ಬೆಂಗಳೂರು: ಕನ್ನಡಿಗರ ಅಭಿಮಾನವನ್ನು ಪಹಲ್ಗಾಮ್ ದಾಳಿಗೆ ಹೋಲಿಸಿದ ಸೋನು ನಿಗಮ್ ಮೇಲೆ ಎಫ್ಐಆರ್ ದಾಖಲಾಗಿದೆ.
ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕದ ಅಧ್ಯಕ್ಷ ಧರ್ಮರಾಜ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಖಾಸಗಿ ಕಾಲೇಜೊಂದರ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹೇಳುವಂತೆ ವಿದ್ಯಾರ್ಥಿ ಕೇಳಿದ್ದಕ್ಕೆ, ಇದಕ್ಕೆ ಪಹಲ್ಗಾಮ್ನಲ್ಲಿ ಅಟ್ಯಾಕ್ ಆಗಿದ್ದು ಎಂದು ಸೋನು ನಿಗಮ್ ಹೇಳಿದ್ದ ವೀಡಿಯೋ ವೈರಲ್ ಆದ ಬಳಿಕ ಸೋನು ನಿಗಮ್ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು. ಯಾವುದೇ ನಿರ್ಮಾಪಕರು ಸೋನು ನಿಗಮ್ ಇಂದ ಹಾಡು ಹೇಳಸಬಾರದು. ಹೇಳಿಸಿದರೆ ಅದಕ್ಕೆ ನೀವೆ ಹೊಣೆ ಎಂದು ಎಚ್ಚರಿಕೆ ನೀಡುವ ಕೆಲಸ ಕೂಡ ಮಾಡಿದ್ದರು.
ದೂರಿನ ಆಧಾರದ ಮೇಲೆ ಬಿಎನ್ಎಸ್ 351 (1) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 351 (2) (ಕ್ರಿಮಿನಲ್ ಮಾನಹಾನಿ), 353 (ಧಾರ್ಮಿಕ ಮತ್ತು ಭಾಷಿಕ ಭಾವನೆಗಳನ್ನ ಕೆರಳಿಸುವುದು) ಬಿಎನ್ಎಸ್ 352 (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ) ಸೆಕ್ಷನ್ನಡಿ ಎಫ್ಐಆರ್ ದಾಖಲಾಗಿದೆ.