ಬೆಂಗಳೂರು : ನಾಳೆಯಿಂದ ಎರಡು ದಿನ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರವಾಸ ಕೈಗೊಂಡಿದ್ದಾರೆ. ಅ.15ರಿಂದ ಎರಡು ದಿನ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ಬೀದರ್, ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ಯಾದಗಿರಿಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ನಿರ್ಮಲಾ ಸೀತಾರಾಮನ್ ಭಾಗಿಯಾಗಲಿದ್ದಾರೆ.
ಈ ವೇಳೆ ರೈತ ಪ್ರಮುಖರು, ರೈತ ಕೇಂದ್ರಗಳು, ಕೃಷಿ ತರಬೇತಿ ಕೇಂದ್ರಗಳು, ಕೃಷಿ ಉತ್ಪನ್ನಗಳ ಸಂಸ್ಕರಣಾ ಕೇಂದ್ರಗಳಿಗೆ ಭೇಟಿ ನೀಡಿ, ಸಂವಾದ ನಡೆಸಲಿದ್ದಾರೆ. ಕೇಂದ್ರಕ್ಕೆ ಎನ್ಡಿಆರ್ಎಫ್ ನೆರೆ ಪರಿಹಾರ ಕೋರಿ ರಾಜ್ಯದಿಂದ ಪತ್ರ ಬರೆಯಲು ಸಿದ್ಧತೆ ಬೆನ್ನಲ್ಲೇ ವಿತ್ತ ಸಚಿವೆ ರಾಜ್ಯ ಭೇಟಿ ಕೈಗೊಂಡಿದ್ದಾರೆ.
ಈ ಕುರಿತು ನಿರ್ಮಲಾ ಸೀತಾರಾಮನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಾಳೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರವಾಸಕ್ಕೆ ಹೊರಡುತ್ತಿದ್ದೇನೆ. ಅಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಘಟಕಗಳನ್ನು ಸ್ಥಾಪಿಸಲಾಗಿದ್ದು, ಸದರಿ ರೈತರ ತರಬೇತಿ ಕೇಂದ್ರ ಮತ್ತು ಕಾಮನ್ ಫೆಸಿಲಿಟಿ ಸೆಂಟರ್ಗಳನ್ನು ಭೇಟಿಯಾಗಿ ಅವುಗಳ ಉತ್ಪಾದನಾ ಚಟುವಟಿಕೆಗಳನ್ನು ವೀಕ್ಷಿಸಲಿದ್ದೇನೆ. ನನ್ನ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ ಬಳಸಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ತಲಾ ಒಂದು ಘಟಕವನ್ನು ಸ್ಥಾಪಿಸಲಾಗಿದೆ.
ಈ ಪ್ರವಾಸದ ಸಮಯದಲ್ಲಿ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಘಟಕಗಳ ಉದ್ಘಾಟನೆ ಮಾಡಲಾಗುತ್ತದೆ. ಈ ಕೃಷಿ ಸಂಸ್ಕರಣೆ ಕೇಂದ್ರಗಳಿಂದ ತರಬೇತಿ ಪಡೆದ ರೈತರು ಮತ್ತು ಲಾಭ ಪಡೆಯುವ ರೈತರು ಹಾಗೂ ರೈತರ ಉತ್ಪಾದಕರ ಸಂಘಗಳು ಮತ್ತು ಅವರ ಕುಟುಂಬಗಳನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.