ಬೆಂಗಳೂರು: ಚಲಿಸುತ್ತಿರುವ ಬಸ್’ಗಳನ್ನು ಹತ್ತಲು ಪ್ರಯತ್ನಿಸಬೇಡಿ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬನಶಂಕರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಪದ್ಮನಾಭ ನಗರದ ಬಳಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಬಸ್ನ ಚಕ್ರಗಳ ಕೆಳಗೆ ಸಿಲುಕಿದ 20 ವರ್ಷದ ಯುವತಿ ಸಾವನ್ನಪ್ಪಿದ ಘಟನೆ ಕುರಿತು ಸಚಿವರು ಪ್ರತಿಕ್ರಿಯೆ ನೀಡಿದರು.
ಒಬ್ಬ ವ್ಯಕ್ತಿ ಚಲಿಸುತ್ತಿರುವ ಬಸ್ಸನ್ನು ಹತ್ತಯಲು ಪ್ರಯತ್ನಿಸಿದರೆ ಅಥವಾ ಬಸ್ ಹತ್ತುವಾಗ ನಿರ್ಲಕ್ಷ್ಯ ವಹಿಸಿದರೆ ಅಥವಾ ಫುಟ್ಬೋರ್ಡ್ನಲ್ಲಿ ನಿಂತಾಗಲೂ ಕೂಡ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಈ ವಿಷಯಗಳ ಬಗ್ಗೆ ನಾವು ಈಗಾಗಲೇ ಜಾಗೃತಿ ಮೂಡಿಸಿದ್ದೇವೆ, ಆದರೆ ಜನರು ಅದೇ ತಪ್ಪನ್ನು ಮಾಡುತ್ತಿದ್ದಾರೆಂದು ಹೇಳಿದರು.
ಬಿಎಂಟಿಸಿ 6,500 ಕ್ಕೂ ಹೆಚ್ಚು ಬಸ್ಗಳನ್ನು ಹೊಂದಿದ್ದು, ಬಸ್ ಗಳ ಕೊರತೆಯಿಲ್ಲ. ರಾಜಧಾನಿ ಬೆಂಗಳೂರಿನ ಜನರು ಆತಂಕ ಪಡುವ ಅಗತ್ಯವಿಲ್ಲ. ಒಂದು ಬಸ್ ಮಿಸ್ ಆದರೂ, ಮುಂದಿನ ವಾಹನಕ್ಕಾಗಿ ಕಾಯಬೇಕು. ಜೀವಗಳನ್ನು ಅಪಾಯಕ್ಕೆ ಸಿಲುಕಿಸುವ ಬದಲು ತಮ್ಮ ಗಮ್ಯಸ್ಥಾನವನ್ನು ತಲುಪಲು ಮತ್ತೊಂದು ಬಸ್ ಹತ್ತಬೇಕು ಎಂದು ತಿಳಿಸಿದರು.
ಬಸ್ ಪ್ರಯಾಣಿಕ ವೇದಿಕೆಯ ಸದಸ್ಯ ವಿನಯ್ ಶ್ರೀನಿವಾಸ ಅವರು ಮಾತನಾಡಿ,. ಕೆಲವು ಸ್ಥಳಗಳಲ್ಲಿ ಬಸ್ಗಳ ಕೊರತೆಯಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಗಮ್ಯಸ್ಥಾನಗಳನ್ನು ತಲುಪುವಲ್ಲಿ ವಿಳಂಬವಾಗುತ್ತದೆ ಎಂದು ಆತಂಕಗೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಬಸ್ಗಳಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಮತ್ತು ಸುರಕ್ಷತಾ ಕ್ರಮಗಳ ಕುರಿತು ಅಭಿಯಾನಗಳನ್ನು ನಡೆಸಬೇಕು ಎಂದು ಹೇಳಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬಿಎಂಟಿಸಿ, ಬಸ್ ಚಾಲಕನಿಂದ ಯಾವುದೇ ತಪ್ಪಿಲ್ಲ ಎಂದು ಹೇಳಿದೆ. ಆದಾಗ್ಯೂ, ಪ್ರಯಾಣಿಕರು ಬಸ್ಗಳನ್ನು ಹತ್ತುವಾಗ ಮತ್ತು ಇಳಿಯುವಾಗ ಜಾಗರೂಕರಾಗಿರುವಂತೆ ಮನವಿ ಮಾಡಿಕೊಂಡಿದೆ.