ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ದೂರುದಾರ ತಪ್ಪೊಪ್ಪಿಗೆ ಹೇಳಿಕೆ ಪ್ರಕರಣ ಹಾಗೂ ಎಸ್ ಐಟಿ ತನಿಖೆ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಧರ್ಮಸ್ಥಳ ಪ್ರಕರಣ ಇಡೀ ದೇಶಾದ್ಯಂತ ಸುದ್ದಿಯಾಗಿದೆ. ಇಡೀ ದೇಶ ಇಂದು ಈ ಪ್ರಕರಣವನ್ನು ಗಮನಿಸುತ್ತಿದೆ. ಜುಲೈ 3, 2025ರಂದು ಅನಾಮಿಕ ವ್ಯಕ್ತಿ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದ. ನೂನಾರು ಶವಗಳನ್ನು ಧರ್ಮಸ್ಥಳದ ವಿವಿಧೆಡೆ ತಾನು ಹೂತು ಹಾಕಿದ್ದಾಗಿ ಹೇಳಿದ್ದ. ತನಗೆ ಪಾಪ ಪ್ರಜ್ಞೆಯಿಂದ ಬಂದು ದೂರು ನೀಡುತ್ತಿರುವುದಾಗಿ ಹಾಗೂ ಅತ್ಯಾಚಾರ, ಕೊಲೆಗಳನ್ನು ಮಾಡಿದ ಶವಗಳನ್ನು ತನಗೆ ತಂದು ಕೊಟ್ಟು, ಜೀವಬೆದರಿಕೆ ಹಾಕಿ ತನ್ನಿಂದ ಹೂತು ಹಾಕಿಸಿದ್ದಾಗಿ ಹೇಳಿದ್ದ.
ನನಗೆ ನಿರಂತರ ಜೀವಬೆದರಿಕೆಯೊಡ್ಡಿ ಶವಗಳನ್ನು ಹೂತು ಹಾಕಿಸಿದ್ದಾರೆ ಎಂದು ದೂರು ನೀಡಿದ್ದ. ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆಯೂ ಕೋರಿದ್ದ. ಬಳಿಕ ಈ ಪ್ರಕರಣದ ಬಗ್ಗೆ ನ್ಯಾಯಾಧೀಶರು ತನಿಖೆ ನಡೆಸುವಂತೆ ಸೂಚಿಸಿದ್ದರು. ನ್ಯಾಯಾಧೀಶರ ಸೂಚನೆಯಂತೆ ಪೊಲೀಸರು ತನಿಖೆಗೆ ಮುಂದಾಗಿದ್ದರು. ಈ ವೇಳೆ ಮಹಿಳಾ ಆಯೋಗ ಎಸ್ ಐಟಿ ರಚಿಸುವಂತೆ ಪತ್ರ ಬರೆದಿತ್ತು. ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ಬಗ್ಗೆ ತನಿಖೆಗೆ ಎಸ್ ಐಟಿ ರಚಿಸಿ ತನಿಖೆ ನಡೆಸುವಂತೆ ಉಲ್ಲೇಖಿಸಿತ್ತು. ಇದಾದ ಬಳಿಕ ನಾನು ಹಾಗೂ ಸಿಎಂ ಸಿದ್ದರಾಮಯ್ಯ ಎಸ್ ಐಟಿ ರಚಿಸಿ ತನಿಖೆಗೆ ಆದೇಶ ನೀಡಿದೆವು ಎಂದು ತಿಳಿಸಿದ್ದಾರೆ.
ಬಳಿಕ ಎಸ್ ಐಟಿ ಆತನಿಂದ ಹೇಳಿಕೆ ಪಡೆದು ಆತ ಶವಗಳನ್ನು ಹೂತಿಟ್ಟ ಜಾಗದ ಬಗ್ಗೆ ನೀಡಿರುವ ಮಾಹಿತಿ ಮೇರೆಗೆ ಅಲ್ಲಿ ಶೋಧಕಾರ್ಯವನ್ನು ಕೈಗೊಂಡಿತು ಎಂದು ವಿವರಿಸಿದ್ದಾರೆ.