ಚಿತ್ರದುರ್ಗ: ಬೇಳೆ ಕಾಳುಗಳ ಉತ್ಪಾದನೆಯಲ್ಲಿ ದೇಶವನ್ನು ಸ್ವಯಂ ಅವಲಂಬಿಯನ್ನಾಗಿಸುವ ಉದ್ದೇಶದಿಂದ ಕೃಷಿ ಇಲಾಖೆಯು 2026-27ನೇ ಸಾಲಿಗೆ ಬೇಳೆ ಕಾಳುಗಳಲ್ಲಿ ಆತ್ಮನಿರ್ಭರತೆ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಕೊಯ್ಲೋತ್ತರ ಮೂಲಭೂತ ಸೌಕರ್ಯಾಭಿವೃದ್ಧಿ ಹಾಗೂ ಸಂಸ್ಕರಣಾ ಮತ್ತು ಪ್ಯಾಕೇಜಿಂಗ್ ಘಟಕಗಳನ್ನು ಸ್ಥಾಪಿಸಲು ಆಸಕ್ತ ರೈತರು ಹಾಗೂ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೇ 20 ಅರ್ಜಿ ಸಲ್ಲಿಸಲು ಕೊನೆಯ ದಿನ.
ದ್ವಿದಳ ಧಾನ್ಯಗಳಲ್ಲಿ ಮೌಲ್ಯವರ್ಧನೆ ಉತ್ತೇಜಿಸಲು ಹಾಗೂ ರೈತರ ಆದಾಯ ಹೆಚ್ಚಿಸಲು ಗುರಿ ಹೊಂದಲಾಗಿದ್ದು, ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ 60:40 ಅನುಪಾತದ ಸಹಾಯಧನದಡಿ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನಾ ವೆಚ್ಚದ ಶೇ 33ರಷ್ಟು (ಗರಿಷ್ಠ ರೂ.25 ಲಕ್ಷದ ಮಿತಿಯೊಂದಿಗೆ) ಸಹಾಯಧನ ನೀಡಲಾಗುವುದು. ಕಟ್ಟಡ ಮತ್ತು ಗೋದಾಮು ನಿರ್ಮಾಣಕ್ಕೆ ಒಟ್ಟು ಸಹಾಯಧನದ ಮೊತ್ತದಲ್ಲಿ ಗರಿಷ್ಠ ಶೇ 30ರಷ್ಟು ಹಣವನ್ನು ಬಳಸಿಕೊಳ್ಳಲು ಅವಕಾಶವಿದೆ. ರೈತ ಉತ್ಪಾದಕ ಸಂಸ್ಥೆಗಳು, ಕ್ಲಸ್ಟರ್ ಮಟ್ಟದ ಒಕ್ಕೂಟಗಳು, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಹಾಗೂ ವೈಯಕ್ತಿಕ ಫಲಾನುಭವಿಗಳು ಈ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ವೈಯಕ್ತಿಕ ಫಲಾನುಭವಿಗಳು ಕನಿಷ್ಠ 21 ವರ್ಷ ವಯಸ್ಸಿನವರಾಗಿರಬೇಕು ಮತ್ತು ಯೋಜನಾ ವೆಚ್ಚದ ಶೇ 15ರಷ್ಟು ಸ್ವಂತ ಬಂಡವಾಳ ಹೂಡುವ ಸಾಮಥ್ರ್ಯ ಹೊಂದಿರಬೇಕು.
ರೈತ ಉತ್ಪಾದಕ ಸಂಸ್ಥೆಗಳು, ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಯೋಜನೆಯಲ್ಲಿ ಆದ್ಯತೆ ನೀಡಲಾಗುವುದು. ಈ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಬ್ಯಾಂಕ್ ಸಾಲ ಪಡೆಯುವುದು ಕಡ್ಡಾಯವಾಗಿದೆ. ಸ್ಥಾಪಿತವಾಗುವ ಸಂಸ್ಕರಣಾ ಘಟಕಗಳು ಪ್ರತಿ ಗಂಟೆಗೆ ಕನಿಷ್ಠ 300 ಕೆಜಿ ಸಾಮಥ್ರ್ಯ ಹೊಂದಿರಬೇಕು ಮತ್ತು ಎಲ್ಲಾ ಯಂತ್ರೋಪಕರಣಗಳು ಬಿಐಎಸ್ ಗುಣಮಟ್ಟವನ್ನು ಹೊಂದಿರಬೇಕು. ಅಲ್ಲದೆ, ಎಫ್.ಎಸ್.ಎಸ್.ಎ.ಐ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.
ಜಿಲ್ಲಾ ಮಟ್ಟದ ಚಾಲನಾ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ, ತಾಂತ್ರಿಕ ಮೌಲ್ಯಮಾಪನದ ನಂತರ ಅಂತಿಮ ಅನುಮೋದನೆ ನೀಡಲಿದೆ. ಘಟಕ ಸ್ಥಾಪನೆಯ ನಂತರ ಇಲಾಖಾ ಅಧಿಕಾರಿಗಳ ಭೌತಿಕ ಪರಿಶೀಲನೆಯ ಬಳಿಕ ಫಲಾನುಭವಿಗಳ ಆಧಾರ್ ಲಿಂಕ್ ಬ್ಯಾಂಕ್ ಖಾತೆಗೆ ಸಹಾಯಧನ ಪಾವತಿಸಲಾಗುವುದು. ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.































