ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಮುಂದುವರೆಯಬಾರದು ಎನ್ನುವ ನಿಲುವಿನಲ್ಲಿ ಈಗಲೂ ನಾವಿದ್ದೇವೆ. ಒಳಒಪ್ಪಂದ ಮಾಡಿ ರಾಜಕೀಯ ಮಾಡುತ್ತಿದ್ದಾರೆ. ಈಗಿನ ಅಧ್ಯಕ್ಷರು ಇದನ್ನೆಲ್ಲ ಮಾಡ್ತಿದ್ದಾರೆ. ಈ ಕುರಿತು ಹೈಕಮಾಂಡ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಬಿಜೆಪಿ ರೆಬಲ್ ನಾಯಕ ಕುಮಾರ್ ಬಂಗಾರಪ್ಪಎಂದು ಹೇಳಿದರು.
ಕೇಂದ್ರ ಸಚಿವ ಸೋಮಣ್ಣ ಜೊತೆ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸೋಮಣ್ಣ ಅವರು ನಮಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಹಕಾರ ಕೊಡಿ ಅಂತ ಕೇಳಿಲ್ಲ. ದಾವಣಗೆರೆ ವಿಚಾರಕ್ಕೆ ಸಿದ್ದೇಶ್ವರ್, ಹರೀಶ್ ಅವರನ್ನು ಸೋಮಣ್ಣ ಅವರು ಭೇಟಿಯಾಗಿದ್ದಾರೆ ಅಷ್ಟೇ ಎಂದು ತಿಳಿಸಿದರು.
ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕಾದರೆ ವಿಜಯೇಂದ್ರ ಬದಲಾವಣೆಯಾಗಬೇಕು. ನಮ್ಮ ಅಭಿಪ್ರಾಯ ಹೇಳಿದ್ದೇವೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ನೋಡೋಣ. ನಮ್ಮ ಅಭಿಪ್ರಾಯ, ನಮ್ಮ ನಿಲುವನ್ನು ನಾವು ಹೇಳಿದ್ದೇವೆ. ಕರ್ನಾಟಕದ ಕಾರ್ಯಕರ್ತರಿಗೂ ಈ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಎನ್ನುವ ಭಾವನೆಯಿದೆ. ನಮ್ಮ ಬೇಡಿಕೆಯಿಂದ ನಾವು ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸರ್ಕಾರದ ಅಕ್ರಮಗಳು ಜಾಸ್ತಿಯಾಗಿವೆ. ಇದರ ವಿರುದ್ಧ ಧ್ವನಿ ಎತ್ತುವ ಕೆಲಸ ವಿಜಯೇಂದ್ರ ಮಾಡಿಲ್ಲ. ವಾಲ್ಮೀಕಿ ಹಗರಣವನ್ನು ಹಾಗೆಯೇ ಕೈ ಬಿಟ್ಟರು. ಹನಿಟ್ರ್ಯಾಪ್ ವಿಷಯವನ್ನು ಬಿಟ್ಟರು. ಹೊಂದಾಣಿಕೆ ಮಾಡಿಕೊಂಡು ಕೈ ಚೆಲ್ಲಿ ಕೂತರೆ ಹೇಗೆ? ಇವರೆಲ್ಲ ನೇರ ನಡೆಯಿಂದ ರಾಜಕೀಯ ಮಾಡುತ್ತಿಲ್ಲ. ಒಳಒಪ್ಪಂದ ಮಾಡಿ ರಾಜಕೀಯ ಮಾಡುತ್ತಿದ್ದಾರೆ. ಈಗಿನ ಅಧ್ಯಕ್ಷರು ಇದನ್ನೆಲ್ಲ ಮಾಡ್ತಿದ್ದಾರೆ. ಈ ಕುರಿತು ಹೈಕಮಾಂಡ್ಗೆ ಮನವರಿಕೆ ಮಾಡಿಕೊಂಡಿದ್ದೇವೆ ಎಂದರು.