ನವದೆಹಲಿ: ಕೆನಡಾದ ಕಾನೂನಿನ ಅಡಿಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮತ್ತು ಸುಲಿಗೆ ಹಾಗೂ ಹಿಂಸಾಚಾರದಲ್ಲಿ ಭಾಗಿಯಾಗಿರುವ ಇತರರನ್ನು ಭಯೋತ್ಪಾದಕರು ಎಂದು ಹೆಸರಿಸುವಂತೆ ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯ ಮೇಯರ್ ಬ್ರೆಂಡಾ ಲಾಕ್ ಬುಧವಾರ ಮಾರ್ಕ್ ಕಾರ್ನಿ ನೇತೃತ್ವದ ಫೆಡರಲ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಲಾಕ್ ನಗರ ಸರ್ಕಾರದ ವೆಬ್ಸೈಟ್ನಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಸರ್ರೆಯ ಮೇಯರ್ ಬ್ರೆಂಡಾ ಲಾಕ್ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮತ್ತು ದಕ್ಷಿಣ ಏಷ್ಯಾ ಮೂಲದ ಕೆನಡಿಯನ್ನರನ್ನು ಗುರಿಯಾಗಿಸಿಕೊಂಡು ಸುಲಿಗೆ ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿರುವ ಇತರ ಯಾವುದೇ ಗುಂಪುಗಳಿದ್ದರೂ ಕೆನಡಾದ ಕಾನೂನಿನಡಿಯಲ್ಲಿ ಭಯೋತ್ಪಾದಕ ಸಂಘಟನೆಗಳೆಂದು ಫೆಡರಲ್ ಸರ್ಕಾರ ಘೋಷಿಸಬೇಕು ಎಂದು ಸರ್ರೆಯ ಮೇಯರ್ ಬ್ರೆಂಡಾ ಲಾಕ್ ಆಗ್ರಹಿಸಿದ್ದಾರೆ.
ಸುಲಿಗೆ ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿರುವ ಸ್ಥಳೀಯ ಅಥವಾ ಅಂತಾರಾಷ್ಟ್ರೀಯ ಗುಂಪುಗಳ ಜಾಲಗಳನ್ನು ಕೆಡವಲು ಇದು ಅಗತ್ಯ. ನಮ್ಮ ನಿವಾಸಿಗಳು ಮತ್ತು ವ್ಯವಹಾರಗಳನ್ನು ರಕ್ಷಿಸಲು, ಇವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಈ ಪದನಾಮವು ನಿರ್ಣಾಯಕವಾಗಿದೆ. ಸರ್ರೆ ಸಮುದಾಯವು ಈ ಗ್ಯಾಂಗ್ಗಳಿಂದ ಎದುರಿಸುತ್ತಿರುವ ಹಿಂಸಾಚಾರ ಮತ್ತು ಬೆದರಿಕೆ ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ.
ಕೆನಡಾದಲ್ಲಿ ನೆಲೆಸಿರುವ ಹಲವಾರು ದರೋಡೆಕೋರರು ಭಾರತದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಇವರು ಕಳೆದ ಕೆಲವು ವರ್ಷಗಳಿಂದ ಒಂಟಾರಿಯೊ, ಬ್ರಿಟಿಷ್ ಕೊಲಂಬಿಯಾ ಮತ್ತು ಆಲ್ಬರ್ಟಾದಲ್ಲಿ ಭಾರತೀಯರ ಮೇಲೆ ಅನೇಕ ದಾಳಿಗಳನ್ನು ನಡೆಸಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು (RCMP) ಆರೋಪಿಸಿದ್ದಾರೆ.
ಭಾರತದ ಹಲವಾರು ರಾಜ್ಯಗಳಲ್ಲಿಯೂ ಹಿಂಸಾಚಾರ, ಸುಲಿಗೆ ಮತ್ತು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಈ ಗ್ಯಾಂಗ್ಗಳನ್ನು ಹತ್ತಿಕ್ಕಲು ಭಾರತ ಅನೇಕ ಬಾರಿ ಒಟ್ಟಾವಾಕ್ಕೆ ಮನವಿ ಮಾಡಿತ್ತು. ಕೆನಡಾದಿಂದ ಕಾರ್ಯನಿರ್ವಹಿಸುತ್ತಿರುವ ಕೆಲವು ಪ್ರಮುಖ ದರೋಡೆಕೋರರಲ್ಲಿ ಗೋಲ್ಡಿ ಬ್ರಾರ್ ಮತ್ತು ಅರ್ಶ್ದೀಪ್ ಡಲ್ಲಾ ಕೂಡ ಸೇರಿದ್ದಾರೆ.
ಸುಲಿಗೆ, ಹಿಂಸಾಚಾರದ ಬೆದರಿಕೆಗಳು, ಗುಂಡಿನ ದಾಳಿಗಳು ಇತ್ತೀಚೆಗೆ ಸಾಕಷ್ಟು ಏರಿಕೆಯಾಗಿದೆ. ಅಂತಹ ಕೃತ್ಯಗಳು ಕೇವಲ ಅಪರಾಧವಲ್ಲ. ಅವು ಆರ್ಥಿಕ ಭಯೋತ್ಪಾದನೆ. ಅವು ನಮ್ಮ ಸಮುದಾಯದ ಸುರಕ್ಷತೆಯನ್ನು ಅಸ್ಥಿರಗೊಳಿಸುತ್ತವೆ ಮತ್ತು ನಾವು ಈಗ ಸಾರ್ವಜನಿಕ ಸುರಕ್ಷತಾ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ ಎಂದು ಬ್ರೆಂಡಾ ಲಾಕ್ ತಿಳಿಸಿದ್ದಾರೆ.
ಈ ಗ್ಯಾಂಗ್ಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸುವುದರಿಂದ ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸಾಧ್ಯವಾಗುತ್ತದೆ. ಸಾಮಾನ್ಯ ಜನರಿಗೆ ಹೆಚ್ಚು ಸುರಕ್ಷತೆ ಸಿಕ್ಕಂತಾಗುತ್ತದೆ. ಅಂತಹ ಅಪರಾಧ ಚಟುವಟಿಕೆಯನ್ನು ನಾವು ಸಹಿಸುವುದಿಲ್ಲ ಮತ್ತು ಕೆನಡಾದ ಕಾನೂನಿನ ಸಂಪೂರ್ಣ ಬಲವನ್ನು ನಮ್ಮ ನಿವಾಸಿಗಳ ರಕ್ಷಣೆಗೆ ಬಳಸಲಾಗುತ್ತದೆ ಎಂಬ ಸ್ಪಷ್ಟ ಸಂದೇಶ ಅವರಿಗೆ ಇದು ರವಾನಿಸುತ್ತದೆ ಎಂದು ಅವರು ಹೇಳಿದ್ದಾರೆ.