ಲಂಡನ್: ಲಂಡನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಮೇಲೆ ಖಲಿಸ್ತಾನಿ ಉಗ್ರರು ದಾಳಿಗೆ ಯತ್ನಿಸಿರುವ ಘಟನೆ ನಡೆದಿದೆ.
ಚಾಥಮ್ ಹೌಸ್ ಚಿಂತಕರ ಚಾವಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಕಾರಿನಿಂದ ಇಳಿಯುತ್ತಿದ್ದ ಜೈಶಂಕರ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಚಾಥಮ್ ಹೌಸ್ ನಡೆಸಿದ ಚರ್ಚೆಯಲ್ಲಿ ವಿದೇಶಾಂಗ ಸಚಿವರು ಭಾಗವಹಿಸಿದ್ದ ಸ್ಥಳದ ಹೊರಗೆ ಖಲಿಸ್ತಾನ್ ಪರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಆನ್ಲೈನ್ನಲ್ಲಿ ಪ್ರಸಾರವಾಗುತ್ತಿರುವ ವೀಡಿಯೊದಲ್ಲಿ, ಲಂಡನ್ ಪೊಲೀಸ್ ಅಧಿಕಾರಿಗಳ ಮುಂದೆಯೇ ವ್ಯಕ್ತಿಯೊಬ್ಬ ಜೈಶಂಕರ್ ಅವರ ವಾಹನದ ಕಡೆಗೆ ನುಗ್ಗಿ ಭಾರತದ ರಾಷ್ಟ್ರಧ್ವಜವನ್ನು ಹರಿದು ಹಾಕುತ್ತಿರುವುದು ಕಂಡುಬಂದಿದೆ.
ವಿದೇಶಾಂಗ ಸಚಿವ ಜೈಶಂಕರ್ ಚರ್ಚೆಯಲ್ಲಿ ಭಾಗವಹಿಸಿದ್ದ ಸ್ಥಳದ ಹೊರಗೆ ಹಲವಾರು ಖಲಿಸ್ತಾನಿ ಪರ ಬೆಂಬಲಿಗರು ಧ್ವಜಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಪ್ರತಿಭಟನಾನಿರತ ಖಲಿಸ್ತಾನಿಗಳನ್ನು ಪೊಲೀಸರು ವಶಕ್ಕೆ ಪಡೆದರು.