ಉಡುಪಿ: ರಾಜ್ಯದಲ್ಲಿ ಇನ್ನು ಮುಂದೆ 108 ಆಂಬುಲೆನ್ಸ್ ಗಳ ಚಾಲಕರು ಕರೆ ಬಂದ ಬಳಿಕ 15 ನಿಮಿಷದಲ್ಲಿ ಸ್ಥಳಕ್ಕೆ ತಲುಪಬೇಕು. ಇಲ್ಲದಿದ್ದರೆ ಚಾಲಕರಿಗೆ 5000 ರೂ. ದಂಡ ವಿಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಆಂಬುಲೆನ್ಸ್ ಸೇವೆಗಳ ಮಾರ್ಗಸೂಚಿ ಪ್ರಕಾರ ತುರ್ತು ಕರೆ ಬಂದಾಗ 20 ನಿಮಿಷಗಳ ಒಳಗೆ ಆಂಬುಲೆನ್ಸ್ ಸ್ಥಳವನ್ನು ತಲುಪಬೇಕು. ಇದು ತುರ್ತು ವೈದ್ಯಕೀಯ ಚಿಕಿತ್ಸೆಯ ಪ್ರಮುಖ ಸಮಯವಾಗಿರುವ ಗೋಲ್ಡನ್ ಅವರ್ ಆಧರಿಸಿದೆ. ಆದರೆ, ನಮ್ಮ ರಾಜ್ಯದಲ್ಲಿ 15 ನಿಮಿಷದಲ್ಲಿ ತಲುಪುವ ನಿಯಮ ಎಂಬ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
15 ನಿಮಿಷದಲ್ಲಿ ಚಾಲಕರು ಘಟನಾ ಸ್ಥಳಕ್ಕೆ ತಲುಪಿದರೆ ಸಮಸ್ಯೆ ಶೇ. 90ರಷ್ಟು ಪರಿಹಾರವಾಗುತ್ತದೆ. ರಾಜ್ಯದಲ್ಲಿ 700ರಿಂದ 800 ಆಂಬುಲೆನ್ಸ್ ಗಳಿದ್ದು, ಈ ಸೇವೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಇದು ಕಾರ್ಯಗತವಾಗಲು ಮೂರು ತಿಂಗಳು ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

































