ಚಿತ್ರದುರ್ಗ: ನಗರದ ವಾಸವಿ ಶಾಲೆ ಬಳಿಯಲ್ಲಿನ ತ್ಯಾಗರಾಜ ಬೀದಿಯಲ್ಲಿನ ಶ್ರೀ ಪೇಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ 100 ವರ್ಷ(1926-2026)ತುಂಬಲಿದ್ದು ಈ ಹಿನ್ನಲೆಯಲ್ಲಿ ಮಾ. 26 ರಿಂದ 28ರವರೆಗೆ ಮೂರು ದಿನಗಳ ಕಾಲ ಶ್ರೀ ರಾಮೋತ್ಸವ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಸಡಗರ ಶ್ರದ್ದಾ ಭಕ್ತಿಗಳಿಂದ ಶ್ರೀ ರಾಮನವಮಿ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಮೋತ್ಸವದ ಶತಮಾನೋತ್ಸವ ಸಮಿತಿ ತಿಳಿಸಿದೆ.
ಶ್ರೀ ರಾಮೋತ್ಸವದ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಅರುಣ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿ ಈ ದೇವಸ್ಥಾನ ನಿರ್ಮಾಣವಾಗಿ ಇಂದಿಗೆ 100 ವರ್ಷವಾಗಿದೆ ಈ ಹಿನ್ನಲೆಯಲ್ಲಿ 100ನೇ ವರ್ಷದ ಶ್ರೀ ರಾಮೋತ್ಸವ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ಭಜನೆ, ದಾಸಗಾನ ವೈಭವ” ಭಕ್ತಿ ಗೀತೆಗಳ ಗಾಯನ, ಹರಿಕಥಾ ಕಾರ್ಯಕ್ರಮ, “ಶ್ರೀ ಸೀತಾರಾಮಚಂದ್ರರ ಉತ್ಸವಮೂರ್ತಿಗಳ ಮೆರವಣಿಗೆ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.
ಮಾ. 26 ರ ಸಂಜೆ ಕಾರ್ಯಕ್ರಮವನ್ನು ಶಾಸಕರಾದ ಕೆ.ಸಿ. ವೀರೇಂದ್ರ (ಪಪ್ಪಿ) ಉದ್ಘಾಟಿಸಲಿದ್ದು, ಪತಂಜಲಿ ಆಸ್ಪತ್ರೆಯ ಡಾ|| ಎಂ. ಮುಕುಂದರಾವ್ ಭಾಗವಹಿಸಲಿದ್ದಾರೆ. ಸಂಜೆ 6 ಘಂಟೆಗೆ ಶ್ರೀ ಪಾಂಡುರಂಗ ಭಜನಾ ಮಂಡಳಿಯವರಿಂದ ಭಜನೆ 6.30ಕ್ಕೆ ಬ್ರಹ್ಮ ಚೈತನ್ಯ ಭಜನಾ ಮಂಡಳಿಯವರಿಂದ ಭಜನೆ 7 ಕ್ಕೆ ಸಾವಿರ ಹಾಡಿನ ಸರದಾರ ಡಾ. ಆರ್.ಪಿ. ಕುಲಕರ್ಣಿಯವರಿಂದ “ದಾಸಗಾನ ವೈಭವ” ಕಾರ್ಯಕ್ರಮ ನಡೆಯಲಿದೆ.
ಮಾ. 27ರ ಸಂಜೆಯ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್ ನೇರವೇರಿಸಲಿದ್ದು, ಬಿ.ಜೆ ಪಿ ಮುಖಂಡರಾದ ಎಂ.ಸಿ. ರಘುಚಂದನ್ ಭಾಗವಹಿಸಲಿದ್ದಾರೆ.ಸಂಜೆ 6 ಘಂಟೆಗೆ ಶ್ರೀ ಬೃಂದಾವನ ಭಜನಾ ಮಂಡಳಿಯವರಿಂದ ಭಜನೆ, 6.30ಕ್ಕೆ ಸರಸ್ವತಿ ಭಜನಾ ಮಂಡಳಿಯ ವರಿಂದ ಭಜನೆ ಕಾರ್ಯಕ್ರಮ ನಡೆಯಲಿದ್ದು, 7.30ಕ್ಕೆ ಕೀರ್ತನ ಕಲಾಸಿರಿ ಡಾ. ಬೇಲೂರು ವಸಂತಲಕ್ಷ್ಮಿ ಇವರಿಂದ “ಸೀತಾರಾಮ ಕಲ್ಯಾಣ ಹರಿಕಥಾ ಕಾರ್ಯಕ್ರಮ ನಡೆಯಲಿದೆ.
ಮಾ. 28ರ ಶನಿವಾರ ಬೆಳಿಗ್ಗೆ 9.30ಕ್ಕೆ “ಶ್ರೀ ಸೀತಾರಾಮಚಂದ್ರರ ಉತ್ಸವಮೂರ್ತಿಗಳ ಮೆರವಣಿಗೆ ಉದ್ಘಾಟನೆಯನ್ನು ಮಾಜಿ ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿ ಹಾಗೂ ತಹಶೀಲ್ದಾರ್ ತಾಲ್ಲೂಕು ಮಜು ರಾಯಿ ಇಲಾಖೆಯ ಅಧ್ಯಕ್ಷರಾದ ಬಿ.ಎಂ.ಗೋವಿಂದರಾಜ್ ನೇರವೇರಿಸಲಿದ್ದು, ಮೆರವಣಿಗೆಯೂ ದೇವಾಲ ಯದಿಂದ ಪ್ರಾರಂಭವಾಗಿ ಐಯ್ಯಣ್ಣನಪೇಟೆ, ಚಿಕ್ಕಪೇಟೆ, ಉಚ್ಚಂಗಿಯಲ್ಲಮ್ಮ ದೇವಾಲಯ, ದೊಡ್ಡಪೇಟೆ, ಜೈನ್ ದೇವಸ್ಥಾನ, ವಾಸವಿಸ್ಕೂಲ್ ರಸ್ತೆಯ ಮೂಲಕ ವಾಪಾಸ್ ದೇವಸ್ಥಾನ ತಲುಪಲಿದೆ. ತದ ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ಸಂಜೆ 6.00 ಘಂಟೆಗೆ ಶ್ರೀ ವಾಸವಿ ಭಜನಾ ಮಂಡಳಿಯವರಿಂದ ಭಜನೆ 6.30ಕ್ಕೆ ಶ್ರೀ ಸಪ್ತಗಿರಿ ಭಜನಾ ಮಂಡಳಿಯವರಿಂದ ಭಜನೆ 7.00ಕ್ಕೆ ಅಭಯ ಆಂಜನೇಯ ಭಜನಾ ಮಂಡಳಿಯವರಿಂದ ಭಜನೆ ಸಂಜೆ 7.30ಕ್ಕೆ ಸ್ಥಳಿಯ ಕಲಾವಿದರಾದ ಶ್ರೀ ಶಾರದ ಮೆಲೋಡೀಸ್ರವರಿಂದ ಶ್ರೀಕಾಂತ್ ಅವರ ನೇತೃತ್ವದಲ್ಲಿ ಭಕ್ತಿ ಗೀತೆಗಳ ಗಾಯನ, ನೃತ್ಯ, ಸಂಗೀತ ಕಾರ್ಯಕ್ರಮ ನಡೆಯಲಿದೆ.
ಈ ಮೂರು ದಿನದ ಕಾರ್ಯಕ್ರಮದಲ್ಲಿ ನಗರದ ಭಕ್ತಾಧಿಗಳು ಭಾಗವಹಿಸುವುದರ ಮೂಲಕ ಶ್ರೀ ಪೇಟೆ ಆಂಜನೇಯಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಶ್ರೀ ರಾಮೋತ್ಸವದ ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

































