ದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವು ಇಂದಿನಿಂದ (ಸೋಮವಾರ) ಆರಂಭವಾಗುತ್ತಿದ್ದು, ಈ ಬಾರಿಯ ರಾಜಕೀಯ ಲೆಕ್ಕಾಚಾರಗಳು ಸಂಪೂರ್ಣವಾಗಿ ಭಿನ್ನವಾಗಿವೆ. ಒಂದೆಡೆ ಕೇಂದ್ರ ಸರ್ಕಾರವು ಕೆಲವು ಪ್ರಮುಖ ಕಾನೂನುಗಳನ್ನು ಜಾರಿಗೆ ತರಲು ಮಸೂದೆಗಳನ್ನು ಮಂಡಿಸಲು ಸಿದ್ಧತೆ ನಡೆಸಿದ್ದರೆ, ಇನ್ನೊಂದೆಡೆ ಪ್ರತಿಪಕ್ಷಗಳು ಹತ್ತಾರು ಪ್ರಮುಖ ಜನಪರ ಹಾಗೂ ವಿವಾದಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವ್ಯೂಹ ರಚಿಸಿವೆ. ಇದರಿಂದಾಗಿ ಈ ಬಾರಿಯ ಅಧಿವೇಶನವು ಭಾರೀ ಹೈಡ್ರಾಮಾ ಹಾಗೂ ಗದ್ದಲಕ್ಕೆ ಸಾಕ್ಷಿಯಾಗುವ ಸಾಧ್ಯತೆ ದಟ್ಟವಾಗಿದೆ.
ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿರುವ 6 ಪ್ರಮುಖ ಮಸೂದೆಗಳಲ್ಲಿ ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆ (FCRA) ಮತ್ತು ಆದಾಯ ತೆರಿಗೆ ತಿದ್ದುಪಡಿ ಮಸೂದೆ ಪ್ರಮುಖವಾಗಿವೆ. ಇದರೊಂದಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆ ತಿದ್ದುಪಡಿ ಮಸೂದೆ, ಜನನ ಮತ್ತು ಮರಣಗಳ ನೋಂದಣಿ ತಿದ್ದುಪಡಿ ಮಸೂದೆ, ಹಾಗೂ ಎಂಎಸ್ಎಂಇ ಅಭಿವೃದ್ಧಿ ತಿದ್ದುಪಡಿ ಮಸೂದೆಗಳು ಪಟ್ಟಿಯಲ್ಲಿವೆ. ಇವುಗಳಲ್ಲಿ ವಿದೇಶಿ ದೇಣಿಗೆ ನಿಯಂತ್ರಣ ಮಸೂದೆಯು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಗುವ ನಿರೀಕ್ಷೆಯಿದೆ. ವಿದೇಶಿ ಧನಸಹಾಯ ಪಡೆಯುವ ಎನ್ಜಿಒಗಳನ್ನು ಹತ್ತಿಕ್ಕಲು ಸರ್ಕಾರ ಈ ಕಾನೂನು ತರುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.
ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ತಿದ್ದುಪಡಿ ಮಸೂದೆ 2026’ (ವಂದೇ ಮಾತರಂ ಬಿಲ್). ಈ ಹೊಸ ಕರಡು ಕಾನೂನಿನ ಪ್ರಕಾರ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯಂತೆಯೇ ನಮ್ಮ ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ಗೂ ಕಾನೂನು ರಕ್ಷಣೆ ಸಿಗಲಿದೆ. ಒಂದು ವೇಳೆ ಈ ಮಸೂದೆ ಪಾಸಾದರೆ, ವಂದೇ ಮಾತರಂ ಗೀತೆಗೆ ಅವಮಾನ ಮಾಡುವುದು ಅಥವಾ ಅದರ ಗಾಯನಕ್ಕೆ ಅಡ್ಡಿಪಡಿಸುವುದು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾದ ಅಪರಾಧವಾಗಲಿದೆ.
ಆದರೆ ಪ್ರತಿಪಕ್ಷಗಳು ಸಹ ಸುಮ್ಮನೆ ಕೂತಿಲ್ಲ. ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ನೀಟ್ ಪೇಪರ್ ಲೀಕ್ ಹಗರಣ, ರಾಮಮಂದಿರದ ಕಾಣಿಕೆ ಕಳವು ಪ್ರಕರಣ ಮತ್ತು ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪ್ರತಿಭಟನೆ ಸೇರಿದಂತೆ ಪ್ರಮುಖ ವಿಷಯಗಳ ಅಸ್ತ್ರವನ್ನು ಹಿಡಿದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ. ಟಿಎಂಸಿ ಪಕ್ಷದೊಳಗೆ ಉಂಟಾಗಿರುವ ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೇ ಲೋಕಸಭೆಯ ಆಸನ ವ್ಯವಸ್ಥೆಯಲ್ಲೂ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಇಂದಿನಿಂದ ಆರಂಭವಾಗಲಿರುವ ಕಲಾಪಗಳು ತೀವ್ರ ಕುತೂಹಲ ಕೆರಳಿಸಿವೆ.































