ಮದುವೆಯಾದ ಕೆಲವೇ ದಿನಗಳಲ್ಲಿ ಗಂಡನ ಜೀವ ತೆಗೆದಿದ್ದ ಆರೋಪಿ ಸೋನಮ್ ಮೇಘಾಲಯದ ಶಿಲ್ಲಾಂಗ್ನ ಜೈಲು ಸೇರಿ ಇಲ್ಲಿಗೆ ಒಂದು ತಿಂಗಳು ಕಳೆದಿವೆ. ಆದರೆ ಇದುವರೆಗೂ ಸೋನಮ್ಳನ್ನ ಭೇಟಿಯಾಗಲು ಕುಟುಂಬಸ್ಥರು ಸೇರಿದಂತೆ ಯಾರೂ ಕೂಡ ಜೈಲಿಗೆ ಭೇಟಿ ಕೊಟ್ಟಿಲ್ಲ ಎಂದು ಹೇಳಲಾಗಿದೆ.ಸೋನಮ್ ತಾನು ಮಾಡಿರುವ ಕೃತ್ಯದ ಬಗ್ಗೆ ಯಾವುದೇ ವಿಷಾದವಿಲ್ಲದೇ ಜೈಲಿಗೆ ಹೊಂದಿಕೊಂಡಿದ್ದಾಳೆ. ರಾಜ ರಘುವಂಶಿಯೊಂದಿಗೆ ಮೇ 11 ರಂದು ಸೋನಮ್ ವಿವಾಹವಾಗಿದ್ದಳು. ಮದುವೆ ನಂತರ ಮೇ 20 ರಂದು ಮೇಘಾಲಯಕ್ಕೆ ಹನಿಮೂನ್ಗೆ ಅಂತ ಹೋಗಿದ್ದರು. ಅಲ್ಲಿ ತನ್ನ ಸಹಚರರ ಜೊತೆ ಸೇರಿ ಗಂಡ ರಾಜ ರಘುವಂಶಿಯ ಜೀವವನ್ನು ಸೋನಮ್ ತೆಗೆದಿದ್ದಳು. ಈ ಘಟನೆ ನಡೆದ ಮೇಲೆ ನಾಪತ್ತೆಯಾಗಿದ್ದ ಸೋನಮ್ ಉತ್ತರ ಪ್ರದೇಶದ ಘಾಜಿಪುರದಲ್ಲಿ ಪತ್ತೆಯಾಗಿದ್ದಳು.
ಶಿಲ್ಲಾಂಗ್ನಲ್ಲಿರುವ ಜೈಲಿನಲ್ಲಿರುವ ಸೋನಮ್ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದಾಳೆ. ಇತರೆ ಮಹಿಳಾ ಖೈದಿಗಳೊಂದಿಗೆ ಚೆನ್ನಾಗಿಯೇ ವರ್ತಿಸುತ್ತಿದ್ದಾಳೆ. ಪ್ರತಿದಿನ ಬೆಳಗ್ಗೆ ಸರಿಯಾದ ಸಮಯಕ್ಕೆ ಎದ್ದು ಜೈಲಿನಲ್ಲಿರುವ ನಿಯಮಗಳನ್ನು ಕರೆಕ್ಟ್ ಆಗಿ ಫಾಲೋ ಮಾಡುತ್ತಿದ್ದಾಳೆ. ತನ್ನ ವೈಯಕ್ತಿಕ ಜೀವನ, ತಾನು ಮಾಡಿರುವ ಕೃತ್ಯದ ಬಗ್ಗೆ ಯಾರ ಬಳಿಯೂ ಹೇಳಿಕೊಂಡಿಲ್ಲ. ಇಬ್ಬರು ವಿಚಾರಣಾಧೀನ ಮಹಿಳಾ ಖೈದಿಗಳೊಂದಿಗೆ ಜೈಲಿನ ಕೋಣೆಯನ್ನು ಸೋನಮ್ ಹಂಚಿಕೊಂಡಿದ್ದಾಳೆ ಎಂದು ಹೇಳಲಾಗಿದೆ.
ಜೈಲಿನಲ್ಲಿ ಸೋನಮ್ಗೆ ಯಾವುದೇ ವಿಶೇಷ ಕೆಲಸವನ್ನು ವಹಿಸಿಲ್ಲ. ಆದರೆ ಹೊಲಿಗೆ ಹಾಗೂ ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಇತರೆ ಕೆಲಸಗಳನ್ನು ಹೇಳಿಕೊಡಲಾಗುತ್ತಿದೆ. ಇದರ ಜೊತೆಗೆ ಎಲ್ಲರಂತೆ ಜೈಲಿನಲ್ಲಿ ಟಿವಿ ನೋಡುವ ಅವಕಾಶ ಕೂಡ ಇದೆ. ಅಧಿಕಾರಿಗಳ ಅನುಮತಿ ಮೇರೆಗೆ ಕುಟುಂಬಸ್ಥರ ಜೊತೆ ಮಾತನಾಡಬಹುದು. ಆದರೆ ಇದುವರೆಗೂ ಸೋನಮ್ಳನ್ನ ಮಾತನಾಡಿಸಲು ಯಾರು ಬಂದಿಲ್ಲ ಎಂದು ಜೈಲಿನ ಮೂಲಗಳು ತಿಳಿಸಿವೆ ಎನ್ನಲಾಗಿದೆ.
ಹನಿಮೂನ್ ಪ್ರಕರಣದ ಹಿನ್ನೆಲೆ
ಇಂದೋರ್ ಮೂಲದ ರಾಜರಘುವಂಶಿ ಹಾಗೂ ಸೋನಮ್ ಇದೇ ವರ್ಷದ ಮೇ 11ರಂದು ಮದುವೆ ಆಗಿದ್ದರು. ಮೇ20 ರಂದು ಮೇಘಾಲಯಕ್ಕೆ ಹನಿಮೂನ್ಗೆಂದು ಹೋಗಿದ್ದರು. 3 ದಿನ ಗಂಡನ ಜೊತೆ ಸುತ್ತಾಡಿದ್ದ ಸೋನಮ್ ಬಳಿಕ ಇಬ್ಬರು ನಾಪತ್ತೆ ಆಗಿದ್ದರು. ಇಷ್ಟವಿಲ್ಲದೇ ಮದುವೆಯಾಗಿ ಬಳಿಕ ಪ್ರಿಯಕರ ರಾಜ್ ಕುಶ್ವಾಹು ಜೊತೆ ಸೇರಿ ಸಹಚರರೊಂದಿಗೆ ರಾಜರಘುವಂಶಿಯ ಜೀವ ತೆಗೆದಿದ್ದಳು.
ಇದಾದ ಮೇಲೆ ರಾಜರಘುವಂಶಿಯ ದೇಹ ಪತ್ತೆಯಾಗಿತ್ತು. ಜೂನ್ 7ಕ್ಕೆ ಸೋನಮ್ ಘಾಜಿಪುರದಲ್ಲಿ ಪತ್ತೆ ಆಗಿದ್ದಳು. ಆರಂಭದಲ್ಲಿ ಕಿಡ್ನಾಪ್ ಎನ್ನಲಾಗಿತ್ತು. ಆದರೆ ನಂತರದ ತನಿಖೆಯಲ್ಲಿ ಪ್ರಮುಖ ಆರೋಪಿಯೇ ಸೋನಮ್ ಎನ್ನುವುದು ಗೊತ್ತಾಗಿ, ಬಂಧಿಸಿ ನಂತರ ಜೈಲಿಗೆ ಕಳುಹಿಸಲಾಗಿತ್ತು.