ಚಿಕ್ಕ ಮಕ್ಕಳಲ್ಲೂ ಹೃದಯಘಾತ ಹೆಚ್ಚಳಕ್ಕೆ ಕಾರಣವೇನು…? ನಿಖರ ಕಾರಣ ಪತ್ತೆ ಹಚ್ಚಿ, ಪರಿಹಾರ ಸೂಚಿಸಿದ ವೈದ್ಯರು

WhatsApp
Telegram
Facebook
Twitter
LinkedIn

ಇತ್ತೀಚೆಗೆ ಚಿಕ್ಕ ಚಿಕ್ಕ ಮಕ್ಕಳು ಕೂಡ ಹೃದಯಾಘಾತದಿಂದ ಮೃತಪಡುತ್ತಿರುವುದು ಹೆಚ್ಚಾಗಿದೆ. ಇಂತಹ ಸಾವಿನ ಹಿಂದಿನ ಸತ್ಯವನ್ನು ಕೆಎಂಸಿಆರ್ ಐ ವೈದ್ಯರು ಬೆನ್ನಟ್ಟಿದ್ದು, ಚಿಕ್ಕ ವಯಸ್ಸಿನ ಮಕ್ಕಳು ಹೃದಯಾಘಾತದಿಂದ ಮೃತಪಡಲು ನಿಖರ ಕಾರಣ ಪತ್ತೆ ಹಚ್ಚಿದ್ದು, ಪರಿಹಾರಗಳನ್ನು ಸೂಚಿಸಿದ್ದಾರೆ.

ಪತ್ತೆ ಹಚ್ಚಿದ್ದು ಹೇಗೆ?

ಧಾರವಾಡ ಜಿಲ್ಲೆಯ ಆರು ಶಾಲೆಗಳ 8 ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ ತೂಕ ಹೆಚ್ಚಿರುವ ಸುಮಾರು 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವರನ್ನು ಕೆಎಂಸಿಆರ್ ಐ ಆಸ್ಪತ್ರೆಯ ಬಹುವಿಭಾಗೀಯ ಸಂಶೋಧನಾ ಘಟಕದ ನೋಡಲ್ ಅಧಿಕಾರಿ ಡಾ. ರಾಮ ಕೌಲಗುಡ್ಡ, ಸಮುದಾಯ ಆರೋಗ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಂಜುನಾಥ ನೇಕಾರ, ವಿಜ್ಞಾನಿಗಳಾದ ಡಾ. ಶಿವಕುಮಾರ ಬೇಲೂರ ಮತ್ತು ಡಾ. ಅರುಣ ಶೆಟ್ಟರ ಅವರ ತಂಡ ವಿವಿಧ ರೀತಿಯ ತಪಾಸಣೆಗೆ ಒಳಪಡಿಸಿದ್ದರು.

ಈ 30 ವಿದ್ಯಾರ್ಥಿಗಳ ಪೈಕಿ 26 ವಿದ್ಯಾರ್ಥಿಗಳಲ್ಲಿ ಅಸಹಜತೆಗಳು ಪತ್ತೆಯಾಗಿವೆ. ಅಲ್ಲದೇ ಬಹುತೇಕ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಎದುರಿಸುತ್ತಿದ್ದು, 11 ವಿದ್ಯಾರ್ಥಿಗಳಲ್ಲಿ ಟ್ರೈಗ್ಲಿಸರೈಡ್‌ ಹೆಚ್ಚಿರುವುದು, 4 ವಿದ್ಯಾರ್ಥಿಗಳಲ್ಲಿ ಹೋಮೊಸಿಸ್ಟೈನ್ ಮತ್ತು ಲಿಪೊಪ್ರೋಟೀನ್ ಹೆಚ್ಚಾಗಿರುವುದು ಸೇರಿದಂತೆ ಹೀಗೆ… ವಿವಿಧ ತೊಂದರೆಗಳನ್ನು ಎದುರಿಸುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ.

ಡಾ. ರಾಮ ಕೌಲಗುಡ್ಡ ಅವರು ಪ್ರತಿಕ್ರಿಯಿಸಿ, ಚಿಕ್ಕಮಕ್ಕಳು ಹೆಚ್ಚಾಗಿ ಏಕೆ ಹೃದಯಾಘಾತಕ್ಕೆ ಒಳಗಾಗುತ್ತಾರೆ ಎಂಬ ಬಗ್ಗೆ ದೇಶದಲ್ಲಿಯೇ ಕೆಎಂಸಿಆರ್ ಐ ಪ್ರಥಮ ಅಧ್ಯಯನ ಮಾಡಿದೆ. ಇಲ್ಲಿಯವರೆಗೂ ಈ ಬಗ್ಗೆ ಅಧ್ಯಯನಗಳು ಆಗಿರಲಿಲ್ಲ. ಹೀಗಾಗಿ ಇದಕ್ಕೆ ಕಾರಣ ಏನು ಎಂದು ಹುಡುಕಲು ನಾವು ಕೆಲವು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಂಶೋಧನೆ ಮಾಡಿದ್ದೇವೆ. ಧಾರವಾಡ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ‌ಯ 6 ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಶಾಲೆಯ ಆಡಳಿತ ಮಂಡಳಿ ಹಾಗೂ‌ ಕುಟುಂಬಸ್ಥರ ಅನುಮತಿ ‌ಪಡೆದು ನಾನಾ ವಿಧಗಳಲ್ಲಿ ಸಂಶೋಧನೆ ಮಾಡಿದ್ದು, 8 ರಿಂದ 10 ನೇ ತರಗತಿ ಮಕ್ಕಳಲ್ಲಿ ಹೆಚ್ಚು ತೂಕದ ಮೂವರನ್ನು ಪರೀಕ್ಷೆಗೆ ಒಳಪಡಿಸಿದಾಗ ಆಘಾತಕಾರಿ ಅಂಶಗಳು ಪತ್ತೆಯಾಗಿವೆ. ಅತೀ ಚಿಕ್ಕ ವಯಸ್ಸಿನ‌ ಮಕ್ಕಳಲ್ಲಿ ಬಿಪಿ, ಶುಗರ್ ಸೇರಿದಂತೆ ‌ನಾನಾ ಆರೋಗ್ಯ ಸಮಸ್ಯೆ ಪತ್ತೆಯಾಗಿವೆ.

ಮಕ್ಕಳ ಹೃದಯಾಘಾತಕ್ಕೆ ಕಾರಣವೇನು?

ಹೃದಯಾಘಾತಕ್ಕೆ ಕಾರಣವಾಗುವ ಅಧ್ಯಯನಕ್ಕೆ ಒಳಪಟ್ಟ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳನ್ನು ಹೊಂದಿದ್ದಾರೆ ಎಂಬುದು ಗೊತ್ತಾಗಿದ್ದು, ಆ ಬಗ್ಗೆ ಅವರನ್ನು ಕೌನ್ಸೆಲಿಂಗ್ಗೂ ಒಳಪಡಿಸಲಾಗಿದೆ. ಈ ವಿದ್ಯಾರ್ಥಿಗಳಲ್ಲಿ ಬೊಜ್ಜು ಹೆಚ್ಚಿರಲು, ದೈಹಿಕ ಚಟುವಟಿಕೆ ಇಲ್ಲದೇ ಇರುವುದು‌, ಪ್ರತಿನಿತ್ಯ ಶಾಲೆಗೆ ಹೋಗುವುದು ಹಾಗೂ ಮನೆಗೆ ಹೋಗುವುದಷ್ಟನ್ನೇ ಮಾಡುತ್ತಿದ್ದಾರೆ. ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ ಮಕ್ಕಳು ದೈಹಿಕ ಶ್ರಮದ ಆಟವನ್ನೇ ಆಡುತ್ತಿರಲಿಲ್ಲ. ಪಠ್ಯೇತರ ಚಟುವಟಿಕೆಯಲ್ಲಿಯೂ ಭಾಗಿಯಾಗುತ್ತಿಲ್ಲ ಎಂಬ ಅಂಶಗಳನ್ನು ಪತ್ತೆ ಹಚ್ಚಲಾಗಿದೆ.

ಅಧ್ಯಯನಕ್ಕೆ ಒಳಪಟ್ಟ ಮಕ್ಕಳು ಪ್ರತಿ ದಿನ ಒಂದು ಗಂಟೆಯಿಂದ ನಾಲ್ಕು ಗಂಟೆವರೆಗೆ ಮೊಬೈಲ್ ನೋಡುತ್ತಿರುವುದು ಗೊತ್ತಾಗಿದೆ. ಜೊತೆಗೆ ಅವರ ಆಹಾರ ಕ್ರಮ ಕೂಡ ಸರಿಯಾಗಿರಲಿಲ್ಲ. ಅಸಹಜತೆ ಕಂಡುಬಂದ ವಿದ್ಯಾರ್ಥಿಗಳ ಪರೀಕ್ಷಾ ವರದಿಯನ್ನು ಅವರ ಹೆತ್ತವರಿಗೆ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಿಗೂ ಕಳುಹಿಸಿ ಕೊಡಲಾಗಿದೆ. ಅವರ ದೈನಂದಿನ ಜೀವನ ಬದಲಾವಣೆಯಾಗದೇ ಹೋದರೆ ಅವರು ಹೃದಯಾಘಾತಕ್ಕೆ ಹತ್ತಿರವಾಗಿದ್ದಾರೆ ಎಂಬುದನ್ನೂ ಸಹ ತಿಳಿಸಲಾಗಿದೆ. ಜೊತೆಗೆ ಅಧ್ಯಯನ ತಂಡವೇ ವಿದ್ಯಾರ್ಥಿಗಳ ಮನೆಗೆ ಹೋಗಿ, ಅವರಿಗೆ ಡಯಟ್ ಪ್ಲಾನ್, ದೈಹಿಕ ಚಟುವಟಿಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿಕೊಟ್ಟಿದೆ. ಅಲ್ಲದೆ, ಜೆನಟಿಕ್ ಸಮಸ್ಯೆ ಇರುವ ಮಕ್ಕಳಲ್ಲಿ ಹೆತ್ತವರ ಜೊತೆ ಕುಳಿತು ಕೌನ್ಸಲಿಂಗ್ ಮಾಡಲು ತಂಡ ಮುಂದಾಗಿದೆ.

ಪರಿಹಾರ ಕ್ರಮಗಳೇನು?

 

ಮಕ್ಕಳಲ್ಲಿ ಹೃದಯಾಘಾತವಾಗುವುದನ್ನು ತಪ್ಪಿಸಬೇಕಾದರೆ ಅವರ ಆಹಾರ ಪದ್ದತಿ ಬದಲಾಗಲೇಬೇಕಾಗಿದೆ. ಸಾಂಪ್ರದಾಯಿಕ ಆಹಾರ ಪದ್ಧತಿ ಚೆನ್ನಾಗಿತ್ತು. ಆದರೆ, ಹೆಚ್ಚಿನ ಮಕ್ಕಳು ಜಂಕ್ ಪುಡ್ ತಿನ್ನುವುದು, ಸಾಫ್ಟ್ ಡ್ರಿಂಕ್ಸ್ ಹೆಚ್ಚಾಗಿ ಕುಡಿಯುತ್ತಿದ್ದಾರೆ. ದೈಹಿಕ ಚಟುವಟಿಕೆ ಕಡಿಮೆಯಾಗಿದ್ದು, ಪಠ್ಯದ ಜೊತೆಗೆ ಆಟಕ್ಕೂ ಹೆಚ್ಚಿನ ಸಮಯ ನೀಡಬೇಕು. ಒಳ್ಳೆಯ ಜೀವನ ಶೈಲಿ, ಒಳ್ಳೆಯ ಆಹಾರ ಪದ್ಧತಿ ರೂಢಿಮಾಡಿಕೊಂಡರೆ ಹೃದಯದ ತೊಂದರೆಯಿಂದ ಪಾರಾಗಬಹುದು ವೈದ್ಯರು ಸಲಹೆ ನೀಡಿದ್ದಾರೆ.

ಪೋಷಕರ ಪಾತ್ರವೇನು?

ಹೃದಯಾಘಾತ ತಪ್ಪಿಸಲು‌ ಪೋಷಕರ ಪಾತ್ರ ಮುಖ್ಯವಾಗಿದೆ. ತಮ್ಮ ಮಕ್ಕಳು ಆಟದಲ್ಲಿ ಆಸಕ್ತಿ ವಹಿಸುವುದನ್ನು ಕಲಿಸಬೇಕು. ಕೇವಲ ಅಂಕ ತೆಗೆಯುವುದೇ ಅವರ ಕಾಯಕವಾಗಬಾರದು. ಶಾಲೆಗಳಲ್ಲಿ ಆಟದ ಮೈದಾನಗಳು ಇಲ್ಲವಾಗಿವೆ. ಭಾಗಶಃ ಶಾಲೆಗಳು ಅಪಾರ್ಟ್ಮೆಂಟ್ಗಳಂತೆ ಆಗುತ್ತಿವೆ. ಪ್ರತಿ ಶಾಲೆಗೂ ಆಟದ ಮೈದಾನ ಕಡ್ಡಾಯವಾಗಿರಬೇಕು. ಹಾಗಿದ್ದರೆ ಮಾತ್ರ ಶಾಲೆಗೆ ಅನುಮತಿ ಕೊಡುವ ವ್ಯವಸ್ಥೆ ಬರಬೇಕು. ವರದಿಯಲ್ಲಿ ಬಂದಂತಹ ಆಘಾತಕಾರಿ ಅಂಶಗಳನ್ನು ‌ಮೆಟ್ಟಿ ನಿಲ್ಲಬಹುದು. ಪಾಲಕರು ಕೂಡ ಅವರ ಮೇಲಿನ ಅಕ್ಕರೆಗೆ ಸಿಹಿ ಪದಾರ್ಥ ಕೊಡುವುದು, ಹಠ ಮಾಡಿದ ಮಾತ್ರಕ್ಕೆ ಮೊಬೈಲ್ ‌ಕೊಡುವುದನ್ನು ತಪ್ಪಿಸಬೇಕು. ಜಂಕ್ ಫುಡ್ ತಿನ್ನುವುದು ಹೆಚ್ಚಾಗುತ್ತಿದ್ದು, ಇದಕ್ಕೂ ಕಡಿವಾಣ ಹಾಕಬೇಕು ಎಂದರು.

ಈ ರೀತಿಯ ಅಧ್ಯಯನಗಳನ್ನು ದೇಶಾದ್ಯಂತ ಎಲ್ಲೆಡೆ ಮಾಡಬೇಕಿದೆ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಕ್ರಮಗಳನ್ನು ಕೈಗೊಂಡರೆ, ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತದ ತೊಂದರೆ ತಪ್ಪಿಸಬಹುದು ಎಂಬುದು ಅಧ್ಯಯನ ಉದ್ದೇಶವಾಗಿದೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon