ಚಿತ್ರದುರ್ಗ : ಜಿಲ್ಲೆಯಲ್ಲಿ ನಾಯಕ ಜನಾಂಗಕ್ಕೆ ಸೇರಿದ ಕೆಲವರು ಸರ್ಕಾರಿ ಸೇವೆಗೆ ಆಯ್ಕೆಯಾಗಿ ಉನ್ನತ ಹುದ್ದೆಯಲ್ಲಿರುವುದನ್ನು ಸಹಿಸದೆ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆಂದು ಆರೋಪಿಸಿರುವವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಚಿತ್ರನಾಯಕ ವೇದಿಕೆಯಿಂದ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಎದುರು ದಿನಾಂಕ : 6-7-2026 ರಂದು ಅಖಿಲ ಭಾರತ ಆದಿವಾಸಿ(ಎಸ್.ಟಿ.) ರಕ್ಷಣಾ ಸಮಿತಿ(ರಿ) ಬಸವನಗಿರಿಹಡ್ಡಿ, ಎಚ್.ಡಿ.ಕೋಟೆ ತಾಲ್ಲೂಕು ಮೈಸೂರು ಇದರ ಅಧ್ಯಕ್ಷರಾದ ಜಿ.ಸ್ವಾಮಿ ಮತ್ತು ಸಮಿತಿಯ ನಿರ್ದೇಶಕರೆಂದು ಹೇಳಿಕೊಂಡು ಜಿಲ್ಲೆಯಲ್ಲಿ ನಾಯಕ ಜನಾಂಗದಿಂದ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಗೊಂಡು ಸೇವೆ ಸಲ್ಲಿಸುತ್ತಿರುವ ಎನ್.ಆರ್.ಮಧು ಮತ್ತು ರಾಜಕುಮಾರ ಸಿ. ಹಾಗು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಗೊಂಡು ಸೇವೆಯಲ್ಲಿರುವ ಮಧು ಟಿ, ಕುಮಾರಿ ಸೋನು, ಪಿ.ಎಂ.ಸುಕೇಂದ್ರ ಹಾಗೂ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸುತ್ತಿರುವ ರಾಧಾ ಹೆಚ್.ಡಿ. ಇವರುಗಳ ಮೇಲೆ ಇನ್ನು ಹಲವಾರು ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ವಿನಾ ಕಾರಣ ಎದುರುದಾರರನ್ನಾಗಿ ಮಾಡಿ ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ, ಹಿಂದುಳಿದ ವರ್ಗಗಳ ನೇಮಕಾತಿಯಲ್ಲಿ ಮೀಸಲಾತಿ ಕಾಯ್ದೆ 1990 ಮತ್ತು ನಿಬಂಧನೆಗಳು 1992 ರ ಕಲಂ 4ಎಫ್ ಮತ್ತು 4ಸಿ ಅಡಿಯಲ್ಲಿ ಕ್ರಮ ಕೈಗೊಳ್ಳಲು ದೂರು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ.
1990 ರಲ್ಲಿ ಭಾರತ ಸರ್ಕಾರದ ಆದೇಶದಂತೆ ಪರಿಶಿಷ್ಟ ವರ್ಗ(ಎಸ್.ಟಿ.) ಅಡಿಯಲ್ಲಿ ಬರುವ 50 ಜಾತಿಗಳಲ್ಲಿ ನಾಯಕ ಜಾತಿಯೂ ಒಂದು. ಅದರಲ್ಲಿ ವಿಶೇಷವಾಗಿ ಈ ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗ ನಾಯಕ ಜಾತಿಯವರೆ ಹೆಚ್ಚಾಗಿದ್ದಾರೆ. ಈ ಭಾಗದ ನಾಯಕ ಜನಾಂಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಹಾಗೂ ಭೌಗೋಳಿಕ ವಿಶಿಷ್ಟ ಆಚಾರ-ವಿಚಾರಗಳ ಹಿನ್ನೆಲೆಯನ್ನು ಸಮಗ್ರವಾಗಿ ಅಧ್ಯಯನ ನಡೆಸಿದ ತರುವಾಯವೇ ನಾಯಕ ಜನಾಂಗವನ್ನು ಪರಿಶಿಷ್ಟ ವರ್ಗ ಪಟ್ಟಿಯಲ್ಲಿ ಸೇರಿಸಲಾಗಿದೆ. ಉನ್ನತ ಹುದ್ದೆಯಲ್ಲಿರುವ ನಾಯಕ ಜನಾಂಗದವರನ್ನೇ ಗುರಿಯಾಗಿಸಿಕೊಂಡು ಅರ್ಜಿ ಸಲ್ಲಿಸಿರುವುದು ದುರುದ್ದೇಶದಿಂದ ಕೂಡಿದೆ. ಅನುಸೂಚಿತ ಜಾತಿ/ಪಂಗಡಕ್ಕೆ ಸೇರಿದ ವ್ಯಕ್ತಿ ಅಧಿಕಾರಿಗಳ ಕಣ್ಣು ತಪ್ಪಿಸಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಲ್ಲಿ ಅಂತಹವ ವಿರುದ್ದ ಕ್ರಮ ಕೈಗೊಳ್ಳಲು ತಿಳಿಸಲಾಗಿದೆಯೆ ಹೊರತು ನೈಜ ಜಾತಿ ಪ್ರಮಾಣ ಪತ್ರ ಪಡೆದವರಿಗಲ್ಲ. ಹಾಗಾಗಿ ದೂರುದಾರರು ನೀಡಿರುವ ಅರ್ಜಿಯಲ್ಲಿ ಸತ್ಯಾಸತ್ಯತೆ ಇರುವುದಿಲ್ಲವೆನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ ಸೂಕ್ತ ಕಾನೂನು ಕ್ರಮ ಕೈಗೊಂಡು ಅರ್ಜಿಯನ್ನು ವಜಾಗೊಳಿಸುವಂತೆ ಚಿತ್ರನಾಯಕನ ವೇದಿಕೆಯವರು ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.
ಚಿತ್ರನಾಯಕ ವೇದಿಕೆ ಅಧ್ಯಕ್ಷ ಪ್ರಶಾಂತ್ಕುಮಾರ್ ಕೆ.ಟಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ನ್ಯಾಯವಾದಿಗಳಾದ ಅಶೋಕ್ಬೆಳಗಟ್ಟ, ಬೋಸಯ್ಯ ಅನುಶ್ರಿ, ದೇವಿಪ್ರಸಾದ್, ತಿಪ್ಪೇಸ್ವಾಮಿ, ಚಿನ್ನಪ್ಪ, ರಮೇಶ್, ಸಿ.ಬಾಬು ಇವರುಗಳು ಈ ಸಂದರ್ಭದಲ್ಲಿದ್ದರು.































