ಬೆಂಗಳೂರು: ವಿಧಾನಸಭೆಯಲ್ಲಿ ಮಂಗಳವಾರ ಅಕ್ರಮ ಮದ್ಯ ಮಾರಾಟ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕ ಮಹಾಂತೇಶ್ ಕೌಜಲಗಿ ಅವರು ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದೆ, ಇದರಿಂದ ವಿದ್ಯಾರ್ಥಿಗಳು ಮದ್ಯ ವ್ಯಸನಿಗಳಾಗುತ್ತಿದ್ದಾರೆ ಎಂದು
ಇಂದು ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಮಹಾಂತೇಶ್ ಕೌಜಲಗಿ ಅವರು, ಕ್ಷೇತ್ರಕ್ಕೆ ಹೋದಾಗ ತಾಯಂದಿರು ಕೈ ಮುಗಿದು ಮನವಿ ಮಾಡ್ತಿದ್ದಾರೆ. ರಸ್ತೆಯ ಅಪಘಾತಕ್ಕೂ ಅಕ್ರಮ ಮದ್ಯ ಮಾರಾಟವೇ ಕಾರಣವಾಗಿದೆ. ಇದು ನನ್ನ ಕ್ಷೇತ್ರದಲ್ಲಿ ಒಂದೇ ಅಲ್ಲ ಇಡೀ ರಾಜ್ಯದಲ್ಲಿ ನಡೆಯುತ್ತಿದೆ. ಇದಕ್ಕೆ ಸರ್ಕಾರ ಏನು ಕ್ರಮ ತಗೊಂಡಿದೆ ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ್ ಅವರು, ಕಂಟ್ರೋಲ್ ಮಾಡಲು ಗ್ರಾಮ ಸಭೆಗಳನ್ನು ಮಾಡ್ತಿದ್ದೇವೆ. ಇದರ ತಡೆಗೆ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ. ಡಿಸಿ, ಎಸ್ಪಿಗಳ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ. ಅಕ್ರಮ ಮದ್ಯ ಮಾರಾಟ ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಅಬಕಾರಿ ಸಚಿವರ ಉತ್ತರಕ್ಕೆ ತೃಪ್ತರಾಗದ ಬಿಜೆಪಿ, ಜೆಡಿಎಸ್ ಶಾಸಕರು, ಸರ್ಕಾರವೇ ಮದ್ಯ ಮಾರಾಟ ಮಾಡಲು ಟಾರ್ಗೆಟ್ ನೀಡುತ್ತಿದೆ. ಅದಕ್ಕಾಗಿ ಹಳ್ಳಿಗಳಲ್ಲಿ ಮದ್ಯ ಮಾರಾಟ ಜಾಸ್ತಿಯಾಗಿದೆ ಎಂದ ಜೆಡಿಎಸ್ ನ ಸುರೇಶ್ ಬಾಬು ಆರೋಪ ಮಾಡಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಅವರು, ಗ್ರಾಮೀಣಭಾಗದಲ್ಲಿ ಕಿರಣಾ ಅಂಗಡಿಗಳಲ್ಲೂ ಮದ್ಯವನ್ನು ಅವ್ಯಾಹತವಾಗಿ ಮಾರಲಾಗುತ್ತಿದೆ. ಹೇಗೋ ಎಲ್ಲಾ ಅಂಗಡಿಗಳಿಗೆ ಲೈಸೆನ್ಸ್ ಕೊಟ್ಟು ಬಿಡಿ. ಸರ್ಕಾರಕ್ಕೆ ಆದಾಯ ಜಾಸ್ತಿ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಅಬಕಾರಿ ಮತ್ತು ಪೊಲೀಸ್ ಇಲಾಖೆಯವರಿಗೆ ಮಾಮೂಲಿ ನೀಡಿದರೆ ಅವರು ಸುಮ್ಮನಿರುತ್ತಾರೆ, ಎಸ್ ಸಿ ಮತ್ತು ಎಸ್ ಟಿ ಸಮುದಾಯಗಳು ವಾಸವಾಗಿರುವ ಪ್ರದೇಶಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ನಮ್ಮ ಕ್ಷೇತ್ರದ ಎಸ್ಸಿ ಕಾಲೋನಿಯಲ್ಲಿ 35 ವರ್ಷದ ಯುವಕರೇ ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.
ಎಸ್ ಸಿ, ಎಸ್ಟಿ ಸಮುದಾಯದ ಮಾತಿನಿಂದ ರೊಚ್ಚಿಗೆದ್ದ ಕಾಂಗ್ರೆಸ್ ನಾರಾಯಣಸ್ವಾಮಿ ಅವರು, ಯಾಕೆ ಮದ್ಯವನ್ನು ಕುಡಿಯೋದು ಬರೀ ಎಸ್ಸಿ ಎಸ್ಟಿ ಯುವಕರೆನಾ? ಯಾಕೇ ಬೇರೆಯವರು ಕುಡಿಯಲ್ವಾ? ನೀವು ಕುಡಿಯಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಧ್ಯ ಪ್ರವೇಶ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಗವರ್ನರ್ ಭಾಷಣದ ಮೇಲೆ ಚರ್ಚೆ ಆಗಲಿ ಎಂದರು.
ಆರಗ ಜ್ಞಾನೇಂದ್ರ ಗೃಹ ಸಚಿವರು ಆಗಿದ್ದವರು ಅಲ್ಲವಾ? ಅವರ ಕಾಲದಲ್ಲಿ ಎಷ್ಟು ಅಕ್ರಮ ಮದ್ಯ ಮಾರಾಟ ಅಂಗಡಿಗಳನ್ನು ಮುಚ್ಚಿಸಿದ್ರು ಎಂದು ಹೇಳಲಿ. ಕೊನೆಗೆ ಎಲ್ಲೆಲ್ಲಿ ಮದ್ಯ ಮಾರಾಟ ಆಗ್ತಿದೆ ಅನ್ನೋದರ ಬಗ್ಗೆಯಾದ್ರೂ ತಿಳಿದುಕೊಳ್ಳಲಿ ಎಂದು ನಾರಾಯಣಸ್ವಾಮಿ ಹೇಳಿದರು.
ಅಕ್ರಮ ಮದ್ಯ ಮಾರಾಟ ನಿಲ್ಲಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಏನು ಕ್ರಮ ತಗೊಂಡಿದ್ದಾರೆಂಬುದನ್ನು ಮಾಹಿತಿ ತರಿಸಿಕೊಂಡು ಸದನಕ್ಕೆ ತಿಳಿಸುವಂತೆ ಅಬಕಾರಿ ಸಚಿವರಿಗೆ ಸ್ಪೀಕರ್ ಸೂಚನೆ ನೀಡಿದರು.