ಚಿತ್ರದುರ್ಗ : ಸಮಾಜ ಕಲ್ಯಾಣ ಇಲಾಖೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳನ್ನು ಮಹಾರಾಷ್ಟ್ರ ನಾಗಪುರ ದೀಕ್ಷಾಭೂಮಿಯಲ್ಲಿ ನಡೆಯುವ ದಮ್ಮ ಪ್ರವರ್ತನ ದಿನ ಕಾರ್ಯಕ್ರಮಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ರೈಲಿನ ಮೂಲಕ ಕಳುಹಿಸಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 25 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ವಿಸ್ತರಿಸಿದ ಕೊನೆಯ ದಿನವಾಗಿದೆ.
ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 04 ರವರೆಗೆ ಪ್ರತಿ ವರ್ಷದಂತೆ ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳನ್ನು ಕಳುಹಿಸಿಕೊಡಲಾಗುವುದು. ಯಾತ್ರಾರ್ಥಿಗಳು ಬಿ.ಪಿ.ಎಲ್ ಕಾರ್ಡ್ ಹೊಂದಿರಬೇಕು. ಎಸ್.ಸಿ ಎಸ್.ಟಿ ಸಮುದಾಯಕ್ಕೆ ಸೇರಿದವರಾಗಿರಬೇಕು. ಇತರೆ ಸಮುದಾಯದ ಜನರು ಬಾಬಾ ಸಾಹೇಬ್ ಅಂಬೇಡ್ಕರ್ ಅನುಯಾಯಿಗಳು ಅಹ ಯಾತ್ರೆ ಕೈಗೊಳ್ಳಬಹುದು. ಯಾತ್ರಾರ್ಥಿಗೆ ಕನಿಷ್ಠ 18 ವರ್ಷ ಮೇಲ್ಪಟವರಾಗಿರಬೇಕು. ಡಾ.ಬಿ.ಆರ್.ಅಂಬೇಡ್ಕರ್ ರವರ ಚಿಂತನೆಗಳ ಬಗ್ಗೆ ಅರಿವು ಹೊಂದಿದ್ದು, ಸಮಾಜ ಸೇವೆ ಮಾಡಿದ ಅನುಭವ ಹೊಂದಿರಬೇಕು. ಈಗಾಗಲೇ ಸರ್ಕಾರದ ವೆಚ್ಚದಲ್ಲಿ ಒಮ್ಮೆ ನಾಗಪುರ ದೀಕ್ಷಾ ಭೂಮಿಗೆ ಪ್ರವಾಸ ಮಾಡಿದವರು ಈ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ. ಸರ್ಕಾರಿ ಮತ್ತು ಅದರ ಅಂಗಸಂಸ್ಥೆಗಳಲ್ಲಿ ಸೇವೆಯಲ್ಲಿರುವವರು ಅರ್ಹರಲ್ಲ. ರಾಜ್ಯದಲ್ಲಿ ಆಯಾ ಜಿಲ್ಲೆಗಳಿಂದಲೇ ನಾಗಪುರಕ್ಕೆ ಹೋಗಿ ಬರಲು ತಗಲುವ ಪ್ರಯಾಣದ ವೆಚ್ಚವನ್ನು ಮಾತ್ರ ಸರ್ಕಾರದಿಂದ ಭರಿಸಲಾಗುವುದು. ವಸತಿ ಮತ್ತು ಭೋಜನಾ ವೆಚ್ಚವನ್ನು ಯಾತ್ರಾರ್ಥಿಗಳೇ ಭರಿಸತಕ್ಕದ್ದು.
ಆಸಕ್ತ ಯಾತ್ರಾರ್ಥಿಗಳು https://swd.karnataka.gov.in/ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಚಿತ್ರದುರ್ಗ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.