ಚಿತ್ರದುರ್ಗ : ಅಪಾಯದಲ್ಲಿರುವ ಸಂವಿಧಾನವನ್ನು ಸಂರಕ್ಷಿಸುವುದಕ್ಕಾಗಿ ಏಪ್ರಿಲ್ 26 ರಂದು ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ನಡೆಯಲಿದೆ ಎಂದು ಕೆ.ಎಲ್.ಅಶೋಕ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹತ್ತು ಸಾವಿರ ಜನ ಸೇರುವ ನಿರೀಕ್ಷೆಯಿದ್ದು, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ನಟ ಪ್ರಕಾಶ್ರಾಜ್, ಹೋರಾಟಗಾರ್ತಿ ಮೇಧ ಪಾಟ್ಕರ್, ಗುಜರಾತ್ ಶಾಸಕ ಹಾಗೂ ಹೋರಾಟಗಾರ ಜಿಗ್ನೇಶ್ಮೇವಾನಿ ಇನ್ನು ಅನೇಕರು ಸಮಾವೇಶದಲ್ಲಿ ಪಾಲ್ಗೊಳ್ಗುವರು. ಸಂವಿಧಾನ ಸಂರಕ್ಷಿಸಲು ಬಯಸುವ ಪ್ರತಿಯೊಬ್ಬರು ಸಮಾವೇಶದಲ್ಲಿ ಭಾಗವಹಿಸುವಂತೆ ಕೆ.ಎಲ್.ಅಶೋಕ್ ವಿನಂತಿಸಿದರು.
ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ ಮಾತನಾಡಿ ಕೇಂದ್ರದಲ್ಲಿ ನಾವುಗಳು ಅಧಿಕಾರಕ್ಕೆ ಬಂದಿರುವುದೆ ಸಂವಿಧಾನ ಬದಲಾವಣೆ ಮಾಡಲು ಎಂದು ಬಿಜೆಪಿ.ನಾಯಕರುಗಳು ಹೇಳುತ್ತಿರುವುದನ್ನು ಗಮನಿಸಿದರೆ ಒಂದಲ್ಲ ಒಂದು ದಿನ ಸಂವಿಧಾನಕ್ಕೆ ಅಪಾಯ ಗ್ಯಾರೆಂಟಿ. ಈ ನಿಟ್ಟಿನಲ್ಲಿ ಜನತೆಯನ್ನು ಎಚ್ಚರಿಸುವುದಕ್ಕಾಗಿ ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ನಡೆಸಲಾಗುವುದು. ಸಂವಿಧಾನವನ್ನು ತಿದ್ದುಪಡಿ ಮಾಡಲು ಅವಕಾಶವಿದೆ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ.
ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾದರೆ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಶೋಷಿತ ಸಮುದಾಯಗಳು ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಸಂವಿಧಾನ ಬದಲಾವಣೆ ಮಾಡುವುದು ಸರಿಯಲ್ಲ ಎಂಬುದು ನಮ್ಮ ವಾದ ಎಂದರು.
ನ್ಯಾಯವಾದಿ ಚಂದ್ರಪ್ಪ ಮಾತನಾಡುತ್ತ ಆಯಾ ಕಾಲಕ್ಕನುಗುಣವಾಗಿ ಸಂವಿಧಾನವನ್ನು ತಿದ್ದುಪಡಿ ಮಾಡುವುದು ತಪ್ಪಲ್ಲ. ಆದರೆ ಸಂವಿಧಾನದ ಬುಡವನ್ನೇ ಅಲುಗಾಡಿಸುವುದು ಯಾವ ನ್ಯಾಯ? ತಿದ್ದುಪಡಿಗೂ ಬದಲಾವಣೆಗೂ ವ್ಯತ್ಯಾಸವಿದೆ ಎನ್ನುವ ಅರಿವನ್ನು ಜನತೆಯಲ್ಲಿ ಮೂಡಿಸುವುದಕ್ಕಾಗಿ ಸಂವಿಧಾನ ಸಂರಕ್ಷಕರ ಸಮಾವೇಶವನ್ನು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಂವಿಧಾನದ ಪರವಾಗಿರುವವರು ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ನಿವೃತ್ತ ಪ್ರಾಚಾರ್ಯರಾದ ಶಿವಕುಮಾರ್, ಜನಶಕ್ತಿಯ ಟಿ.ಶಫಿವುಲ್ಲಾ, ಸಲೋಮನ್ ರಾಜ್ಕುಮಾರ್, ರೈತ ಮುಖಂಡ ಧನಂಜಯ, ಸಿರಾಜ್, ಹನುಮಂತಪ್ಪ ಗೋನೂರು ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.