ದಾವಣಗೆರೆ: ನಾಟಕಗಳು ಸಮಾಜದ ಕೈಗನ್ನಡಿ ಇದ್ದಂತೆ. ಅವು ಸಮಾಜದಲ್ಲಿರುವ ಅಂಕು-ಡೊಂಕು ತಿದ್ದಿ ಹೇಳುವ ಶಿಕ್ಷಕನಾಗಿವೆ. ಜೀವನ ಶಿಕ್ಷಣ ನೀಡುವ ಪಾಠಶಾಲೆಯಾಗಿವೆ ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ಹಳೆ ಪಿಬಿ ರಸ್ತೆಯ ವಿನೋಬನಗರದ ೧ನೇ ಮುಖ್ಯರಸ್ತೆಯ ಶ್ರೀಮತಿ ಗೌರಮ್ಮ ನರಹರಿಶೇಟ್ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಜಾಗದಲ್ಲಿ ಶುಕ್ರವಾರ ವಿಜಯಪುರ ಜಿಲ್ಲೆಯ ಕಮತಗಿ ಶ್ರೀ ಗುರುಹೊಳೆ ಹುಚ್ಚೇಶ್ವರ ನಾಟ್ಯ ಸಂಘದಿAದ ಪ್ರಸ್ತುತ ಪಡಿಸುವ “ಗಂಡನಿಗೆ ತಕ್ಕ ಹೆಂಡತಿ” ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಶ್ರೀಗಳು ಮಾತನಾಡಿದರು.
ಇವತ್ತು ಮನೆಯಲ್ಲಿ ಟಿವಿ ಅಥವಾ ಒಂದು ಮೊಬೈಲ್ ಇದ್ದರೆ ಸಾಕು ಮನರಂಜನೆ ಸಿಗುತ್ತದೆ. ಆದರೂ ದಾವಣಗೆರೆಯ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ದೊಡ್ಡದು. ರಂಗಕಲೆ ಉಳಿಯಬೇಕೆಂದರೆ ಕಲಾವಿದರು ಉಳಿಯಬೇಕು. ಕಲಾವಿದರಿಗೆ ಅಭಿಮಾನಿಗಳು ಪ್ರೋತ್ಸಾಹ ನೀಡಬೇಕು ಎಂದ ಅವರು, ದಾವಣಗೆರೆಯಲ್ಲಿ ಒಂದು ರಂಗಭೂಮಿ ಕಲೆ ಪ್ರದರ್ಶನಕ್ಕಾಗಿ ಒಂದು ರಂಗಮAದಿರ ನಿರ್ಮಾಣ ಮಾಡಬೇಕು. ಆ ಕಾರ್ಯವನ್ನು ನಮ್ಮ ಹೊಸ ಶಾಸಕರು ರಾಜ್ಯ ಸರಕಾರದ ಮೇಲೆ ಒತ್ತಡ ಹಾಕಿ ವಿಶೇಷ ಅನುದಾನ ತಂದು ಈ ಕಾರ್ಯವನ್ನು ಮಾಡಲಿ ಎಂದು ಆಶಿಸಿದರು.
ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಕಲಾವಿದರು ಬದುಕಬೇಕು, ಕಲೆಯೂ ಉಳಿಯಬೇಕು. ಇವತ್ತು ರಂಗಭೂಮಿ ಕಲೆ ಸಮಸ್ಯೆಗಳ ಸುಳಿಯಲ್ಲಿದೆ. ದಾವಣಗೆರೆ ರಂಗಭೂಮಿ, ರಂಗ ಕಲಾವುದರಿಗೆ ಸದಾ ಅಸರೆಯಾದ ಊರು. ದಿವಂಗತ ಶಾಮನೂರು ಶಿವಶಂಕರಪ್ಪ ಕಲಾವಿದರಿಗೆ ನಿವೇಶನ ನೀಡಿದ್ದರು. ಮಾಜಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಸಮರ್ಥ ಶಾಮನೂರು ಮುಂದಿನ ದಿನಗಳಲ್ಲಿ ರಂಗಭೂಮಿ ಕಲಾವಿದರು, ಸಿಬ್ಬಂದಿಗೆ ನಿವೇಶನ ಹಾಗೂ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲೆಂದು ಮನವಿ ಮಾಡುವುದಾಗಿ ತಿಳಿಸಿದರು.
ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ದಾವಣಗೆರೆ ವೃತ್ತಿ ರಂಗಭೂಮಿಯ ತವರುಮನೆ. ಕಂಪನಿ ನಾಟಕಗಳ ಶತಮಾನದ ಇತಿಹಾಸವಿರುವ ಈ ಊರಿಗೆ ಇದುವರೆಗೆ ನೂರಿಪ್ಪತ್ತಕ್ಕೂ ಹೆಚ್ಚು ಕಂಪನಿಗಳು ಬಂದಿದ್ದು ಯಾವೂ ನಷ್ಟ ಅನುಭವಿಸಿಲ್ಲ. ಈಗ್ಗೆ ದಶಕದ ಹಿಂದೆ ಬೆಂಕಿಗೆ ಆಹುತಿಯಾದ ಜೇವರ್ಗಿ ಕಂಪನಿಯನ್ನು ಸುಟ್ಟ ಜಾಗದಲ್ಲಿ ಕಟ್ಟಿಕೊಟ್ಟ ಸಹೃದಯ ಪ್ರೇಕ್ಷಕರು ಈ ಊರಿನವರು. ನಮ್ಮ ದಾವಣಗೆರೆ ರಂಗಾಯಣದ ವತಿಯಿಂದ ಸದರಿ ಕಂಪನಿಗೆ ಹೊಸದೊಂದು ನಾಟಕದ ತರಬೇತಿ ನೀಡಿ ಹೊಸ ಪ್ರಯೋಗಕ್ಕೆ ಅವಕಾಶ ಮಾಡುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನಾಟಕ ಕಂಪನಿ ಮಾಲೀಕ ಪಾಪು ಕಲ್ಲೂರ, ವ್ಯವಸ್ಥಾಪಕ ಮಾದೇವಪ್ಪ ಹುಣಸ್ಯಾಳ, ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ, ಜಿಲ್ಲಾ ವರದಿಗಾರರ ಕೂಟದ ಅದ್ಯಕ್ಷ ನಾಗರಾಜ ಎಸ್. ಬಡದಾಳ್, ಶಂಕರಲೀಲಾ ಗ್ಯಾಸ್ ಏಜೆನ್ಸಿ ಮಾಲೀಕ ಸಿ.ಎಲ್.ಚಂದ್ರಧರ, ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಮಹೇಶ್ವರಪ್ಪ ದೊಡ್ಡಮನಿ, ಕಲಾವಿದ, ಪತ್ರಕರ್ತ ಬಸವರಾಜ ಐರಣಿ, ರಂಗಭೂಮಿ ಕಲಾವಿದ ಚಿಂದೋಡಿ ಮಧುಕೇಶ, ಮಾಲತೇಶ ಪೂಜಾರ ಇತರರು ಇದ್ದರು.
































