡಲು ಬರುತ್ತದೆ ಎಂಬ ಕಾರಣದಿಂದ ಚೈತ್ರಾ ಅವರು ಕೆಲವೊಮ್ಮೆ ಅನವಶ್ಯಕವಾಗಿ ಮಾತನಾಡಲು ಬರುತ್ತಾರೆ. ಇದರಿಂದ ಕೆಲವರಿಗೆ ಕಿರಿಕಿರಿ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ಈಗಾಗಲೇ ಚರ್ಚೆ ಆಗಿದೆ. ಬುಧವಾರದ ಎಪಿಸೋಡ್ನಲ್ಲಿ ಜಗದೀಶ್ ಮತ್ತು ಚೈತ್ರಾ ಕುಂದಾಪುರ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ ಜಗದೀಶ್ ಎದುರು ಮಾತನಾಡಲು ಸಾಧ್ಯವಾಗಲೇ ಚೈತ್ರಾ ಮಾತು ನಿಲ್ಲಿಸಿದರು.
ಸ್ವರ್ಗ ನಿವಾಸಿಗಳು ಮತ್ತು ನರಕವಾಸಿಗಳ ನಡುವೆ ಟಾಸ್ಕ್ ನಡೆಯಿತು. ಮೊದಲ ಟಾಸ್ಕ್ನಲ್ಲಿ ನರಕವಾಸಿಗಳು ಗೆದ್ದರು. ಈ ವೇಳೆ ನರಕವಾಸಿಗಳಲ್ಲಿ ಒಬ್ಬರಾದ ಜಗದೀಶ್ ಅವರು ಸಂಭ್ರಮಾಚರಣೆ ಮಾಡಿದರು. ‘ಈ ಸಲ ಕಮ್ ನಮ್ದೇ’ ಎಂದು ಕೂಗಿದರು. ಆದರೆ ‘ಆ ಮಾತನ್ನು ಮಾತ್ರ ಹೇಳಬೇಡಿ’ ಎಂದು ಚೈತ್ರಾ ಕುಂದಾಪುರ ಹೇಳಿದರು. ಇದರಿಂದ ಜಗದೀಶ್ ಅವರಿಗೆ ಕೋಪ ಬಂತು.
ಪ್ರತಿ ಬಾರಿ ‘ಈ ಸಲ ಕಪ್ ನಮ್ದೇ’ ಎಂದಾಗಲೂ ಆರ್ಸಿಬಿ ತಂಡಕ್ಕೆ ನಿರಾಸೆ ಆಗಿದ್ದು ಗೊತ್ತೇ ಇದೆ. ಅದೇ ಕಾರಣಕ್ಕಾಗಿ ಚೈತ್ರಾ ಕುಂದಾಪುರ ಅವರು ‘ಆ ಮಾತು ಹೇಳಬೇಡಿ’ ಎಂದು ಜಗದೀಶ್ಗೆ ಹೇಳಿರಬಹುದು. ಆದರೆ ಅವರ ಸಲಹೆಯನ್ನು ಜಗದೀಶ್ ಪಾಸಿಟಿವ್ ಆಗಿ ತೆಗೆದುಕೊಳ್ಳಲಿಲ್ಲ. ಕೂಡಲೇ ಅವರು ಜಗಳಕ್ಕೆ ನಿಂತರು. ಜಗದೀಶ್ ಅವರು ತಿರುಗೇಟು ನೀಡಿದ ರಭಸಕ್ಕೆ ಚೈತ್ರಾ ಸೈಲೆಂಟ್ ಆದರು.
‘ನೀವೇನು ನನ್ನ ಸಲಹೆಗಾರರ? ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ನಾನು ಹೇಗೆ ಮಾತನಾಡಬೇಕು ಅಂತ ನೀವು ಹೇಳಬೇಡಿ’ ಎಂದು ಜಗದೀಶ್ ಅವರು ಚೈತ್ರಾಗೆ ಖಡಕ್ ಆಗಿ ಹೇಳಿದ್ದಾರೆ. ‘ತಪ್ಪಾಯ್ತು ಕ್ಷಮಿಸಿ’ ಎಂದು ಚೈತ್ರಾ ಅವರು ಮಾತು ನಿಲ್ಲಿಸಿದರು. ಈ ಹಿಂದೆ ಬೇರೆ ಬೇರೆ ಸ್ಪರ್ಧಿಗಳ ಜೊತೆಯಲ್ಲಿ ಕೂಡ ಚೈತ್ರಾ ಜಗಳ ಮಾಡಿದ್ದರು. ಆದರೆ ಅವರ ಬಾಯಿ ಮುಚ್ಚಿಸಲು ಬಹುತೇಕರಿಗೆ ಸಾಧ್ಯವಾಗಿರಲಿಲ್ಲ. ಕಡೆಗೂ ಜಗದೀಶ್ ಆ ಕೆಲಸ ಮಾಡಿದ್ದಾರೆ.