ಚಿತ್ರದುರ್ಗ: ಈ ಬಾರಿ ವಾತಾವರಣದಲ್ಲಿ ಹೆಚ್ಚಿನ ವ್ಯತ್ಯಾಸವಾಗಿದ್ದು, ಬಿರು ಬೇಸಿಗೆ ಎಲ್ಲರನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ವೃದ್ಧರು, ಗರ್ಭಿಣಿಯರು, ಮತ್ತು ಮಕ್ಕಳು ವಿಶೇಷ ಕಾಳಜಿ ವಹಿಸುವುದು ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಜಿ.ಪಿ. ರೇಣುಪ್ರಸಾದ್ ಸಲಹೆ ನೀಡಿದ್ದಾರೆ.
ಗುರುವಾರ ಹವಾಮಾನ ವೈಪರಿತ್ಯ ದಿಂದ ಆಗುವ ತೊಂದರೆಗಳನ್ನು ನಿಭಾಯಿಸುವ ಕುರಿತು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಆಯೋಜಿಸಲಾಗಿದ್ದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಷ್ಣಾಂಶ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರಿಗೆ ಆಗುವ ಆರೋಗ್ಯ ಸಮಸ್ಯೆಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುವ ಸಂಬಂಧ ಅವಶ್ಯಕ ಪೂರ್ವಸಿದ್ಧತೆ ಮಾಡಿಕೊಂಡು ವಿಶೇಷ ಕಾಳಜಿವಹಿಸಿ ಆರೋಗ್ಯ ಸೇವೆ ನೀಡಬೇಕು.ಬಿಸಿಲಾಘಾತ, ನಿರ್ಜಲೀಕರಣದಿಂದ ಬಳಲುವ ರೋಗಿಗಳಿಗೆ ತಕ್ಷಣವೇ ಚಿಕಿತ್ಸೆ ನೀಡಬೇಕು ಎಂದು
ಜಿಲ್ಲಾ ಜಾರಿ ಅಧಿಕಾರಿಗಳಾದ ಡಾ.ಡಿ.ಎಂ.ಅಭಿನವ ಮಾತನಾಡಿ, ಅಂತರ ಇಲಾಖೆಯ ಸಮನ್ವಯ ದೊಂದಿಗೆ ಸಭೆ ಸಮಾರಂಭಗಳಲ್ಲಿ ಸಾರ್ವಜನಿಕರು ತಾಪಮಾನದಿಂದ ರಕ್ಷಿಸಿಕೊಳ್ಳುವ ಬಗ್ಗೆ ಹಾಗೂ ದೇಹ ನಿರ್ಜಲೀಕರಣ ವಾಗದಂತೆ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.
ಜಿಲ್ಲಾ ಯೋಜನಾಧಿಕಾರಿ ಡಾ.ಕಾಶಿ ಮಾತನಾಡಿ, ಸಾರ್ವಜನಿಕರು ಸೂರ್ಯಘಾತದಿಂದ ರಕ್ಷಿಸಿಕೊಳ್ಳಲು ಮಧ್ಯಾಹ್ನ ಶ್ರಮದಾಯಕ ಕೆಲಸ ಮಾಡಬಾರದು. ತಿಳಿ ಬಣ್ಣದ ಸಡಿಲವಾದ ಕಾಟನ್ ಬಟ್ಟೆಗಳನ್ನು ಧರಿಸಬೇಕು. ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವಾಗ ವಿಶ್ರಾಂತಿ ಪಡೆಯಬೇಕು. ನಿರ್ಜಲೀಕರಣ ತಡೆಯಲು ಹೆಚ್ಚು ಸಕ್ಕರೆಯುತ್ತಾ ಅಥವಾ ಕಾರ್ಬೋನೇಟೆಡ್ ಪಾನೀಯಗಳನ್ನು ಕುಡಿಯಬಾರದು. ಸೂರ್ಯಘಾತವಾದರೆ ತಣ್ಣಗಿನ ಸ್ಥಳದಲ್ಲಿ ವ್ಯಕ್ತಿಯನ್ನು ಮಲಗಿಸಿ ದೇಹವನ್ನು ಒದ್ದೆ ಬಟ್ಟೆಯಿಂದ ವರೆಸಬೇಕು, ಕುಡಿಯಲು ಆಗಾಗ್ಗೆ ನೀರು ಕೊಡುವುದು, ವ್ಯಕ್ತಿ ಚೇತರಿಸಿಕೊಂಡ ನಂತರ ನೀರಿನಂಶವಿರುವ ಪದಾರ್ಥಗಳನ್ನು ನೀಡಬೇಕೆಂದರು. ಆದಷ್ಟು ಜೀರ್ಣಕ್ರಿಯೆ ಆಗುವ ಆಹಾರ ಪದಾರ್ಥಗಳ ಬಳಕೆ ಮಾಡುತ್ತಾ ಮನೆಯಲ್ಲಿ ದೊರೆಯುವ ಮಜ್ಜಿಗೆ, ಎಳನೀರು, ನೀರಿನಂಶ ಇರುವ ಸೌತೆಕಾಯಿ ಮೂಲಂಗಿ, ಸೊಪ್ಪು ತರಕಾರಿ ಬಳಸಬೇಕು ಎಂದರು.
ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಉಪ ನಿರ್ದೇಶಕರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಡಾ.ಗೀತಾ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಲಭ್ಯ ಇರುವಂತೆ ಗಮನಹರಿಸಲು ನಿರ್ದೇಶನ ನೀಡಿದರು.
ವೀಡಿಯೋ ಸಂವಾಧದಲ್ಲಿ ವೈದ್ಯಾಧಿಕಾರಿಗಳು ಮತ್ತು ವಿವಿಧ ವೃಂದದ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು
































