ಚಿತ್ರದುರ್ಗ.. ಚಿತ್ರದುರ್ಗಕ್ಕೆ ಯಾರಾದರೂ ಪ್ರವಾಸಿಗರು, ಹೊರಗಿನಿಂದ ಬಂದವರಿಗೆ, ಅಪರೂಪವಾದ ವ್ಯಕ್ತಿ ಒಬ್ಬರ ಪರಿಚಯವಾದರೆ, ಕುತೂಹಲದಿಂದ ಅವರ ವೇಷಭೂಷಣವನ್ನು ವೀಕ್ಷಿಸಿ, ಅವರೊಂದಿಗೆ ಛಾಯಾಚಿತ್ರ ತೆಗೆದುಕೊಂಡು ಹೋಗುವ, ಸಾಮಾನ್ಯ ದೃಶ್ಯ ಒಂದು ಚಿತ್ರದುರ್ಗದ ರಸ್ತೆಗಳಲ್ಲಿ ಕಾಣಸಿಗುತ್ತದೆ.
ಆ ವ್ಯಕ್ತಿ ದಿನಕ್ಕೊಂದು ವೇಷಭೂಷಣವನ್ನು ಧರಿಸಿ, ಸ್ವತಃ ತಾವೇ ಕೈಯಿಂದ ಸಿದ್ಧಪಡಿಸಿದ ವೈವಿಧ್ಯಮಯವಾದ ಟೋಪಿ, ಕಾಲ್ ಚೀಲ, ಸೊಂಟಪಟ್ಟಿ, ಕೈಚೈನು, ಆಭರಣಗಳನ್ನ, ಉಡುಪುಗಳನ್ನು ಸಿದ್ಧಪಡಿಸಿಕೊಂಡು, ಸಾಮಾಜಿಕ ಬದಲಾವಣೆ ತರುವಂತಹ ಸಂದೇಶಗಳನ್ನು ಸಾರುತ್ತ, ಪರಿಸರದ ಬಗ್ಗೆ ಕಾಳಜಿಯನ್ನ ತೋರುತ್ತಾ, ದೈಹಿಕ ಶ್ರಮಕ್ಕೆ ಆದ್ಯತೆ ನೀಡುತ್ತಾ, ದಿನಕ್ಕೊಂದು 20 ಕಿಲೋಮೀಟರ್ ನಡೆದಾಡಿಕೊಂಡು, ಜನರನ್ನ ಮನರಂಜಿಸುವುದರ ಜೊತೆಗೆ, ಅವರಲ್ಲಿ ಪರಿಸರ ಟಜಾಗೃತಿಯನ್ನು ಮೂಡಿಸುತ್ತಿರುವ ಚಿತ್ರದುರ್ಗದ ಅಪರೂಪ ವ್ಯಕ್ತಿ ಇಟಗಿ ಉಮೇಶ್ ನಮಗೆಲ್ಲರಿಗೂ ಸ್ಪೂರ್ತಿ ಆಗಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ ಎಚ್ ಕೆ ಎಸ್ ಸ್ವಾಮಿಯವರು ಕರೆ ನೀಡಿದ್ದಾರೆ.
ಅವರು ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸಂವಾದ ಮಾಡಿ, ಪರಿಸರ ಜಾಗೃತಿ ಮೂಡಿಸುವುದರ ಬಗ್ಗೆ ವೇಷಭೂಷಣಗಳನ್ನು ಧರಿಸಿ ಬಂದಿದ್ದ ಶ್ರೀ ಇಟಗಿ ಉಮೇಶ್ ರವರನ್ನು ಸಂದರ್ಶಿಸುತ್ತಾ, ಅವರ ವಿಚಾರಗಳನ್ನ ಸಮಾಜಕ್ಕೆ ಪರಿಚಯಿಸಬೇಕು ಎಂದು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದರು.
ನಾಟಕಗಳಲ್ಲಿ, ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಬಣ್ಣ ಹಚ್ಚಿ, ದೇಶಭೂಷಣ ಧರಿಸಲು ಯುವ ಜನಾಂಗ ನಾಚಿಕೆ ಪಡುತ್ತಿರುವ ಇಂದಿನ ಕಾಲದಲ್ಲಿ, ಸಾರ್ವಜನಿಕವಾಗಿ, ರಸ್ತೆಗಳಲ್ಲಿ ದಿನನಿತ್ಯ ಬೆಳಿಗ್ಗೆಯಿಂದ ಸಂಜೆವರೆಗೂ ವೇಷಭೂಷಣಗಳನ್ನು ಧರಿಸಿ, ಜನರಿಗೆ ಒಳ್ಳೆಯ ಸಾಮಾಜಿಕ ಕಳಕಳಿ ಇರುವಂತಹ, ಪರಿಸರ ಚಿಂತನೆಯ ಸಂದೇಶಗಳನ್ನ ಸಾರುತ್ತಿರುವಂತಹ ಇಂತಹ ವ್ಯಕ್ತಿಗಳನ್ನ ಸಮಾಜ ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಗಾಡಿ ಇದ್ದರೂ ನಡೆದಾಡಿಕೊಂಡು, ಕೈಕಾಲುಗಳ, ಮಂಡಿ ಚಿಪ್ಪಿನ, ಶರೀರದ ವಿವಿಧ ಮೂಳೆ ಮಾಂಸ ಖಂಡಗಳ ಆರೋಗ್ಯ ಸುಧಾರಿಸಲಿ ಎಂದು, ದಿನಕ್ಕೆ 20 ರಿಂದ 25 ಕಿಮೀ ನಡೆದಾಡಿಕೊಂಡು ಓಡಾಡುವ ಈ ಪರಿಸರವಾದಿ, ಮನುಷ್ಯ ನಡೆದಾಡಿಕೊಂಡು ಹೋದಾಗ ಕೈಕಾಲುಗಳನ್ನು ಬಳಸಿಕೊಂಡಾಗ, ಆರೋಗ್ಯ ಪೂರ್ಣವಾಗಿರುತ್ತಾನೆ ಹಾಗೂ ನಾಲ್ಕೈದು ದಾರಿಗಳ ಪರಿಚಯವಾಗುತ್ತದೆ, ಜಿಪಿಎಸ್ ಹಾಕಿಕೊಂಡು ರಸ್ತೆ ಹುಡುಕುವುದಕ್ಕಿಂತ, ನಡೆದಾಡಿಕೊಂಡು ಜನರ ಜೊತೆ ಬಾಂಧವ್ಯ ಸೃಷ್ಟಿಸಬೇಕು ಎಂದು ಸಾರುತ್ತಿರುವ ಇವರ ಸಂದೇಶವನ್ನ, ಮಹಾತ್ಮ ಗಾಂಧೀಜಿ ಅವರು ಸಹ ಅಂದು ಅನುಷ್ಠಾನಗೊಳಿಸಿದ್ದರು. ಕಾಲಿದ್ದಾಗ ಕಾರ್ ಏಕೆ ಎಂದು ಅವರು ನಡೆದಾಡಿಕೊಂಡೆ ದೇಶಕ್ಕೆ ಸ್ವತಂತ್ರ ತಂದು ಕೊಡುವುದರಲ್ಲಿ ಮುಂಚಿಣಿಯಲ್ಲಿದ್ದರು, ಅಂತಹ ಮಾದರಿಯನ್ನ ಇವರು ಇಂದು ಅನುಷ್ಠಾನಗೊಳಿಸುತ್ತಿರುವುದು ನಮಗೆಲ್ಲರಿಗೂ ಆಶ್ಚರ್ಯವಾಗಿದೆ ಎಂದರು.
ಮನೆಯಲ್ಲಿ ವೇಷಭೂಷಣಕ್ಕೆ, ಪರಿಸರದಲ್ಲಿ ಸಿಗುವಂತಹ ಕಾಗೆ, ಕೋಳಿಯ ರೆಕ್ಕೆಗಳು, ನವಿಲುಗರಿಗಳು ಗಿಳಿಯ ರೆಕ್ಕೆಯ ಭಾಗಗಳು, ಬಿದಿರಿನಿಂದ ಮಾಡಿದ ದಾರ ಚೊಳ್ಳದುರಿ, ಮನೆಯಲ್ಲಿ ಉಪಯೋಗಿಸುವಂತಹ ವಸ್ತುಗಳನ್ನೇ ಬಳಕೆ ಮಾಡಿ, ಮಣಿಗಳ ಸರ, ಹಲವಾರು ಸೌಂದರ್ಯ ವೃದ್ಧಿಸುವಂತಹ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಕೆ ಮಾಡಿ, ಈ ರೀತಿ ಹಲವಾರು ದೇಶಭೂಷಣಗಳನ್ನ ಧರಿಸಿಕೊಂಡು, ರಸ್ತೆಯಲ್ಲಿ ನಡೆದಾಡಿಕೊಂಡು, ಮಕ್ಕಳಿಗೆ ಮತ್ತು ಜನಸಾಮಾನ್ಯರಿಗೆ ಮನರಂಜನೆಯ ಜೊತೆಗೆ, ಒಂದು ಸಂದೇಶವನ್ನು ಸಾರುವ ಇಂತಹ ವ್ಯಕ್ತಿಗಳು ಅಪರೂಪ ಎಂದರು.
ಚಿತ್ರದುರ್ಗದಲ್ಲಿ ಓದಿ, ಚಿತ್ರದುರ್ಗದಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಾ, ಈ ರೀತಿ ಹವ್ಯಾಸ ರೂಡಿಸಿಕೊಂಡಿರುವ ಇವರು, ಪ್ರತಿಯೊಬ್ಬರ ಜೊತೆ ಕನಿಷ್ಠಪಕ್ಷ ಅರ್ಧಗಂಟೆ ಮಾತನಾಡಿ, ಯಾವುದಾದರೂ ಸ್ಥಳಗಳಿಗೆ ಹೋದಾಗ, ಜನರು ಇತ್ತ ಕಡೆ ಗಮನ ಸೆಳೆದಾಗ, ಅವರೊಂದಿಗೆ ಸಂದರ್ಶನ ಮಾಡಿ, ನದಿ, ಕೊಳ, ನೀರಿನ ಮೂಲಗಳನ್ನ ಸಂರಕ್ಷಿಸಿಕೊಳ್ಳುವುದರ ಬಗ್ಗೆ, ಉದಾಹರಣೆ ಸಮೇತ ವಿವರಿಸುವುದು, ಎಂತಹ ವೈಜ್ಞಾನಿಕ ಜ್ಞಾನ ಇರೋವರೆಗೂ ಸಹ ನಾಚಿಕೆ ಆಗುವಂತೆ ವಿವರಿಸುತ್ತಾರೆ ಎಂದರು.
ಯಾತ್ರಾಸ್ಥಳಗಳಿಗೆ ಭೇಟಿ ನೀಡಿದಾಗ ನದಿ ಮೂಲಗಳಿಗೆ ಕಸ ಎಸೆಯುವುದು, ಬಟ್ಟೆ ಬರೆಗಳನ್ನು ಎಸೆಯುವುದು, ಬಗ್ಗೆಯೂ ಜಾಗೃತಿ ಮೂಡಿಸುತ್ತಿರುವ ಇವರು, ಜನರಿಗೆ ಹಾಸ್ಯವಾಗಿ ನಿಮ್ಮ ಒಡವೆಗಳನ್ನು ಎಸೆದು ನೋಡಿ, ಅಮೂಲ್ಯವಾದ ವಸ್ತುಗಳನ್ನ ನಾವಿಟ್ಟುಕೊಂಡು, ಕೊಳಕಾದ, ಕೊಳೆಯಲಾರದ ವಸ್ತುಗಳನ್ನ ನದಿ ಮೂಲಗಳಿಗೆ ಎಸೆಯುವುದು ತಪ್ಪು ಎಂದು ಮನದಟ್ಟು ಮಾಡಿಕೊಡುತ್ತಿದ್ದಾರೆ ಎಂದರು.
ಇಲ್ಲಿಯವರೆಗೂ ಹಾಕಿರುವ ವೇಷಭೂಷಣಗಳ ಬಗ್ಗೆ ಲೆಕ್ಕ ಇಡದ ಇವರು, ಜನರೇ ಇವರ ಆಲ್ಬಮ್ ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ, ಯಾವುದೇ ಪ್ರಚಾರಕ್ಕೆ ಮತ್ತು ಪ್ರಶಸ್ತಿ ಪತ್ರಗಳಿಗೆ ಆಸೆ ಪಡದೆ, ಜೀವನಪರ್ಯಂತ ಸೇವೆ ಮನೋಭಾವನೆಯನ್ನು ರೂಡಿಸಿಕೊಂಡಿರುವ ಇವರು, ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು, ಇವರನ್ನ ಹಲವಾರು ಸಂಸ್ಥೆಗಳು, ತಮ್ಮ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕರೆಸಿ, ಇವರಿಂದ ದೇಶಭೂಷಣಗಳ ಬಗ್ಗೆ, ನಾಟಕಗಳ ಬಗ್ಗೆ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ, ದೇಶಿಯ ವಸ್ತುಗಳ ಬಳಕೆ ಮಾಡುವುದರ ಬಗ್ಗೆ ಜಾಗೃತಿ ಮೂಡಿಸಲು ಬಳಸಿಕೊಳ್ಳಬೇಕೆಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊಂಡಿದ್ದಾರೆ.