ಚಿತ್ರದುರ್ಗ : ಸರ್ವ ಜನಾಂಗದ ಶಾಂತಿಯ ತೋಟ ಭಾರತವನ್ನು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನರಕವೆಂದು ಹೀಯಾಳಿಸಿರುವುದು ತಪ್ಪು. ಪ್ರತಿಯೊಬ್ಬ ಪ್ರಜೆಯೂ ಖಂಡಿಸಬೇಕೆಂದು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ ಹೇಳಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಇನ್ನರ್ವೀಲ್ಹ್ ಕ್ಲಬ್ ಚಿತ್ರದುರ್ಗ ಇವುಗಳ ಸಹಯೋಗದೊಂದಿಗೆ ರೋಟರಿ ಬಾಲಭವನದಲ್ಲಿ ಭಾನುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಚುಟುಕು ಕವಿಗೋಷ್ಠಿ, ಡಾ.ಚಾಂದಿನಿ ಖಲೀದ್ರವರ ಹುಡುಕಾಟ ಶುರುವಾಗಿದೆ ಕನವ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಗಾಂಧಿಜಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೆ ಸಿಕ್ಕ ಸ್ವಾತಂತ್ರ್ಯವನ್ನು ಹೇಗೆ ರಕ್ಷಿಸಿಕೊಂಡು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕೆನ್ನುವುದಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅನೇಕ ಹಿರಿಯರ ತ್ಯಾಗ ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ನೂರಾರು ಜಾತಿ, ಧರ್ಮ, ಭಾಷೆಗಳಿರುವ ಭಾರತದಲ್ಲಿ ಎಲ್ಲರೂ ಸೌಹಾರ್ಧ, ಸಹಭಾಳ್ವೆಯಿಂದ ಬದುಕುತ್ತಿರುವಾಗ ಅಮೇರಿಕಾದ ಟ್ರಂಪ್ ಭಾರತವನ್ನು ನರಕಕ್ಕೆ ಹೋಲಿಸಿ ಡ್ರಗ್ಸ್ ದಂಧೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಹೀಯಾಳಿಸಿರುವುದಕ್ಕೆ ಇರಾನ್ ರಾಯಭಾರಿ ಭಾರತ ಸ್ವರ್ಗವಿದ್ದಂತೆ ಎಂದು ಟ್ರಂಪ್ಗೆ ತಿರುಗೇಟು ನೀಡಿದ್ದಾರೆಂದರು.
ಜಾತಿ ಧರ್ಮದ ನಡುವೆ ಸಂಘರ್ಷ ನಡೆದರೆ ಅಶಾಂತಿಯುಂಟಾಗುತ್ತದೆ. ಅಮೇರಿಕಾ ಇರಾನ್ ನಡುವೆ ಯುದ್ದ ನಡೆಯುತ್ತಿರುವುದರಿಂದ ಸಾವಿರಾರು ಅಮಾಯಕರ ಜೀವಗಳು ಬಲಿಯಾಗುತ್ತವೆಯೇ ವಿನಃ ಮತ್ತ್ಯಾವ ಪ್ರಯೋಜನವಿಲ್ಲ. ಶಾಂತಿಯಿಂದ ಇಡಿ ಜಗತ್ತನ್ನು ಗೆಲ್ಲಬಹುದು ಎಂದರು.
ಚಾಂದಿನಿ ಖಲೀದ್ ವೃತ್ತಿಯಲ್ಲಿ ಹಿಂದಿ ಶಿಕ್ಷಕರು. ಆದರೆ ಕನ್ನಡದ ಮೇಲೆ ಅವರಿಗೆ ಅಪಾರ ಅಭಿಮಾನವಿದೆ. ಹಾಗಾಗಿ ಕವನ ಸಂಕಲನಗಳನ್ನು ಹೊರತರಲು ಸಾಧ್ಯವಾಗುತ್ತಿದೆ. ಸಮಾಜ ಸುಧಾರಣೆಯಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ಹುಡುಕಾಟ ನಡೆಸಬೇಕಿದೆ. ಬರವಣಿಗೆಯ ಮೂಲಕ ಏನನ್ನಾದರೂ ಸಾಧಿಸಬೇಕೆಂಬ ಛಲ ಅವರಲ್ಲಿದೆ. ಓದುಗರ ಮನಸ್ಸನ್ನು ಸೆಳೆಯುವ ಶಕ್ತಿ ಅವರ ಬರವಣಿಗೆಯಲ್ಲಿದೆ ಎಂದು ಬಿ.ಕೆ.ರಹಮತ್ವುಲ್ಲಾ ಪ್ರಶಂಶಿಸಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ದಯಾ ಪುತ್ತೂರ್ಕರ್ ಮಾತನಾಡಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಯಾವುದೇ ಒಂದು ಜಾತಿ ಧರ್ಮಕ್ಕೆ ಮೀಸಲಾದವರಲ್ಲ ಸಂವಿಧಾನದ ಮೂಲಕ ಸಮಾನತೆಯ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಅವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಪ್ರತಿಯೊಬ್ಬರು ಆದ್ಯತೆ ಕೊಡಬೇಕೆಂದು ಹೇಳಿದರು.
ಚಾಂದಿನಿ ಖಲೀದ್ರವರು ನಮ್ಮ ವೇದಿಕೆಗೆ ಸೇರ್ಪಡೆಗೊಂಡಾಗಿನಿಂದಲೂ ಸಾಕಷ್ಟು ಶ್ರಮಿಸುತ್ತ ಬರುತ್ತಿದ್ದಾರಲ್ಲದೆ ಬರವಣಿಗೆ ಬಗ್ಗೆ ಆಸಕ್ತಿ ಮೂಡಿಸಿಕೊಂಡ ಪರಿಣಾಮ ಈಗ ಮೂರನೆ ಪುಸ್ತಕ ಹೊರಬಂದಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಹೆಚ್ಚು ಕವನ ಸಂಕಲನಗಳನ್ನು ಹೊರತರಲಿ ಎಂದು ಹಾರೈಸಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ನೂತನ ಅಧ್ಯಕ್ಷೆ ಶಾರದಾ ಜೈರಾಮ್ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೊಸ ಪ್ರತಿಭೆಗಳನ್ನು ಹುಡುಕಿ ಅವಕಾಶ ನೀಡಲಿ ಎಂದು ಸಲಹೆ ನೀಡಿದರು.
ಇನ್ನರ್ವೀಲ್ಹ್ ಕ್ಲಬ್ ಅಧ್ಯಕ್ಷೆ ವೀಣಾಜಯರಾಮ್ ಅಧ್ಯಕ್ಷತೆ ವಹಿಸಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ರಂಗಾನಾಯ್ಕ ಸಿ. ಡಾ.ಚಾಂದಿನಿ ಖಲೀದ್, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ನೂತನ ಅಧ್ಯಕ್ಷೆ ಶಾರದಾ ಜೈರಾಮ್,
ಉಪಾಧ್ಯಕ್ಷ ಡಾ.ಬಸವರಾಜ್ ಹರ್ತಿ ವೇದಿಕೆಯಲ್ಲಿದ್ದರು.
ಸಮಾನತೆಯ ಹಾದಿಯಲ್ಲಿ ಅಂಬೇಡ್ಕರ್ ಚಿಂತನೆಗಳು ಎಂಬ ವಿಷಯ ಕುರಿತು ಪ್ರಾಂಶುಪಾಲರಾದ ಡಾ. ಪಿ.ಆರಡಿ ಮಲ್ಲಯ್ಯ ಕಟ್ಟೇರ ಉಪನ್ಯಾಸ ನೀಡಿದರು.
ಗಂಗಾಧರಪ್ಪ ಪ್ರಾರ್ಥಿಸಿದರು. ಕೆ.ಎನ್.ದೇವರಾಜ್ ಸ್ವಾಗತಿಸಿದರು. ಮುರಳಿಧರ್ ವಂದಿಸಿದರು. ವಿನಾಯಕ ಆರ್.ಜಿ.ನಿರೂಪಿಸಿದರು.
































