ಧರ್ಮಸ್ಥಳ: ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ನ. 15 ರಿಂದ 19ರ ವರೆಗೆ ನಡೆಯಲಿವೆ. ನ. 18 ರಂದು ಮಂಗಳವಾರ ಸಂಜೆ ಗಂಟೆ 5 :00 ರಿಂದ ಸರ್ವಧರ್ಮ ಸಮ್ಮೇಳನದ ಅಧಿವೇಶನವು ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ.
ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲ ಸೌಕರ್ಯಾಭಿವೃದ್ಧಿ ಇಲಾಖೆ ಸಚಿವರಾದ ಡಾ.
ಬಿ.ಎಂ. ಪಾಟೀಲ್ ಸರ್ವಧರ್ಮ ಸಮ್ಮೇಳನದ 93 ನೇ ಅಧೀವೇಶನ ಉದ್ಘಾಟಿಸಲಿದ್ದಾರೆ.
ಹರಿಹರಪುರದ ಪೂಜ್ಯ ಸ್ವಯಂಪ್ರಕಾಶ್ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಬೆಂಗಳೂರಿನ ಪ್ರಜಾವಾಣಿ ಪತ್ರಿಕೆಯ ಮುಖ್ಯ ಉಪಸಂಪಾದಕರಾದ ಎಸ್. ಸೂರ್ಯಪ್ರಕಾಶ್ ಪಂಡಿತ್ ಮತ್ತು ಖ್ಯಾತ ಅಂಕಣಕಾರ ತನ್ನೀರ್ ಅಹಮ್ಮದ್ ಉಲ್ಲಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಗಂಟೆ 8.30 ರಿಂದ ರಿಂದ ಚೆನ್ನೈನ ವಿದುಷಿ ಡಾ. ಶೀಲಾ ಉನ್ನಿಕೃಷ್ಣನ್ ನಿರ್ದೇಶನದಲ್ಲಿ ಶ್ರೀದೇವಿ ನೃತ್ಯಾಲಯದ ಕಲಾವಿದರಿಂದ ಭರತನಾಟ್ಯ ನೃತ್ಯ ಪ್ರದರ್ಶನ ನಡೆಯಲಿದೆ.
ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ನಡೆಯಲಿದೆ. ನ. 19 ರಂದು ಬುಧವಾರ ಸಂಜೆ 5 ಗಂಟೆಗೆ ಸಾಹಿತ್ಯ ಸಮ್ಮೇಳನದ 93 ನೇ ಅಧಿವೇಶನವನ್ನು ಹಿರಿಯ ಸಾಹಿತಿ ಮತ್ತು ಅಂಕಣಕಾರ ಪ್ರೊ. ಪ್ರೇಮಶೇಖರ ಉದ್ಘಾಟಿಸಲಿದ್ದಾರೆ.
ಬೆಂಗಳೂರಿನ “ವಿಶ್ವವಾಣಿ” ಪತ್ರಿಕೆಯ ಮುಖ್ಯ ಸಂಪಾದಕ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಲೇಖಕಿ ಶಾಂತಾ ನಾಗಮಂಗಲ, ವಿವೇಕಹಂಸ ಮಾಸಪತ್ರಿಕೆಯ ಸಂಪಾದಕ ಡಾ. ರಘು ವಿ. ಮತ್ತು ಧಾರವಾಡದ ಖ್ಯಾತ ಸಾಹಿತಿ ಡಾ. ಬಿ.ಎಂ. ಶರಭೇಂದ್ರ ಸ್ವಾಮಿ ಉಪನ್ಯಾಸ ನೀಡಲಿದ್ದಾರೆ.

































