ಚಿತ್ರದುರ್ಗ : ಇತಿಹಾಸದ ಬಗ್ಗೆ ತಿಳುವಳಿಕೆಯಿಲ್ಲದಿದ್ದರೆ ಏನೂ ಸಾಧನೆ ಮಾಡಲು ಆಗುವುದಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ್ ತಿಳಿಸಿದರು.
ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಇತಿಹಾಸ ವಿಭಾಗ ಸರ್ಕಾರಿ ಕಲಾ ಕಾಲೇಜು(ಸ್ವಾಯತ್ತ) ಇತಿಹಾಸ ಅಧ್ಯಾಪಕರ ವೇದಿಕೆ, ದಾವಣಗೆರೆ ವಿಶ್ವವಿದ್ಯಾನಿಲಯ ವತಿಯಿಂದ ಸರ್ಕಾರಿ ಕಲಾ ಕಾಲೇಜಿನಲ್ಲಿ ಚಿತ್ರದುರ್ಗ ಜಿಲ್ಲೆಯ ಸ್ಥಾನಿಕ ಸಂಸ್ಥಾನಗಳು ಎರಡು ದಿನಗಳ ವಿಚಾರ ಸಂಕಿರಣವನ್ನು ಗುರುವಾರ ಉದ್ಗಾಟಿಸಿ ಮಾತನಾಡಿದರು.
ಸರ್ಕಾರಿ ಕಲಾ ಕಾಲೇಜಿಗೆ ತನ್ನದೆ ಆದ ಇತಿಹಾಸವಿದೆ. ಸ್ವಾತಂತ್ರ್ಯ ನಂತರ ಆರಂಭವಾದ ಕಾಲೇಜುಗಳಲ್ಲಿ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು ಸೇರಿದೆ. ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಒಳಪಡುವ 130 ಕಾಲೇಜುಗಳಲ್ಲಿ ಸರ್ಕಾರಿ ಕಲಾ ಕಾಲೇಜು ಸ್ವಾಯತ್ತಕ್ಕೊಳಪಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರರು ಎಂದು ಹೇಳಿರುವ ಮಾತು ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ನಾಗರಹಾವು ಚಿತ್ರದ ಮೂಲಕ ಚಿತ್ರದುರ್ಗದ ಏಳುಸುತ್ತಿನ ಕೋಟೆ ನಾಡಿನಾದ್ಯಂತ ಪ್ರಸಿದ್ದಿ ಪಡೆದಿದೆ. ಪ್ರತಿ ವಿಷಯಕ್ಕೂ ಒಂದೊಂದು ಇತಿಹಾಸವಿದೆ. ಉಪನ್ಯಾಸಕರು, ಪ್ರಾಧ್ಯಾಪಕರುಗಳು ಮೊದಲು ಚಿತ್ರದುರ್ಗದ ಪಾಳೆಯಗಾರರು, ವೀರವನಿತೆ ಒನಕೆ ಓಬವ್ವಳ ಇತಿಹಾಸವನ್ನು ತಿಳಿದುಕೊಂಡು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ಮದಕರಿನಾಯಕರ ಕಾಲದಲ್ಲಿ ಆರ್ಥಿಕ, ಸಾಮಾಜಿಕ, ಕೌಟುಂಬಿಕ ಜೀವನ ಹೇಗಿತ್ತೆನ್ನುವುದರ ಬಗ್ಗೆ ಚಿಂತಿಸುವ ಅಗತ್ಯವಿದೆ ಎಂದು ಹೇಳಿದರು.
ಇಂತಹ ವಿಚಾರ ಸಂಕಿರಣಗಳಲ್ಲಿ ನಡಾವಳಿ ಮಾಡಿ ರಾಜ್ಯ ಸರ್ಕಾರಕ್ಕೆ ಕಳಿಸಿ. ಇತಿಹಾಸ ಪಠ್ಯಪುಸ್ತಕಗಳಲ್ಲಿರಬೇಕು. ಪಠ್ಯದಲ್ಲಿನ ಸಿಲಬಸ್ ಹೊರತು ಪಡಿಸಿ ಬೇರೆ ವಿಷಯಗಳ ಕುರಿತು ಮಕ್ಕಳಿಗೆ ಬೋಧಿಸಬೇಕಿದೆ. ಹಳೆಯ ಚಿತ್ರದುರ್ಗ ಜಿಲ್ಲೆಯ ಇತಿಹಾಸ, ಆಗು ಹೋಗುಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಗುಡ್ಡದರಂಗವ್ವನಹಳ್ಳಿ ಸಮೀಪವಿರುವ ಸ್ನಾತಕೋತ್ತರ ಕೇಂದ್ರಕ್ಕೆ ವೀರವನಿತೆ ಒನಕೆ ಓಬವ್ವಳ ಹೆಸರನ್ನಿಡಲು ತೀರ್ಮಾನಿಸಿದ್ದೇವೆಂದರು.
ಇತಿಹಾಸ ಸಂಶೋಧಕ ವಿಶ್ರಾಂತ ಪ್ರಾಂಶುಪಾಲರಾದ ಡಾ.ಬಿ.ರಾಜಶೇಖರಪ್ಪ ದಿಕ್ಸೂಚಿ ಭಾಷಣ ಮಾಡಿ ಚಿತ್ರದುರ್ಗಕ್ಕೆ ವಿಶೇಷ, ಅಪರೂಪವಾದ ಸ್ಥಾನವಿದೆ. ಇಲ್ಲಿನ ಇತಿಹಾಸದ ಬಗ್ಗೆ ಜಗತ್ತಿನ ವಿಜ್ಞಾನಿಗಳು ಮಾತನಾಡಿದ್ದಾರೆ. ಜೀವದ ಉಗಮ ಮೊಟ್ಟ ಮೊದಲು ಆರಂಭವಾಗಿದ್ದು, ಚಿತ್ರದುರ್ಗದಲ್ಲಿ ಎಂದು ಅಮೇರಿಕಾದ ವಿಜ್ಞಾನಿ ಹೇಳಿದ್ದಾರೆ. ಅದಕ್ಕೆ ಇಲ್ಲಿನ ಬಂಡೆಗಳಲ್ಲಿ ಪಳೆಯುಳಿಕೆಯಿರುವುದು ಸಾಕ್ಷಿಯಾಗಬಹುದು ಎಂದರು.
ಪ್ರಾಚೀನ ಪರಂಪರೆಯುಳ್ಳ ಚಿತ್ರದುರ್ಗವನ್ನು ಶಾತವಾಹನರು, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರದ ಅರಸರು ಆಳಿದ್ದಾರೆ. ಪಾಳೆಯಗಾರ ಎನ್ನುವ ಶಬ್ದ ಚರ್ಚೆಗೆ ಒಳಗಾಗಿದೆ. ಆಳ್ವಿಕೆ, ವಂಶವೃಕ್ಷಗಳ ಬಗ್ಗೆ ಅಭಿಪ್ರಾಯಗಳು ಪ್ರಕಟವಾಗಿವೆ. ನೈಜ ಇತಿಹಾಸ ಪ್ರಚಾರವಾಗುವುದು ಕಷ್ಟದ ಕೆಲಸ. ಆದರೂ ಆಗಬೇಕು. ತಿಮ್ಮಣ್ಣನಾಯಕನ ಆಳ್ವಿಕೆಯಿಲ್ಲದೆ ಚಿತ್ರದುರ್ಗದ ಪಾಳೆಯಪಟ್ಟು ಆರಂಭವಾಗಿಲ್ಲ. ಚರಿತ್ರೆ ಎಂದ ಮೇಲೆ ಸಮಸ್ಯೆ ಇದ್ದೇ ಇರುತ್ತದೆ. ಸಮಸ್ಯೆಯಿಲ್ಲದ ಚರಿತ್ರೆ ಯಾವುದೂ ಇಲ್ಲ ಎಂದು ಹೇಳಿದರು.
ಡಾ.ಬಿ.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಟಿ.ತಿಪ್ಪೇರುದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಆಂಧ್ರಪ್ರದೇಶ ಅನಂತಪುರದ ಕೃಷ್ಣದೇವರಾಯ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಆರ್.ಶೇಷಶಾಸ್ತ್ರಿ, ಕರ್ನಾಟಕ ವಿ.ವಿ. ಧಾರವಾಡದ ಡಾ.ರು.ಮ.ಷಡಾಕ್ಷರಯ್ಯ, ಇತಿಹಾಸ ವಿಭಾಗ ದಾವಣಗೆರೆ ವಿ.ವಿ.ಯ ಪ್ರಾಧ್ಯಾಪಕ ಡಾ.ವೆಂಕಟರಾವ್ ಎಂ.ಪಲಾಟೆ, ಸ್ನಾತಕೋತ್ತರ ಇತಿಹಾಸ ವಿಭಾಗ ಮುಖ್ಯಸ್ಥ ಡಾ.ಆರ್.ಶಿವಪ್ಪ, ದಾವಣಗೆರೆ ವಿ.ವಿ. ಇತಿಹಾಸ ಅಧ್ಯಾಪಕರ ವೇದಿಕೆ ಅಧ್ಯಕ್ಷ ಪ್ರೊ.ಸಿ.ಜಗದೀಶ, ಐ.ಕ್ಯೂ.ಎ.ಸಿ.ಸಂಚಾಲಕಿ ಡಾ.ಆರ್.ತಾರಿಣಿ ಶುಭದಾಯಿನಿ, ಅಧ್ಯಾಪಕ ಸಂಘದ ಕಾರ್ಯದರ್ಶಿ ಡಾ.ಆರ್.ಗಂಗಾಧರ್, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಉಪ ನಿರ್ದೇಶಕ ಡಾ.ನೆಲ್ಕುದುರಿ ಸದಾನಂದ ವೇದಿಕೆಯಲ್ಲಿದ್ದರು.