ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಶೇಕಡ 15 ರಷ್ಟು ಮೀಸಲಾತಿಯಲ್ಲಿ ವಿವಿಧ ಗುಂಪುಗಳಿಗೆ ಒಳ ಮೀಸಲಾತಿ ಜಾರಿ ಮಾಡುವ ಕುರಿತಂತೆ ನಿರ್ಧಾರ ಕೈಗೊಳ್ಳಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ವಿಶೇಷ ಸಂಪುಟ ಸಭೆ ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ವಿಶೇಷ ಸಂಪುಟ ಸಭೆಯಲ್ಲಿ ಒಳ ಮಿಸಲಾತಿ ಜಾರಿಗೆ ಬಗ್ಗೆ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಏಪ್ರಿಲ್ 16ರಂದು ನಡೆದ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ ನ್ಯಾಯಾಲಯ ಮೀಸಲಾತಿಯನ್ನು ಶೇ. 56ರ ಬದಲಿಗೆ ಶೇಕಡ 50ಕ್ಕೆ ಸೀಮಿತಗೊಳಿಸಿದೆ. ಹೀಗಾಗಿ ಸಮುದಾಯಗಳಿಗೆ ಶೇಕಡ 17ರ ಬದಲಿಗೆ ಶೇಕಡ 15ರಷ್ಟು ಮೀಸಲಾತಿ ಮಾತ್ರ ನೀಡಬಹುದು. ಹೀಗಾಗಿ ಈ ಹಿಂದೆ ಕೈಗೊಂಡಿದ್ದ ಒಳ ಮೀಸಲಾತಿ ವರ್ಗಿಕರಣ ಪರಿಷ್ಕರಿಸಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಲಾಗಿತ್ತು.
ಈ ತಾಂತ್ರಿಕ ಸಮಿತಿಯು ಪರಿಶಿಷ್ಟ ಜಾತಿಯ ಎಡಗೈ ಸಂಬಂಧಿಸಿದ ಜಾತಿಗಳು ಎ ಗುಂಪಿಗೆ ಶೇಕಡ 5.3, ಬಲಗೈ ಸಂಬಂಧಿಸಿದ ಜಾತಿಗಳು ಬಿ ಗುಂಪಿಗೆ ಶೇಕಡ 5.3, ಅಲೆಮಾರಿ, ಅರೆ ಅಲೆಮಾರಿ, ಸ್ಪೃಶ್ಯ ಜಾತಿಗಳು ಸಿ ಗುಂಪಿಗೆ ಶೇಕಡ 4.4 ರಷ್ಟು ಒಳ ಮೀಸಲಾತಿ ನಿಗದಿ ಮಾಡಬಹುದು ಎನ್ನುವ ಬಗ್ಗೆ ವರದಿಯಲ್ಲಿ ಸಲಹೆ ನೀಡಲಿದೆ ಎಂದು ಹೇಳಲಾಗಿದೆ.
ಇದರೊಂದಿಗೆ ಮೀಸಲಾತಿ ಮರು ವಿಂಗಡಣೆ ಮಾಡಿ ಪೂರಕವಾಗಿ ರೋಸ್ಟರ್ ಬಿಂದು ಗುರುತಿಸಿ ಕೊಡಲಿದ್ದಾರೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳ ಪೈಕಿ ಅವಕಾಶ ವಂಚಿತ ಉಪ ಜಾತಿಗಳಿಗೆ ಅವಕಾಶ ಕಲ್ಪಿಸಬೇಕೆಂಬುದು ಮೂರು ದಶಕಗಳು ಹೋರಾಟವಾಗಿದ್ದು, ಇಂದಿನ ಸಂಪುಟ ಸಭೆ ಕೈಗೊಳ್ಳುವ ಮಹತ್ವದ ನಿರ್ಧಾರದ ಕುರಿತು ಕುತೂಹಲ ಮೂಡಿದೆ.
































