ಬೆಂಗಳೂರು: ನಾಳೆಯಿಂದ (ಸೆ.22) ರಾಜ್ಯಾದ್ಯಂತ ಜಾತಿಗಣತಿ ಅರಂಭವಾಗಲಿದೆ. ಈ ಮಧ್ಯೆ ಗೊಂದಲಕ್ಕೆ ಕಾರಣವಾಗಿದ್ದ ಕ್ರಿಶ್ಚಿಯನ್ ಧರ್ಮದ ಅಡಿಯಲ್ಲಿ ಇದ್ದ 33 ಉಪ ಜಾತಿಗಳನ್ನು ಕೈಬಿಡಲು ಸರ್ಕಾರ ನಿರ್ಧರಿಸಿದೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಈ ಮಾಹಿತಿ ನೀಡಿದ್ದು, ಸ್ವ ಇಚ್ಛೆಯಿಂದ ಜಾತಿ, ಧರ್ಮ ಉಲ್ಲೇಖ ಮಾಡಲು ಅವಕಾಶ ಇದೆ. ಕ್ರಿಶ್ಚಿಯನ್ ಧರ್ಮದ ಅಡಿಯಲ್ಲಿ ಒಟ್ಟು 33 ಉಪ ಜಾತಿಗಳನ್ನು ಡ್ರಾಪ್ಡೌನ್ನಿಂದ ತೆಗೆಯುತ್ತಿದ್ದೇವೆ ಎಂದರು. ಹಿಂದಿನ ಸಮೀಕ್ಷೆಯಲ್ಲಿ ಏನಿತ್ತೋ ಅದನ್ನೇ ಅಳವಡಿಸಿಕೊಂಡಿದ್ದೇವೆ. ಜಾತಿಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಿ ಆಕ್ಷೇಪಣೆಗೂ ಆಹ್ವಾನಿಸಿದ್ದೆವು.
ಬಹಳಷ್ಟು ಜನ ಜಾತಿ ಬಿಟ್ಟುಹೋಗಿದೆ ಎಂದು ಲಿಖಿತವಾಗಿ ಹೇಳಿದ್ದರು. ಪತ್ರಿಕಾ ಪ್ರಕಟಣೆ ಬಳಿಕ 148 ಜಾತಿಗಳನ್ನು ನಾವು ಸೇರ್ಪಡೆ ಮಾಡಿದ್ದು, 1413 ಜಾತಿಗಳು ಮೊದಲೇ ಇತ್ತು. 1561 ಜಾತಿಗಳನ್ನು ಈಗ ನಾವು ಪಟ್ಟಿ ಮಾಡಿದ್ದೇವೆ. ಈ ವಿಷಯದಲ್ಲಿ ಗೊಂದಲ ಆಗಿದ್ದಕ್ಕೆ ಸರ್ಕಾರದಲ್ಲೂ ಚರ್ಚೆ ಆಗಿದೆ. ಸಚಿವರ ತಂಡ ಕೂಡ ಅವರ ಗೊಂದಲದ ಬಗ್ಗೆ ಚರ್ಚೆ ಮಾಡಿದರು ಎಂದು ಹೇಳಿದರು. ನಮ್ಮ ಆಯೋಗ ಯಾವುದೇ ಹೊಸ ಜಾತಿ ಸೃಷ್ಟಿಸಿಲ್ಲ. ಪಟ್ಟಿಯಲ್ಲಿರುವ ಹೆಸರು ಕಾಂತರಾಜು ಸಮೀಕ್ಷೆ ಪಟ್ಟಿಯಲ್ಲೂ ಇತ್ತು. ಕಾಂತರಾಜು ಸಮೀಕ್ಷೆ ಮಾಡುವಾಗಲೇ ಜಾತಿಗಳು ದಾಖಲಾಗಿದ್ದು, ಅದೇ ಹೆಸರಲ್ಲಿ ಸಾವಿರಾರು ಜನ ಸಮೀಕ್ಷೆಗೆ ಮಾಹಿತಿ ಒದಗಿಸಿದ್ದಾರೆ ಎಂದರು.
ಸರ್ವೆಗೆ ಆಧಾರ್ ನಂಬರ್ ಕಡ್ಡಾಯ ಮಾಡಿದ್ದೇವೆ. ಪ್ರತಿ ಮನೆಯ ಮುಖ್ಯಸ್ಥರಿಂದ ಆಧಾರ್ ದೃಢೀಕರಣ ಮಾಡುತ್ತೇವೆ. ಪಡಿತರ ಚೀಟಿಯಲ್ಲಿ ದಾಖಲಾದ ಆಧಾರ್ ನಂಬರ್ ಕೂಡ ಸಿಗುತ್ತೆ. ಸಮೀಕ್ಷೆಗೆ ವಿವಿಧ ಇಲಾಖೆಗಳಿಂದ ಸಹಕಾರ ಸಿಕ್ಕಿದೆ. ಎಲ್ಲ ಮನೆಗಳನ್ನೂ ಮ್ಯಾಪ್ ಮಾಡಿ ಸಿಸ್ಟಮ್ನಲ್ಲಿ ಅಪ್ಲೋಡ್ ಆಗಿದೆ. 2 ಕೋಟಿಗಿಂತ ಹೆಚ್ಚು ಮನೆಗಳು ದಾಖಲಾಗಿವೆ. ಜಿಯೋ ಟ್ಯಾಗ್ ಮೂಲಕ ಒಂದೊಂದು ಬ್ಲಾಕ್ ಮಾಡಿಕೊಂಡಿದ್ದೇವೆ.
130ರಿಂದ 140 ಮನೆಗಳು ಒಂದೊಂದು ಬ್ಲಾಕ್ನಲ್ಲಿ ಬರುತ್ತವೆ. ಅತ್ಯಾಧುನಿಕ ಆ್ಯಪ್ನಿಂದ ಸರ್ವೆ ಆಗುತ್ತದೆ. ಮೊಬೈಲ್ನಲ್ಲಿ ನಮ್ಮ ಸಿಸ್ಟಮ್ನಿಂದ ಪ್ರಶ್ನೆಗಳು ಲೋಡ್ ಆಗುತ್ತದೆ. 60 ಪ್ರಶ್ನೆ ಇರುತ್ತದೆ. ಹ್ಯಾಂಡ್ ಬಿಲ್ ರೀತಿ ಜನರಿಗೆ ತಲುಪಿಸಿದ್ದೇವೆ. ಎಲ್ಲ ಜನರಿಗೆ ಏನೇನು ಪ್ರಶ್ನೆ ಬರುತ್ತದೆ ಎಂಬ ತಿಳಿವಳಿಕೆ ನೀಡಿದ್ದೇವೆ ಎಂದು ತಿಳಿಸಿದರು.