ಬೆಂಗಳೂರು: ರಾಜ್ಯ ಸರ್ಕಾರವು ಭೋವಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಸಮುದಾಯಗಳ ನಿಗಮಗಳ ಸಾಲವನ್ನು ಮನ್ನಾ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಮುದಾಯದ ಪ್ರಮುಖ ಬೇಡಿಕೆಗಳ ಬಗ್ಗೆ ಸಕಾರಾತ್ಮಕ ನಿರ್ಣಯ ಕೈಗೊಳ್ಳುವ ಭರವಸೆ ನೀಡಿದ ಅವರು, ಮುಂಬರುವ ದಿನಗಳಲ್ಲಿ ಭೋವಿ ಸಮುದಾಯದವರಿಗೆ ಕುಲಪತಿ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನಗಳನ್ನು ನೀಡುವ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ತತ್ವಗಳನ್ನು ಸ್ಮರಿಸಿದ ಮುಖ್ಯಮಂತ್ರಿಗಳು, “ಉತ್ಪಾದನೆಯಲ್ಲಿ ಎಲ್ಲರೂ ಭಾಗವಹಿಸಿ, ಉತ್ಪನ್ನವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂಬ ಸಿದ್ದರಾಮೇಶ್ವರರ ಬೋಧನೆಯೇ ನಮ್ಮ ಸರ್ಕಾರದ ಹಾದಿಯಾಗಿದೆ. ರಾಜ್ಯದ ಏಳು ಕೋಟಿ ಜನರಿಗೂ ನ್ಯಾಯ ಸಿಗಬೇಕು ಮತ್ತು ಯಾರೂ ಅವಕಾಶಗಳಿಂದ ವಂಚಿತರಾಗಬಾರದು ಎಂಬುದು ನಮ್ಮ ಆಶಯ,” ಎಂದು ಹೇಳಿದರು. ಎಲ್ಲಾ ಜಾತಿಗಳನ್ನು ಪ್ರೀತಿಸುವ ಮತ್ತು ಸಹಿಷ್ಣುತೆಯನ್ನು ರೂಢಿಸಿಕೊಳ್ಳುವ ಮೂಲಕ ಸಮಾನ ಸಮಾಜ ನಿರ್ಮಾಣಕ್ಕೆ ಅವರು ಕರೆ ನೀಡಿದರು.
ನಮ್ಮ ಸರ್ಕಾರ ಭೋವಿ ನಿಗಮವೂ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳ ಸಾಲವನ್ನು ಮನ್ನಾ ಮಾಡಿದೆ.ಭೋವಿ ಸಮುದಾಯದವರು ಇಟ್ಟಿರುವ ಬೇಡಿಕೆಗಳ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ. ಸಮುದಾಯದವರಿಗೆ ಕುಲಪತಿ, ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಏಳು ಕೋಟಿ ಜನರಿಗೂ ನ್ಯಾಯ ಸಿಗಬೇಕು ಹಾಗೂ ಯಾರೂ ಅವಕಾಶಗಳಿಂದ ವಂಚಿತರಾಗಬಾರದು.ಎಲ್ಲಾ ಜಾತಿಗಳನ್ನು ಪ್ರೀತಿಸಿ, ಅವರೂ ನಮ್ಮನ್ನು ಪ್ರೀತಿಸುವಂತೆ ಮಾಡಬೇಕು ಹಾಗೂ ಸಹಿಷ್ಣುತೆಯನ್ನು ರೂಢಿಸಿಕೊಳ್ಳಬೇಕು. ಉತ್ಪಾದನೆಯಲ್ಲಿ ಎಲ್ಲರೂ ಭಾಗವಹಿಸಿ, ಉತ್ಪನ್ನವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಸಿದ್ಧರಾಮೇಶ್ವರರು ಬೋಧಿಸಿದ್ದರು. ಅವರು ನಡೆದ ಹಾದಿಯಲ್ಲಿಯೇ ನಮ್ಮ ಸರ್ಕಾರವೂ ನಡೆಯುತ್ತಿದೆ ಎಂದಿದ್ದಾರೆ.
ಬಡತನದ ಸವಾಲುಗಳ ನಡುವೆ ತಮ್ಮ ಕನಸಿನ ಉದ್ಯೋಗದ ಬೆನ್ನತ್ತಿರುವ ಯುವಜನರು ಆರ್ಥಿಕ ಸವಾಲುಗಳಿಂದಾಗಿ ವಿಚಲಿತರಾಗದೆ, ತಮ್ಮ ಸಂಪೂರ್ಣ ಗಮನವನ್ನು ಗುರಿಯೆಡೆಗೆ ಕೇಂದ್ರೀಕರಿಸಿ ಯಶಸ್ಸು ಕಾಣುವಂತಾಗಲು ಯುವನಿಧಿ ಅವಕಾಶ ನೀಡಲಿದೆ. ಈ ಯೋಜನೆಯ ಗರಿಷ್ಠ ಅನುಕೂಲ ಪಡೆದು, ನಾಡಿನ ಯುವಜನರು ಇಷ್ಟದ ಉದ್ಯೋಗ ಹೊಂದಿ, ಆ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಲಿ ಎನ್ನುವುದು ನಮ್ಮ ಸರ್ಕಾರದ ಸದಾಶಯ. ಎಂದು ಸಿಎಂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.




























