ಹೈದರಾಬಾದ್ : ನಗರದಲ್ಲಿ ತಡರಾತ್ರಿ ವಾಹನ ಸವಾರರನ್ನು ಬೆರಗುಗೊಳಿಸುವ ಘಟನೆ ನಡೆದಿದೆ. ಪಿವಿ ನರಸಿಂಹ ರಾವ್ ಎಕ್ಸ್ಪ್ರೆಸ್ವೇಯಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಒಂಟೆಯ ಮೇಲೆ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಒಂಟೆಯ ನಿರ್ವಾಹಕನೆಂದು ಶಂಕಿಸಲಾದ ಆ ವ್ಯಕ್ತಿ, ಫ್ಲೈಓವರ್ನ ಅಂಚಿಗೆ ಅಪಾಯಕಾರಿಯಾಗಿ ಒಂಟೆಯನ್ನು ಕುಡಿದ ಮತ್ತಿನಲ್ಲಿ ಓಡಿಸುತ್ತಿದ್ದ ಎನ್ನಲಾಗಿದೆ.
ಇನ್ಸ್ಟಾಗ್ರಾಮ್ ಬಳಕೆದಾರ ಇಕ್ರಮ್ ಉಲ್ಲಾ ಶಾ ಹಂಚಿಕೊಂಡ ಘಟನೆಯ ವೀಡಿಯೊದಲ್ಲಿ ಒಂಟೆಯಲ್ಲಿ ಕುಳಿತ ವ್ಯಕ್ತಿಯೊಬ್ಬ ಎಕ್ಸ್ಪ್ರೆಸ್ ವೇನಲ್ಲಿ ವಾಹನ ಸವಾರರಿಗೆ ಸಮಸ್ಯೆ ಸೃಷ್ಟಿಸಿದ್ದಾನೆ. ಷಾ ಆ ವ್ಯಕ್ತಿಯನ್ನು ತಡೆಯಲು ಬಾಟಲಿಯಿಂದ ನೀರನ್ನು ಎಸೆದು ಅವನನ್ನು ಪ್ರಜ್ಞೆಗೆ ತರಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಅವರು ಮತ್ತು ಅವರ ಸ್ನೇಹಿತ ಅಂತಿಮವಾಗಿ ಒಂಟೆಯನ್ನು ನಿಧಾನಗೊಳಿಸಿ, ಅದನ್ನು ದೀಪಸ್ತಂಭಕ್ಕೆ ಕಟ್ಟಿ, ಕುಡಿದ ಅಮಲಿನಲ್ಲಿದ್ದ ಸವಾರನನ್ನು ಕೆಳಗಿಳಿಸಲು ಸಹಾಯ ಮಾಡುವಲ್ಲಿ ಯಶಸ್ವಿಯಾದರು, ಇದರಿಂದಾಗಿ ದೊಡ್ಡ ಅಪಘಾತವನ್ನು ತಪ್ಪಿಸಲಾಯಿತು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ರಸ್ತೆ ಸುರಕ್ಷತೆ ಮತ್ತು ಪ್ರಾಣಿ ಕಲ್ಯಾಣದ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಪ್ರಾಣಿಯನ್ನು ರಕ್ಷಿಸಿದ್ದಕ್ಕಾಗಿ ಹಲವಾರು ಬಳಕೆದಾರರು ಶಾ ಮತ್ತು ಅವರ ಸ್ನೇಹಿತನನ್ನು ಶ್ಲಾಘಿಸಿದ್ದಾರೆ. ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೆಹದಿಪಟ್ನಂ ಜೊತೆ ಸಂಪರ್ಕಿಸುವ ಪಿ.ವಿ. ನರಸಿಂಹ ರಾವ್ ಎಕ್ಸ್ಪ್ರೆಸ್ವೇ, ಸೈಕ್ಲಿಸ್ಟ್ಗಳು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ನಾಲ್ಕು ಚಕ್ರಗಳ ಮತ್ತು ಸರಕು ಸಾಗಣೆ ವಾಹನಗಳ ಪ್ರವೇಶವನ್ನು ನಿಷೇಧಿಸುತ್ತದೆ.