ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬುಧವಾರ ಸಂಜೆ ಉತ್ತಮ ಮಳೆಯಾಗಿದೆ. ಬಿಸಿಲ ಧಗೆಯಿಂದ ಬೇಸತ್ತು ಹೋಗಿದ್ದ ಕರಾವಳಿಯಲ್ಲಿ ಕೊನೆಗೂ ವರ್ಷಧಾರೆಯಾಗಿದ್ದು, ನಿನ್ನೆ ಸಂಜೆ ಸುರಿದ ಮಾರ್ಚ್ ತಿಂಗಳ ಮೊದಲ ಮಳೆಯಿಂದಾಗಿ ತಾಪಮಾನ ಕೊಂಚ ಇಳಿಕೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ , ಕಡಬ, ಪುತ್ತೂರು ತಾಲೂಕಿನಲ್ಲಿ ತುಂತುರು ಮಳೆಯಾಗಿದೆ.
ಮಧ್ಯಾಹ್ನ ಬಳಿಕ ಮೋಡ ಕವಿದ ವಾತಾವರಣ ಇದ್ದು ಸಂಜೆ 3.30 ರ ವೇಳೆಗೆ ಸುಳ್ಯ ,ಹರಿಹರ , ಅಜ್ಜಾವರ, ಮಂಡೆಕೋಲು, ಅರಂತೋಡು, ಸೋಣಂಗೇರಿ ಹಾಗೂ ಇತರ ಗ್ರಾಮಗಳಲ್ಲಿ ಕೆಲ ಹೊತ್ತು ಗುಡುಗು ಸಹಿತ ತುಂತುರು ಮಳೆಯಾಗಿದೆ.ಇನ್ನು ಸುಬ್ರಹ್ಮಣ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಮಳೆಯಾಗಿದ್ದು, ಕಾಸರಗೋಡು ಜಿಲ್ಲೆ ಅಲ್ಲಲ್ಲಿ ತುಂತುರು ಮಳೆಯಾಗುವ ಮೂಲಕ ಬಿಸಿಲ ಬೇಗೆಯಿಂದ ಬೇಸತ್ತು ಹೋಗಿದ್ದ ಜನರಿಗೆ ತಂಪರೆದಿದೆ.