ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ನಾಡಗೀತೆಯನ್ನು ಕಡ್ಡಾಯವಾಗಿ ಹಾಡುವ ಸ್ವಯಂನಿಯಂತ್ರಿತ ವ್ಯವಸ್ಥೆ ರೂಪಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯವು ಸಾಂಸ್ಕೃತಿಕ ಪರಂಪರೆ ಮತ್ತು ಭಾಷಾ ಅಸ್ಮಿತೆ ಗೌರವಿಸುವ ರಾಜ್ಯವಾಗಿದೆ. ಜಯ ಭಾರತ ಜನನಿಯ ತನುಜಾತೆ ಎಂಬ ಕುವೆಂಪು ಅವರ ನಾಡಗೀತೆಯು ಕರ್ನಾಟಕದ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ವಿದ್ಯಾರ್ಥಿಗಳಲ್ಲಿ ರಾಜ್ಯಾಭಿಮಾನ, ದೇಶಭಕ್ತಿ ಮತ್ತು ಸಾಂಸ್ಕೃತಿಕ ಅರಿವನ್ನು ಬೆಳೆಸುವ ಉದ್ದೇಶದಿಂದ ಶಾಲೆಗಳಲ್ಲಿ ನಾಡಗೀತೆಯನ್ನು ಕಡ್ಡಾಯವಾಗಿ ಹಾಡುವುದು ಅಗತ್ಯವಾಗಿದೆ. ಒಂದು ವೇಳೆ ಕಟ್ಟುನಿಟ್ಟಾಗಿ ಸೂಚನೆ ಪಾಲಿಸದಿದ್ದಲ್ಲಿ ಶಾಲಾ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಪ್ರತಿದಿನ ಪ್ರಾರ್ಥನಾ ಸಮಯದಲ್ಲಿ ಸಾಮೂಹಿಕವಾಗಿ ಲಯಬದ್ಧವಾಗಿ ಸರಿಯಾದ ಉಚ್ಚಾರಣೆಯೊಂದಿಗೆ ನಿಗದಿತ ಸಮಯದಲ್ಲಿ ನಾಡಗೀತೆ ಹಾಡಬೇಕು. ಶುದ್ಧ ಕನ್ನಡದಲ್ಲಿ ಸರಿಯಾದ ಮತ್ತು ಲಯದೊಂದಿಗೆ ನಾಡಗೀತೆ ಹಾಡಲು ಸಂಗೀತ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ಕೊಡಿಸುವಂತೆಯೂ ತಿಳಿಸಲಾಗಿದೆ.
ವಿಶೇಷ ದಿನಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಸೇರಿ ರಾಷ್ಟ್ರೀಯ ಮತ್ತು ನಾಡ ಹಬ್ಬ, ಶಾಲಾ ವಾರ್ಷಿಕೋತ್ಸವ ಮತ್ತು ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ನಾಡಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಎಂದು ಹೇಳಲಾಗಿದೆ.
ನಾಡಗೀತೆಯ ಅರ್ಥ ಮತ್ತು ಮಹತ್ವವನ್ನು ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಶಿಕ್ಷಕರ ಮೂಲಕ ತಿಳಿಸಬೇಕು. ಇದರ ಭಾವವನ್ನು ಅರ್ಥ ಮಾಡಿಕೊಂಡು ಸ್ವಯಂ ಪ್ರೇರಣೆಯಿಂದ ಹಾಡಲು ಅನುಕೂಲವಾಗುತ್ತದೆ. ನಾಡಗೀತೆಯನ್ನು ಹಾಡುವಾಗ ವಿದ್ಯಾರ್ಥಿಗಳಲ್ಲಿ ಗೌರವ ಶಿಸ್ತು ಏಕತೆಯ ಭಾವನೆ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ. ಶಾಲಾ ಸೂಚನಾ ಫಲಕದಲ್ಲಿ ಈ ಸುತ್ತೋಲೆಯನ್ನು ಪ್ರದರ್ಶಿಸಿ ಹಿನ್ನೆಲೆ ಹಾಗೂ ಮಹತ್ವವನ್ನು ಪೋಷಕರಿಗೂ ತಿಳಿಸಲು ಸೂಚಿಸಲಾಗಿದೆ.






























