ಪುಣೆ: ಸ್ವಯಂ ತಾನು ಶಿವನ ಅವತಾರ ಎಂದು ನಂಬಿಸಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಮತ್ತೋರ್ವ ಸ್ವಯಂಘೋಷಿತ ದೇವಮಾನವನನ್ನು ಪೊಲೀಸರು ಬಂಧಿಸಿದ್ದಾರೆ.
ವಸೈಸಾಯಿಯ ಸ್ವಯಂ ಘೋಷಿತ ದೇವಮಾನವ ಹೃಷಿಕೇಶ್ ವೈದ್ಯ ಬಂಧಿತ ಆರೋಪಿ. 35 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಮಾಣಿಕ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಮಂಜರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಸಂತ್ರಸ್ತೆ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಹೃಷಿಕೇಶ್ ವೈದ್ಯ ತಾನು ಶಿವನ ಅವತಾರ, ನೀನು ನನ್ನ ಪಾರ್ವತಿ ಎಂದು ಮಹಿಳೆಯನ್ನು ನಂಬಿಸಿ ಹೋಟೆಲ್ಗೆ ಕರೆಸಿಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ಮಹಿಳೆ ಮತ್ತು ಆರೋಪಿ ಫೇಸ್ಬುಕ್ ಮೂಲಕ ಪರಿಚಯವಾಗಿದ್ದಾರೆ. ಆಧ್ಯಾತ್ಮಿಕ ಬೋಧನೆಗಳ ಮೂಲಕ ಇಬ್ಬರೂ ಸಂಪರ್ಕ ಸಾಧಿಸಿದ್ದರು. 2023 ರಲ್ಲಿ ತನ್ನನ್ನು ಮೊದಲು ಪುಣೆಯ ಮಂಜರಿ ಪ್ರದೇಶದ ಲಾಡ್ಜ್ಗೆ ಕರೆಸಿಕೊಂಡು ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ಕೃತ್ಯದ ಫೋಟೋಗಳನ್ನು ತೆಗೆದುಕೊಂಡು ನನಗೆ ಬ್ಲ್ಯಾಕ್ಮೇಲ್ ಮಾಡಲು ಪ್ರಾರಂಭಿಸಿದ್ದರು. ಅದಾದ ನಂತರ, 2025 ರಲ್ಲಿ, ವಸೈನಲ್ಲಿರುವ ಲಾಡ್ಜ್ಗೆ ಮತ್ತೊಮ್ಮೆ ಕರೆದೊಯ್ದು ಅತ್ಯಾಚಾರ ಎಸಗಿದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಿ ಆರೋಪಿ ಬಾಬಾನನ್ನು ಬಂಧಿಸಲಾಗಿದೆ. ನಾಸಿಕ್ನ ಖರಾತ್ ಪ್ರಕರಣದ ಬಳಿಕ ಮಹಿಳೆ ಧೈರ್ಯ ಮಾಡಿ ಸ್ವಯಂಘೋಷಿತ ದೇವಮಾನವನ ವಿರುದ್ಧ ದೂರು ನೀಡಿದ್ದಾರೆ. ಕೃತ್ಯ ಪುಣೆಯಲ್ಲಿ ನಡೆದ ಕಾರಣ, ಪ್ರಕರಣದಲ್ಲಿ ದಾಖಲಾದ ಎಫ್ಐಆರ್ ಅನ್ನು ಅಲ್ಲಿನ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದೇವೆ ಎಂದು ಮಾಣಿಕ್ಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹೀರಾಲಾಲ್ ಜಾಧವ್ ತಿಳಿಸಿದ್ದಾರೆ.































