ಚಿತ್ರದುರ್ಗ: ಎಲ್ಲಾ ಜಾತಿ ಜನಾಂಗದವರ ಹಿತ ಕಾಯುವ ಜವಾಬ್ದಾರಿ ನನ್ನ ಮೇಲಿದೆ, ಆ ಒಂದು ನಿಟ್ಟಿನಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳ ಮಾಹಿತಿಯನ್ನು ಪಡೆದು ಜನರಿಗೆ ಅವಶ್ಯಕವಾಗಿ ಬೇಕಾಗಿರುವಂತಹ ಸೌಲಭ್ಯಗಳ ಮಾಹಿತಿ ಪಡೆದು ಅಭಿವೃದ್ಧಿ ಕೆಲಸಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಗುತ್ತಿದೆ ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ತಿಳಿಸಿದರು.
ತಾಲೂಕಿನ ಸಿಂಗಾಪುರ, ಬೆಟ್ಟದ ನಾಗೇನಹಳ್ಳಿ, ಚಿತ್ರದುರ್ಗ ನಗರದ ವಿದ್ಯಾನಗರದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲಿ ಸಿ.ಸಿ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆಯನ್ನು ಚಾಚು ತಪ್ಪದೇ ಮಾಡಲಾಗಿದೆ, ಗ್ರಾಮ ಅಭಿವೃದ್ಧಿ ಕಾರ್ಯಗಳಿಗೂ ಸಹ ವಿಶೇಷ ಅನುದಾನ ನೀಡುವುದರ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಲಾಗಿದೆ ಎಂದು ಹೇಳಿದರು.
ಅಧಿಕಾರ ಶಾಶ್ವತವಲ್ಲ, ಹುಟ್ಟು-ಸಾವಿನ ನಡುವೆ ಸಿಕ್ಕಿರುವ ಅಧಿಕಾರವಧಿಯಲ್ಲಿ ಹತ್ತಾರು ಜನ ಮೆಚ್ಚುವಂತ ಕೆಲಸ ಮಾಡಬೇಕು ಎನ್ನುವ ಆಲೋಚನೆಯನ್ನು ಇಟ್ಟುಕೊಂಡಿದ್ದೇನೆ. ತಾಲ್ಲೂಕಿನಾದ್ಯಂತ ಎಲ್ಲಾ ಕಡೆ ಸಿ.ಸಿ.ರಸ್ತೆ, ಕರೆಂಟ್, ಕುಡಿಯುವ ನೀರು, ಕೆರೆ ಕಟ್ಟೆಗಳಿಗೆ ನೀರು ತುಂಬಿಸುವುದು, ಶಾಲೆ, ಆಸ್ಪತ್ರೆಗಳ ನಿರ್ಮಾಣ ಮಾಡಲಾಗಿದೆ, ಯಾವುದೇ ಕೆಲಸ ಮಾಡಲಿ ಕ್ಷೇತ್ರದ ಮತದಾರರಿಗೆ ಅನುಕೂಲವಾಗಬೇಕೆನ್ನುವ ನಿಟ್ಟಿನಲ್ಲಿ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಚಿತ್ರದುರ್ಗದ ಬಹುದಿನಗಳ ಕನಸಾಗಿರುವಂತ ಅಪ್ಪರ್ ಭದ್ರ ಯೋಜನೆ, ಇನ್ನೇನು ಕೆಲವೇ ತಿಂಗಳಲ್ಲಿ ಸಂಪೂರ್ಣವಾಗಿ ಮುಗಿಯಲಿದೆ ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ, ಅದರ ಜೊತೆಗೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕೈಬಿಟ್ಟಿರುವಂತ ಕೆರೆಗಳಿಗೂ ಸಹ ಏತ ನೀರಾವರಿ ಯೋಜನೆ ಅಡಿ ಕೆರೆ ತುಂಬಿಸುವಂತಹ ಕಾರ್ಯಗಳನ್ನು ಈಗಾಗಲೇ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ರೈತರ ಬದುಕು ಸುಗಮವಾಗಲಿದೆ ಎಂದು ಹೇಳಿದರು.
ಮೇದೆಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿರಂಜನ್ ಮೂರ್ತಿ ಮಾತನಾಡಿ ಜಾತಿ ಧರ್ಮ ಜನಾಂಗದ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಶಾಸಕರು ನಮ್ಮ ಕ್ಷೇತ್ರದಲ್ಲಿರುವುದು ಅತ್ಯಂತ ಸಂತಸ ವಿಚಾರವಾಗಿದೆ, ಅಭಿವೃದ್ಧಿಯ ಕಡೆಗೆ ಒಂದು ಹೆಜ್ಜೆ ಎನ್ನುವ ಮಾತಿನಂತೆ ಸಾಕಷ್ಟು ಹಳ್ಳಿಗಳ ಅಭಿವೃದ್ಧಿ ಮಾಡುವುದಕ್ಕೆ ಪಣತೊಟ್ಟಿದ್ದಾರೆ, ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಹೆಸರು ಉಳಿಯುವಂತಹ ಅಭಿವೃದ್ಧಿ ಕೆಲಸಗಳು ಮಾಡಿರುವುದರಿಂದ ಅವರ ಹೆಸರು ಶಾಶ್ವತವಾಗಿ ಉಳಿಯಲಿದೆ ಎಂದು ಅಭಿಮಾನದ ಮಾತುಗಳನ್ನು ವ್ಯಕ್ತಪಡಿಸಿದರು.
ಬೆಟ್ಟದ ನಾಗೇನಹಳ್ಳಿ ಗ್ರಾಮದ ಮುಖಂಡ ಕಲ್ಲೇಶ್ ಮಾತನಾಡಿ ಕಾರ್ಯಕರ್ತರ ಜೊತೆ ಉತ್ತಮ ಬಾಂಧವ್ಯವಿಟ್ಟುಕೊAಡಿರುವ ಶಾಸಕ ಕೆ ಸಿ ವೀರೇಂದ್ರ ಪಪ್ಪಿರವರು ಕ್ಷೇತ್ರದ ಎಲ್ಲಡೆ ಹುಡುಕಿ ಕೆಲಸ ಮಾಡುವ ಜಾಣ್ಮೆಯಿದೆ. ಅಭಿವೃದ್ದಿ ಕೆಲಸಗಳು ಕ್ಷೇತ್ರದ ಮತದಾರರ ಮನದಲ್ಲಿ ಉಳಿದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಬೆಟ್ಟದ ನಾಗೇನಹಳ್ಳಿ ಗ್ರಾಮದಿಂದ ಬೆನಕನಹಳ್ಳಿ ರಸ್ತೆ ಅಭಿವೃದ್ಧಿಗೆ 95 ಲಕ್ಷ, ಸಿಂಗಾಪುರದಿಂದ ದನದ ಓಣಿ ರಸ್ತೆ ಅಭಿವೃದ್ಧಿ ರೂ.95 ಲಕ್ಷ, ಚಿತ್ರದುರ್ಗ ನಗರದ ವಿದ್ಯಾನಗರ ರಸ್ತೆ ಅಭಿವೃದ್ಧಿಗೆ 95 ಲಕ್ಷ ಒಟ್ಟು 2 ಕೋಟಿ 85 ಲಕ್ಷ ಅಭಿವೃದ್ಧಿ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಗ್ಯಾರೆಂಟಿ ಸಮಿತಿ ಜಿಲ್ಲಾಧ್ಯಕ್ಷ ಗಂಜಿಗಟ್ಟಿ ಶಿವಣ್ಣ, ಇಂಜಿನಿಯರ್ಗಳಾದ ವಿನಾಯಕ್, ಶರತ್, ಶಾಸಕರ ವಿಶೇಷ ಕರ್ತವ್ಯ ಅಧಿಕಾರಿ ಸತ್ಯನಾರಾಯಣ ಹಾಗೂ ಗ್ರಾಮಸ್ಥರಾದ ಮಂಜುನಾಥ್, ಶೇಖರಪ್ಪ, ರವಿಕುಮಾರ್, ಕುಮಾರಸ್ವಾಮಿ, ಪ್ರಿಯಾ, ಜಯಮ್ಮ, ಕಾವ್ಯ, ರೇಣುಕಮ್ಮ, ರಾಜಮ್ಮ, ಗಂಗಮ್ಮ, ದೇವಕ್ಕ, ಮಹಾದೇವಪ್ಪ, ಸಿದ್ದೇಶ್,ಮಂಜಣ್ಣ, ರವಿಕುಮಾರ್, ಕಲ್ಲೇಶ್ ವೈಭವ ಪ್ರಕಾಶ್, ಅಜಯ್, ದುಗ್ಗಪ್ಪ, ದಿನೇಶ್, ಮಹಾಂತೇಶ್, ವೀರೇಂದ್ರ, ಸತೀಶ್, ಮಲ್ಲಿಕಾರ್ಜುನ್, ನವೀನ್, ನಾಗರಾಜ್, ತಿಮ್ಮೇಶ್, ಸಚಿನ್ ಹಾಗೂ ಇತರರು ಇದ್ದರು.

































