ಚಿತ್ರದುರ್ಗ : ಸಂಗೀತದಿಂದ ಮನಸ್ಸಿಗೆ ನೆಮ್ಮದಿ ಸಂತೋಷ ಸಿಗುವುದಲ್ಲದೆ ಮನುಷ್ಯನನ್ನು ಮೌಲ್ಯದ ಕಡೆ ಕೊಂಡೊಯ್ಯುತ್ತದೆಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ತಿಳಿಸಿದರು.
ಮದಕರಿನಾಯಕ ಸಾಂಸ್ಕøತಿಕ ಕೇಂದ್ರ(ರಿ) ಚಿತ್ರದುರ್ಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವುಗಳ ಸಹಯೋಗದೊಂದಿಗೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಂಗೀತೋತ್ಸವವನ್ನು ಹಾರ್ಮೊನಿಯಂ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂಗೀತ, ಸಾಹಿತ್ಯ, ಕಲೆ ಇವುಗಳು ಅನೌಪಚಾರಿಕವಾಗಿ ವಿದ್ಯೆ ಕಲಿಸುವ ಮಾಧ್ಯಮ. ಸಂಗೀತ ಶಿಕ್ಷಣದ ಮೊದಲ ಮೆಟ್ಟಿಲು. ಜೀವನದ ತತ್ವ. ಹಾಗಾಗಿ ಸಂಗೀತಕ್ಕೆ ಎಲ್ಲರನ್ನು ಸಂವಹಗೊಳಿಸುವ ದೊಡ್ಡ ಶಕ್ತಿಯಿದೆ. ನೀರು ಹರಿಯುವಾಗ ಹೇಗೆ ರೋಮಾಂಚನಕಾರಿಯಾಗಿ ಸದ್ದು ಮಾಡುತ್ತದೋ ಅದೇ ರೀತಿ ಸಂಗೀತ ಕೂಡ ಲಯ, ತಾಳದ ಮೂಲಕ ಸದ್ದು ಮಾಡುತ್ತದೆಂದು ಹೇಳಿದರು.
ಸಂಗೀತವೆಂದರೆ ಮೂಲಭೂತ ಶಿಕ್ಷಣ. ವಾದ್ಯಗಳ ಜೊತೆ ತಾಂತ್ರಿಕತೆಯಿದೆ. ವಿದ್ಯೆ ಹೇಳಿಕೊಡುವ ಮೂಲಕ ಸಂಗೀತ ಮಾನವನನ್ನು ಜ್ಞಾನವಂತನನ್ನಾಗಿಸುತ್ತದೆ. ಎಲ್ಲರನ್ನು ಸಂವಹನಗೊಳಿಸುವ ದೊಡ್ಡ ಪ್ರಭಾವಿ ಮಾಧ್ಯಮ ಸಂಗೀತವನ್ನು ಬೇರೆ ಬೇರೆ ಮಗ್ಗಲುಗಳಿಂದ ನೋಡಬೇಕಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯರಾದ ಡಾ.ಶಿವಣ್ಣ ಮಾತನಾಡಿ ಸಂಗೀತ ಕಲಿಯುವುದರಿಂದ ಏಕಾಗ್ರತೆ ಮೂಡುತ್ತದೆ. ಮಾನಸಿಕವಾಗಿ ಉಲ್ಲಾಸ, ಶಾಂತಿಯಿಂದಿರಬಹುದು, ಶಿಸ್ತು, ತ್ಯಾಗ, ಸರಳತೆಯನ್ನು ಕಲಿಸಿ ವಿಧೇಯತೆ ಬೆಳೆಸುತ್ತದೆ. ಅದಕ್ಕಾಗಿ ಸಂಗೀತವನ್ನು ಪ್ರಭಾವಿ ಮಾಧ್ಯಮವೆನ್ನಬಹುದು ಎಂದರು.
ಆಂಗ್ಲ ವಿಭಾಗದ ಮುಖ್ಯಸ್ಥ ಡಾ.ಮಧುಸೂದನ ಪಿ.ಎನ್. ಮಾತನಾಡುತ್ತ ಸಂಗೀತ ಒಂದು ಧ್ಯಾನ, ತಪಸ್ಸಿದ್ದಂತೆ. ಸಂಗೀತ ಕಲಿಯಲು ವಯಸ್ಸಿನ ಮಿತಿಯಿಲ್ಲ. ಸಾಹಿತ್ಯ, ಶಿಕ್ಷಣಕ್ಕೆ ಎಷ್ಟು ಮಹತ್ವವಿದೆಯೋ ಸಂಗೀತಕ್ಕೂ ಕೂಡ ಅಷ್ಟೆ ಪ್ರಾಮುಖ್ಯತೆಯಿದೆ. ಸಂಗೀತದ ಸದಭಿರುಚಿ ಆರೋಗ್ಯಕ್ಕೆ ಒಳ್ಳೆಯ ಸಾಧನ ಎಂದು ನುಡಿದರು.
ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ವಿಜಯಲಕ್ಷ್ಮಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಜಯಲಕ್ಷ್ಮಮ್ಮ, ಐಕ್ಯುಎಸಿ. ಸಂಚಾಲಕ ಹಲಸಂದಿ ಸತೀಶ್, ಪತ್ರಾಂಕಿತ ವ್ಯವಸ್ಥಾಪಕ ವೆಂಕಟೇಶ್, ಸರಿಗಮ ಸಂಗೀತ ಪಾಠಶಾಲೆಯ ಶಾಸ್ತ್ರೀಯ ಸಂಗೀತಗಾರರಾದ ಸುಜಿತ್ ಕುಲಕರ್ಣಿ ಇವರುಗಳು ವೇದಿಕೆಯಲ್ಲಿದ್ದರು.
































