ಉಡುಪಿಯ ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ ಶೆಟ್ಟಿಗೆ ಬಾಗಲಕೋಟೆ ಜಿಲ್ಲೆಗೆ 3 ತಿಂಗಳು ನಿರ್ಬಂಧ ವಿಧಿಸಿ ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜೂನ್ 20 ರಿಂದ ಸೆಪ್ಟೆಂಬರ್ 20ರವರೆಗೆ ಬಾಗಲಕೋಟೆ ಜಿಲ್ಲೆಯಾದ್ಯಂತ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.
ಮುಧೋಳ ನಗರದಲ್ಲಿ ಅತೀಸೂಕ್ಷ್ಮ ಪ್ರದೇಶವಾದ ಮುಧೋಳ ಶಹರದ ಶಿವಾಜಿ ನಗರದಲ್ಲಿ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಮೂರ್ತಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಮುಧೋಳ ನಗರ ಹಾಗೂ ಗ್ರಾಮೀಣ ಭಾಗದಿಂದ ಸುಮಾರು 10,000 ರಿಂದ 15,000 ಜನರು ಹಿಂದೂ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಶ್ರೀಕಾಂತ ಶೆಟ್ಟಿ, ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತದ ಕಾರ್ಯಕಾರಿಣಿ ಸದಸ್ಯರು ಆಗಮಿಸುವುದಾಗಿ ಮಾಹಿತಿ ತಿಳಿದು ಬಂದಿರುತ್ತದೆ.
ಮುಧೋಳ ಶಹರವು ಮತೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಇಲ್ಲಿ ಮತೀಯವಾಗಿ ಸಣ್ಣ ಘಟನೆಗಳು ಸಂಭವಿಸಿದ್ದಲ್ಲಿ ರಾಜ್ಯ ಮತ್ತು ರಾಷ್ಟ್ರ ವ್ಯಾಪ್ತಿಯಲ್ಲಿ ಪ್ರಚಾರ ಪಡೆದು ವಿವಿಧ ಅನ್ಯ ಧರ್ಮಿಯ ರಾಜ್ಯ ಮತ್ತು ರಾಷ್ಟ್ರ ನಾಯಕರು ಬೇಟಿ ನೀಡಿ ಭಾಷಣವನ್ನು ಮಾಡುವದರಿಂದ ಸಾಮರಸ್ಯದ ಜೀವನಕ್ಕೆ ಅಡೆತಡೆ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಭವ ಇರುತ್ತದೆ.
ಇಂತಹ ಘಟನೆಗಳು ಈ ಹಿಂದೆ ಗಣೇಶ ವಿಸರ್ಜನೆ ಕಾರ್ಯಕ್ರಮದ ಕಾಲಕ್ಕೆ ಜರುಗಿ, ಕೋಮು ಗಲಭೆಗೆ ಸಂಬಂದಿಸಿದಂತೆ ಒಟ್ಟು 28 ಪ್ರಕರಣಗಳು ಮುಧೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಮುಧೋಳ ನಗರದಲ್ಲಿ ಇಲ್ಲಿಯವರೆಗೆ ಇದ್ದ ದ್ವೇಷಮಯ ವಾತಾವರಣವು ಸ್ವಲ್ಪ ತಿಳಿಯಾಗುತ್ತಿದ್ದು, ಉಭಯ ಕೋಮಿನ ಜನರು ಹಿಂದಿನ ಕಹಿ ಘಟನೆಗಳನ್ನು ಮರೆತು ಸಾಮರಸ್ಯದತ್ತ ವಾಲುತ್ತಿದ್ದಾರೆ.
ಅಂತಹದ್ದರಲ್ಲಿ ಶ್ರೀಕಾಂತ ಶೆಟ್ಟಿ ಕಾರ್ಕಳ ಇವರು ಈ ಮೊದಲು ಯಾವುದೇ ಕಾರ್ಯಕ್ರಮಕ್ಕೆ ಹೋದಲ್ಲಿ ಪ್ರಚೋದನಕಾರಿ ಭಾಷಣ ಮಾಡುತ್ತಾ, ಕೋಮು ಸಾಮರಸ್ಯವನ್ನು ಹದಗೆಡಿಸುತ್ತಾ ಬಂದಿರುತ್ತಾನೆ. ಈತನ ಮೇಲೆ ರಾಜ್ಯದೆಲ್ಲೆಡೆ ಪ್ರಕರಣಗಳು ಕೂಡ ದಾಖಲಾಗಿವೆ ಎಂಬ ಒಕ್ಕಣೆ ಜಿಲ್ಲಾಡಳಿತದ ಆದೇಶದಲ್ಲಿದೆ.