ಚಿತ್ರದುರ್ಗ : ವಿದ್ಯುತ್ ಖಾಸಗಿಕರಣಗೊಳಿಸುವುದನ್ನು ವಿರೋಧಿಸಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ಹಾಗೂ ನೌಕರರು ತಿಪ್ಪಜ್ಜಿ ಸರ್ಕಲ್ನಲ್ಲಿರುವ ಬೆಸ್ಕಾಂ ವಿಭಾಗೀಯ ಕಚೇರಿ ಎದುರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.
ಟಾಟಾ ಪವರ್ ಕಂಪನಿ ಪರ್ಯಾಯ ವಿದ್ಯುತ್ ವಿತರಣಾ ಪರವಾನಗಿಗೆ ಕೆಇಆರ್ಸಿಗೆ 19 ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಚಿತ್ರದುರ್ಗ ಜಿಲ್ಲೆ ಕೂಡ ಸೇರಿದೆ.
ಇದರ ವಿರುದ್ದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ, ಎಂಜಿನಿಯರ್ಸ್ ಅಸೋಸಿಯೇಷನ್, ಎಸ್.ಸಿ. ಎಸ್.ಟಿ. ಕಲ್ಯಾಣ ಸಂಸ್ಥೆ, ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ವಿದ್ಯುತ್ ಖಾಸಗಿಕರಣವನ್ನು ಸಂಪೂರ್ಣವಾಗಿ ವಿರೋಧಿಸಿದವು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಉಪಾಧ್ಯಕ್ಷ ಕೆ.ಪಿ.ಬಸವರಾಜ್ ಮಾತನಾಡಿ ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣಗೊಳಿಸುವುದರಿಂದ ರೈತರು, ಸಾರ್ವಜನಿಕರು, ನೌಕರರು ಹಾಗು ಗ್ರಾಹಕರ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆಯಿದೆ. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹಜ್ಯೋತಿ, ಗಂಗಾ ಕಲ್ಯಾಣ ಹಾಗೂ
ಕುಟೀರ ಜ್ಯೋತಿ ಇನ್ನು ಮುಂತಾದ ಉಚಿತ ವಿದ್ಯುತ್ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ. ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಬದಲು ಖಾಸಗಿ ಕಂಪನಿಗಳಿಗೆ ಪರ್ಯಾಯ ವಿತರಣಾ ಪರವಾನಗಿ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು?
ಕೆಇಆರ್ಸಿಗೆ. ಜೂ.23, 2026 ರವರೆಗೆ ಸಲ್ಲಿಸಬೇಕಾದ ಆಕ್ಷೇಪಣಾ ಪತ್ರಗಳ ಕುರಿತು ನೌಕರರು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿ ಟಾಟಾ ಪವರ್ ಕಂಪನಿ ಸಲ್ಲಿಸಿರುವ ಪರ್ಯಾಯ ವಿತರಣಾ ಪರವಾನಗಿ ಅರ್ಜಿಯನ್ನು ತಿರಸ್ಕರಿಸುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಕರೆ ನೀಡಲಾಯಿತು.
ಕೆಇಬಿ. ಸಂಘದ ಸಹಾಯಕ ಕಾರ್ಯದರ್ಶಿ ಹರೀಶ್ ಬಿ, ಕೇಂದ್ರ ಸಮಿತಿ ಸದಸ್ಯ ರವಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಸ್ಥಳೀಯ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಬಿ, ಕಾರ್ಯದರ್ಶಿ ಎಸ್.ಮಹೇಶ್, ಉಪಾಧ್ಯಕ್ಷ ಆರ್.ರವಿಕುಮಾರ್, ಎಕ್ಬಾಲ್, ಎಸ್ಸಿ. ಎಸ್ಟಿ. ನೌಕರರ ಸಂಘದ ರಮೇಶ್, ಪರಮೇಶ್, ಉಮೇಶ್, ಗುತ್ತಿಗೆದಾರರ ಸಂಘದ ಬಾಬು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ತಿಮ್ಮಣ್ಣ, ಸುಧಾಮಣಿ ಸೇರಿದಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಬೆಸ್ಕಾಂ ಸಹಾಯಕ ಇಂಜಿನಿಯರ್ಗಳು, ಅಧಿಕಾರಿಗಳು, ನೌಕರರು ಹಾಗು ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.































