ಮಂಗಳೂರು : ಕಾರಿನಲ್ಲಿ ಅಕ್ರಮವಾಗಿ ಮೂರು ದನಗಳನ್ನು ಸಾಗಾಟ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬನ ಮನೆಯನ್ನು ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿ ಜಪ್ತಿ ಮಾಡಿದ್ದಾರೆ.
ನ.2ರಂದು ಪಟ್ರಮೆ ಗ್ರಾಮದ ಪಟ್ಟೂರು ರಸ್ತೆಯಲ್ಲಿ ಗೋ ಮಾಂಸ ಮಾಡಲು ಅಕ್ರಮವಾಗಿ ಮೂರು ದನಗಳನ್ನು KA-19-MC-5862 ನಂಬರಿನ ರಿಟ್ಜ್ ಕಾರಿನಲ್ಲಿ ಸಾಗಾಟ ಮಾಡುವಾಗ ಉಳ್ಳಾಲ ತಾಲೂಕಿನ ಮಹಮ್ಮದ್ ಖಲೀಲ್ ಅಲಿಯಾಸ್ ತೌಸೀಫ್ (38) ಮತ್ತು ಮಹಮ್ಮದ್ ಸಿನಾನ್(25) ಸಿಕ್ಕಿ ಬಿದ್ದಿದ್ದರು.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದನ ನೀಡಿದ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಜೋಹಾರ ಸೇರಿ ಮೂವರ ವಿರುದ್ಧ ಕರ್ನಾಟಕ ಗೋ ಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ, ಪ್ರಾಣಿ ಹಿಂಸೆ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಮೂರು ದನಗಳನ್ನು ಉಳ್ಳಾಲ ತಾಲೂಕಿನ ಸಜಿಪನಾಡು ಗ್ರಾಮದ ತಂಚಿಬೆಟ್ಟು ನಿವಾಸಿ ಇಬ್ರಾಹಿಂ ಖಲೀಲ್ ಅಲಿಯಾಸ್ ತೌಸೀಫ್ ಮನೆಯಲ್ಲಿ ಗೋಮಾಂಸ ಮಾಡುವುದಕ್ಕಾಗಿ ಕೊಂಡುಹೋಗುತ್ತಿರುವುದಾಗಿ ಬಾಯಿಬಿಟ್ಟಿದ್ದರು. ಇದರಿಂದ ಧರ್ಮಸ್ಥಳ ಪೊಲೀಸರು ಉಳ್ಳಾದಲ್ಲಿರುವ ಇಬ್ರಾಹಿಂ ಖಲೀಲ್ ಅಲಿಯಾಸ್ ತೌಸೀಫ್ ಮನೆಯನ್ನು ನ.4 ರಂದು ಜಪ್ತಿ ಮಾಡಿಕೊಂಡಿದ್ದಾರೆ.

































