ನ್ಯಾಯ ಮರಿಚೀಕೆಯಾದ ವಿಚಿತ್ರ ಪ್ರಸಂಗವಿದು. 100 ಜನ ಅಪರಾಧಿಗಳು ತಪ್ಪಿಸಿಕೊಂಡರೂ ಓರ್ವ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂದು ಹೇಳುವ ನಮ್ಮ ನ್ಯಾಯ ವ್ಯವಸ್ಥೆಯಲ್ಲಾದ ಬಹುದೊಡ್ಡ ಪ್ರಮಾದವಿದು.
ಕೊಲೆ ಕೇಸಿನಲ್ಲಿ ನಾಲ್ವರನ್ನು ಅಪರಾಧಿಗಳನ್ನಾಗಿಸಿ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದರಲ್ಲಿ ಮೂವರು ಈಗಾಗಲೇ ಮೃತಪಟ್ಟಿದ್ದು, ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಲಖನ್ ಲಾಲ್ ಅವರನ್ನು ಇದೀಗ ನಿರಪರಾಧಿ ಎಂದು ಘೋಷಿಸಲಾಗಿದೆ.
ಅಂದ ಹಾಗೇ ಅವರ ಈಗಿನ ವಯಸ್ಸು 104.
1977ರಲ್ಲಿ ನಡೆದ ಘಟನೆ ಇದಾಗಿದ್ದು, 1982ರಲ್ಲಿ ಜಿಲ್ಲಾ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ಸಾಬೀತು ಮಾಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇವರ ಜೊತೆ ಇನ್ನೂ ಮೂವರಿಗೂ ಇದೇ ಶಿಕ್ಷೆ ಆಗಿತ್ತು. ಇದನ್ನು ಪ್ರಶ್ನಿಸಿ ನಾಲ್ವರು ಅಲಹಾಬಾದ್ ಹೈಕೋರ್ಟ್ ಮೆಟ್ಟಲೇರಿದ್ದರು.
ಇವರು ಒಟ್ಟೂ 34 ವರ್ಷ ಲಖನ್ ಜೈಲಿನಲ್ಲಿ ಕಳೆದಿದ್ದು, ಈಗ ಅವರಿಗೆ 104 ವರ್ಷ. ಈಗ ಹೈಕೋರ್ಟ್ ನಿರಪರಾಧಿ ಎಂದು ಖುಲಾಸೆಗೊಳಿಸಿದೆ. ಅಷ್ಟರಲ್ಲೇ ಉಳಿದ ಮೂವರು ಪ್ರಾಣತ್ಯಾಗ ಮಾಡಿದ್ದಾರೆ!
ಈ ಪ್ರಕರಣದಲ್ಲಿ ಇವರ ತಪ್ಪು ಏನೂ ಇಲ್ಲ ಎಂದು ಲಖನ್ ಲಾಲ್ ಆತ್ಮೀಯರು, ಕುಟುಂಬಸ್ಥರು ಇಷ್ಟು ವರ್ಷ ಎಲ್ಲರ ಕಾಲು ಹಿಡಿದರು, ಮಾಡದ ಕೆಲಸವೇ ಇಲ್ಲ. ಸುಪ್ರೀಂ ಕೋರ್ಟಿಂದ ಹಿಡಿದು ಇಲ್ಲಿಯವರೆಗೆ ಮುಖ್ಯಮಂತ್ರಿ, ಕಾನೂನು ಸಚಿವರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಬಾಗಿಲು ತಟ್ಟುವುದರಿಂದ ಹಿಡಿದು ಎಲ್ಲರ ಕೈಕಾಲುಗಳನ್ನೂ ಹಿಡಿಯಲಾಗಿತ್ತು. ಆದರೆ ಏನೂ ಪ್ರಯೋಜನ ಆಗಿರಲಿಲ್ಲ.
ಕೊನೆಗೆ 34 ವರ್ಷಗಳು ಅವರು ಜೈಲಿನಲ್ಲಿಯೇ ಕಳೆಯುವಂತಾಯಿತು. ಇದೀಗ ಬಿಡುಗಡೆಯಾಗಿದ್ದು, ನಿರಪರಾಧಿಗೆ ನ್ಯಾಯವೇ ಅನ್ಯಾಯ ಮಾಡಿದಂತಿದೆ.