ಕೊಟ್ಟಾಯಂ : ಕೇರಳದ ಜನಪ್ರಿಯ ಹಾಗೂ ಪ್ರಸಿದ್ಧ ಆನೆ, ಎರಟ್ಟುಪೆಟ್ಟಾ ಅಯ್ಯಪ್ಪನ್ 55ನೇ ವಯಸ್ಸಿನಲ್ಲಿ ನಿಧನವಾಗಿದ್ದು, ಈ ಸುದ್ದಿ ಆನೆಯ ಅಪಾರ ಅಭಿಮಾನಿಗಳಲ್ಲಿ ವಿಷಾದ ಮೂಡಿಸಿದೆ. ಕಳೆದ ನಾಲ್ಕು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಪಡೆಯುತ್ತಿದ್ದರೂ ಆರೋಗ್ಯದಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿಲ್ಲ. ಕೆಲ ದಿನಗಳ ಹಿಂದೆ ಅವರು ಮೂರು ಬಾರಿ ಕುಸಿದು ಬಿದ್ದಿದ್ದು, ಅದರ ಬಳಿಕ ಸ್ವಂತವಾಗಿ ಎದ್ದು ನಿಲ್ಲಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅಯ್ಯಪ್ಪನ್ ಕೊಟ್ಟಾಯಂ ಜಿಲ್ಲೆಯ ಎರಟ್ಟುಪೆಟ್ಟಾ ಬಳಿಯ ತೀಕೋಯಿ ಪ್ರದೇಶದ ಪರವನ್ ಪರಂಪಿಲ್ ಮನೆತನದ ಮಾಲೀಕತ್ವದ ಆನೆಯಾಗಿತ್ತು. ಈ ಆನೆ ನೂರಾರು ದೇವಸ್ಥಾನ ಉತ್ಸವಗಳಲ್ಲಿ ಭಾಗವಹಿಸಿದ್ದ ಅಪಾರ ಇತಿಹಾಸ ಹೊಂದಿದ್ದು, ತಮ್ಮ ಭವ್ಯ ಶರೀರ, ಶಿಸ್ತುಪೂರ್ಣ ವರ್ತನೆ ಹಾಗೂ ಆಕರ್ಷಕ ಸನ್ನಿವೇಶಗಳಿಂದ ಸಾವಿರಾರು ಜನರ ಮನಸ್ಸು ಗೆದ್ದಿದ್ದರು.
ಆನೆ 1977ರ ಡಿಸೆಂಬರ್ 14ರಂದು ಕೊಡನಾಡಿನಲ್ಲಿ ಅರಣ್ಯ ಇಲಾಖೆಯ ಕೇಂದ್ರೀಯ ಶಿಬಿರದಿಂದ ಮರಿ ಹರಾಜಿನಲ್ಲಿ ಖರೀದಿಸಲಾಗಿತ್ತು. ಅಂದಿನಿಂದ ವೇಳ್ಲುಕುನ್ನೆಲ್ ಪರವನ್ ಪರಂಪಿಲ್ ಮನೆತನದಲ್ಲಿ ಸಾಕಲ್ಪಟ್ಟ ಆನೆಗೆ “ಅಯ್ಯಪ್ಪನ್ ಗಜರಾಜನ್”, “ಗಜೋತಮನ್”, “ಗಜರತ್ನಂ”, “ಕಲಭಕೇಸರಿ”, “ಟ್ರಾವಂಕೂರ್ ಗಜಶ್ರೇಷ್ಠನ್”, “ಐರಾವತಸಮನ್” ಎಂಬ ಗೌರವದ ಬಿರುದುಗಳು ದೊರಕಿದ್ದವು.
ಅಯ್ಯಪ್ಪನ್ ಕೇವಲ ಒಂದು ಆನೆಯಷ್ಟೆ ಅಲ್ಲ ಅದು ಕೇರಳದ ಸಂಸ್ಕೃತಿ, ಭಕ್ತಿಶ್ರದ್ಧೆ ಮತ್ತು ಉತ್ಸವಗಳ ಅವಿಭಾಜ್ಯ ಭಾಗವಾಗಿತ್ತು. ಅನೇಕ ಉತ್ಸವಗಳಲ್ಲಿ ಮೆರವಣಿಗೆಯ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಆನೆ, ವಿವಿಧ ದೇವಾಲಯಗಳಲ್ಲಿ ಭಕ್ತರ ಪ್ರೀತಿಗೆ ಪಾತ್ರವಾಗಿತ್ತು. ಕೇರಳದ ಅನೇಕ ದೇವಾಲಯ ಸಮಿತಿಗಳು, ಆನೆ ಅಭಿಮಾನಿಗಳು ಈ ಶ್ರೇಷ್ಠ ಗಜಶಕ್ತಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅಂತಿಮ ದರ್ಶನಕ್ಕಾಗಿ ನೂರಾರು ಜನರು ತೀಕೋಯಿಗೆ ಆಗಮಿಸಿದ್ದಾರೆ.