ಚಿತ್ರದುರ್ಗ: ನಗರದ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯರಸ್ತೆ ಒತ್ತುವರಿ ತೆರವು ಅನಿವಾರ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ನಿಯಮ ಉಲ್ಲಂಘಿಸಿದ ಕಟ್ಟಡ ಮಾಲೀಕರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ನಗರ ಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮುಖ್ಯರಸ್ತೆ ಒತ್ತುವರಿ ತೆರವು ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಚಿತ್ರದುರ್ಗ ಜಿಲ್ಲಾ ಕೇಂದ್ರವಾಗಿದ್ದು, ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಉನ್ನತಿಕರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಗರದ ಮುಖ್ಯ ರಸ್ತೆ ಸೇರಿದಂತೆ, ವಾಣಿಜ್ಯ ಚಟುವಟಿಕೆಗಳು ನಡೆಯುವ ರಸ್ತೆಗಳಲ್ಲಿ ನಿಯಮ ಮೀರಿ ನಿರ್ಮಿಸಿದ ಕಟ್ಟಡಗಳಿಂದಾಗಿ ರಸ್ತೆ ಕಿರಿದಾಗಿವೆ. ಇದರಿಂದ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುತ್ತಿದೆ. ನಗರದ ಮುಖ್ಯ ರಸ್ತೆಯ 373 ವಾಣಿಜ್ಯ ಮಳಿಗೆಗಳ ಪೈಕಿ ಬಹುತೇಕ ಕಟ್ಟಡ ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸಿದ್ದಾರೆ. ಈಗಾಗಲೇ ನೋಟಿಸ್ ನೀಡಿರುವ ಕಟ್ಟಡ ಮಾಲೀಕರ ಪ್ರಕರಣಗಳನ್ನು ಒಂದು ತಿಂಗಳ ಒಳಗಾಗಿ ಆಲಿಸಿ, ನಿರ್ಧಾರ ಕೈಗೊಳ್ಳಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಮುಖ್ಯರಸ್ತೆಯ ಬಹುತೇಕ ಕಟ್ಟಡ ಮಾಲೀಕರ ಬಳಿ ಸರಿಯಾದ ಆಸ್ತಿ ದಾಖಲೆಗಳು ಇಲ್ಲದಿರುವುದು, ಅನುಮೋದಿತ ಕಟ್ಟಡ ನಕ್ಷೆಯನ್ನು ಉಲ್ಲಂಘಿಸಿ ಹೆಚ್ಚಿನ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಿರುವುದು, ರಸ್ತೆ ಬದಿಯ ಫುಟ್ಪಾತ್ ಮತ್ತು ಬಫರ್ ಝೋನ್ ಪ್ರದೇಶಗಳನ್ನು ಒತ್ತುವರಿ ಮಾಡಿರುವುದು, ವಾಸದ ಮನೆಗೆ ಅನುಮತಿ ಪಡೆದು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು, ಎಫ್.ಎ.ಆರ್ ನಿಯಮದ ಅನುಸಾರ ರಸ್ತೆಯ ಅಗಲಕ್ಕೆ ತಕ್ಕಂತೆ ಕಟ್ಟಬೇಕಾದ ಕಟ್ಟಡದ ಎತ್ತರ ಮತ್ತು ವಿಸ್ತೀರ್ಣದ ನಿಯಮಗಳ ಉಲ್ಲಂಘಸಿರುವುದು ಸಮೀಕ್ಷೆಯ ವೇಳೆ ಕಂಡುಬAದಿದೆ. ಪ್ರತಿಯೊಂದು ಕಟ್ಟಡಕ್ಕೂ ಪ್ರತ್ಯೇಕ ಕಡತ ನಿರ್ವಹಿಸಿ, ಅಲ್ಲಿನ ಉಲ್ಲಂಘನೆಗಳನ್ನು ನಿಖರವಾಗಿ ದಾಖಲಿಸಲಾಗಿದೆ. ಸರ್ವೋಚ್ಛ ನ್ಯಾಯಾಲಾಯದ ಆದೇಶವನ್ನು ಗಮನದಲ್ಲಿ ಇಟ್ಟುಕೊಂಡು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಏಕಾಏಕಿ ಕೈಗೊಳ್ಳದೇ, ಪ್ರತಿಯೊಬ್ಬ ಕಟ್ಟಡ ಮಾಲೀಕರಿಗೂ ನೋಟಿಸ್ ನೀಡಿ, ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ಒದಗಿಸಲಾಗಿದೆ. ಕಾನೂನುಬದ್ಧವಾಗಿ ಪ್ರತಿಯೊಬ್ಬರಿಗೂ ಅವಕಾಶ ನೀಡಿದ್ದು ದಾಖಲೆಗಳ ಆಧಾರದ ಮೇಲೆ ಉಲ್ಲಂಘನೆಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರ ಸಭೆಯಿಂದ ನಿಯಮ ಉಲ್ಲಂಘಿಸಿದ 373 ಆಸ್ತಿ ಮಾಲೀಕರಿಗೆ, ಸ್ವತ್ತಿನ ದಾಖಲೆ, ಅನುಮೋದಿತ ಕಟ್ಟ ನಕ್ಷೆ, ವಾಣಿಜ್ಯ ಪರವಾನಿಗೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ನೋಟಿಸು ನೀಡಲಾಗಿದೆ. ಪೈಕಿ 190 ಮಾಲೀಕರು ದಾಖಲೆಗಳನ್ನು ಸಲ್ಲಿಸಿದ್ದಾರೆ. 40 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. ದಾಖಲೆ ಸಲ್ಲಿಸದ 183 ಮಾಲೀಕರಿಗೆ ಕೂಡಲೇ ದಾಖಲೆಗಳನ್ನು ಸಲ್ಲಿಸುವಂತೆ ಮತ್ತೊಮ್ಮೆ ನೋಟಿಸ್ ನೀಡಲಾಗಿದೆ. ಒಂದು ವೇಳೆ ಮಾಲಿಕರು ದಾಖಲೆಗಳನ್ನು ಸಲ್ಲಿಸದ್ದರೆ, ಸಬ್ರಿಜಿಸ್ಟಾರ್ ಕಚೇರಿಯಿಂಸ ಸ್ವತ್ತಿನ ದಾಖಲೆಗಳನ್ನು ಪಡೆದು ನಿರ್ಣಯ ಕೈಗೊಳ್ಳುವುದಾಗಿ ಪೌರಾಯುಕ್ತೆ ಲಕ್ಷಿö್ಮÃ ತಿಳಿಸಿದರು.
































