ಮಂಗಳೂರು: ಮುಂಬರುವ ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಂಗಳೂರು ನಗರ ಪೊಲೀಸ್ ಆಯುಕ್ತರು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳ ಆಚರಣೆಗಾಗಿ ಕಟ್ಟುನಿಟ್ಟಿನ ಷರತ್ತುಗಳನ್ನು ಪ್ರಕಟಿಸಿದ್ದಾರೆ. ಮೊಹರಂ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಈದ್ ಮಿಲಾದ್ ಸೇರಿದಂತೆ 2025ರ ಸಾಲಿನಲ್ಲಿ ನಡೆಯುವ ಪ್ರಮುಖ ಹಬ್ಬಗಳಿಗೆ ಈ ನಿಯಮಗಳು ಅನ್ವಯವಾಗಲಿವೆ.
ಪೊಲೀಸ್ ಇಲಾಖೆಯ ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಅಲ್ಲದೆ, ಪ್ರತಿ ಹಬ್ಬದ ಮುಂಚಿತವಾಗಿ ನಿರ್ದಿಷ್ಟ ಮಾರ್ಗಸೂಚಿಗಳು (ರಸ್ತೆ, ಸಮಯ, ಧ್ವನಿ ನಿಯಂತ್ರಣ) ಪ್ರಕಟವಾಗಲಿದ್ದು, ಆಯೋಜಕರು ತಮ್ಮ ಪ್ರತಿನಿಧಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಈ ವಿವರ ನೀಡದವರಿಗೆ ಅನುಮತಿ ದೊರೆಯುವುದಿಲ್ಲ ಹಾಗೂ ಯಾವುದೇ ಉಲ್ಲಂಘನೆ ಅಥವಾ ಘಟನೆಯ ಹೊಣೆಗಾರಿಕೆ ಈ ನಿಯೋಜಿತ ವ್ಯಕ್ತಿಗಳ ಮೇಲೆ ಇರುತ್ತದೆ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಪ್ರಮುಖ ಷರತ್ತುಗಳು ಮತ್ತು ನಿಯಮಗಳ ವಿವರ:
* ಕಡ್ಡಾಯ ಪೊಲೀಸ್ ಅನುಮತಿ ಮತ್ತು ಸಮಯದ ನಿರ್ಬಂಧ: ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆಗೆ ಪೊಲೀಸ್ ಹಾಗೂ ಇತರೆ ಸಂಬಂಧಿತ ಇಲಾಖೆಗಳ ಲಿಖಿತ ಅನುಮತಿ ಅಗತ್ಯ. ರಾತ್ರಿ 11:30 ಗಂಟೆಯ ನಂತರ ಯಾವುದೇ ಮೆರವಣಿಗೆಗೆ ಅವಕಾಶವಿಲ್ಲ. ಖಾಸಗಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಆ ಸ್ಥಳದ ಮಾಲೀಕರಿಂದ ನಿರಾಕ್ಷೇಪಣಾ ಪತ್ರ (NOC) ಕಡ್ಡಾಯ. ಅನುಮೋದಿತ ಸ್ಥಳ ಮತ್ತು ಮಾರ್ಗದಲ್ಲಿಯೇ ಕಾರ್ಯಕ್ರಮ ನಡೆಸಬೇಕು.
* ಉಲ್ಲಂಘನೆ: ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 189 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 92(1) ಅಡಿಯಲ್ಲಿ ಕ್ರಮ.
* ಡಿಜೆ ಸಂಪೂರ್ಣ ನಿಷೇಧ; ಧ್ವನಿವರ್ಧಕಗಳಿಗೆ ಅನುಮತಿ ಅಗತ್ಯ: ಡಿಜೆ, ಜೋರಾದ ಸ್ಪೀಕರ್ ಅಥವಾ ಈ ರೀತಿಯ ಯಾವುದೇ ಧ್ವನಿವರ್ಧಕ ಉಪಕರಣಗಳ ಬಳಕೆ ಸಂಪೂರ್ಣ ನಿಷಿದ್ಧ. ಧ್ವನಿವರ್ಧಕಗಳ ಬಳಕೆಗೆ ಅನುಮತಿ ಪಡೆಯುವುದು ಅಗತ್ಯವಿದ್ದು, ರಾತ್ರಿ 10 ಗಂಟೆಗೆ ಅವುಗಳನ್ನು ಸ್ಥಗಿತಗೊಳಿಸಬೇಕು. ಶಬ್ದ ಮಾಲಿನ್ಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
* ಉಲ್ಲಂಘನೆ: ಬಿಎನ್ಎಸ್ 2023ರ ಕಲಂ 270, 223, ಪರಿಸರ ಸಂರಕ್ಷಣಾ ಕಾಯ್ದೆ 1986ರ ಕಲಂ 15, ಶಬ್ದ ಮಾಲಿನ್ಯ ನಿಯಮಗಳು 2000, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 31 ಮತ್ತು ಸ್ಫೋಟಕಗಳ ಕಾಯ್ದೆ 1884 ಅಡಿಯಲ್ಲಿ ಕ್ರಮ.
* 24×7 ಭದ್ರತೆ ಮತ್ತು ಸಿಸಿಟಿವಿ ಕಡ್ಡಾಯ: ಆಯೋಜಕರು ಸ್ಥಳದಲ್ಲಿ 24×7 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ, 30 ದಿನಗಳ ಕಾಲ ದೃಶ್ಯಾವಳಿಗಳನ್ನು ಸಂಗ್ರಹಿಸಬೇಕು.
* ಉಲ್ಲಂಘನೆ: ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 31, 34, 70 ಮತ್ತು ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕ್ರಮಗಳು (ಕ್ರಮಗಳು) ಕಾಯ್ದೆ, 2017ರ ಕಲಂ 3(1) ಮತ್ತು 6 ಅಡಿಯಲ್ಲಿ ಕ್ರಮ.
* ಧಾರ್ಮಿಕ ವಿರೋಧಿ ಘೋಷಣೆಗಳು ಮತ್ತು ದ್ವೇಷ ಭಾಷಣ ನಿಷೇಧ: ಯಾವುದೇ ಘೋಷಣೆಗಳು, ಭಿತ್ತಿಪತ್ರಗಳು, ಪ್ರದರ್ಶನಗಳು ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಯಾವುದೇ ಧರ್ಮದ ವಿರುದ್ಧ ಅಥವಾ ದ್ವೇಷವನ್ನು ಪ್ರಚೋದಿಸುವಂತಿರಬಾರದು.
* ಉಲ್ಲಂಘನೆ: ಬಿಎನ್ಎಸ್ 2023ರ ಕಲಂ 196, 299, 352/353 ಅಡಿಯಲ್ಲಿ ಕ್ರಮ.
* ಜನಸಂದಣಿಗೆ ಕಡ್ಡಾಯ ಸ್ವಯಂಸೇವಕರ ನೇಮಕಾತಿ: ಅನುಮತಿತ ಸಾಮರ್ಥ್ಯ ಮೀರದಂತೆ ಜನಸಮೂಹವನ್ನು ನಿಯಂತ್ರಿಸಲು ಸಮರ್ಪಕವಾಗಿ ಸ್ವಯಂಸೇವಕರನ್ನು ನಿಯೋಜಿಸಿಕೊಳ್ಳಬೇಕು.
* ಉಲ್ಲಂಘನೆ: ಬಿಎನ್ಎಸ್ 2023ರ ಕಲಂ 125 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 92 ಮತ್ತು 30 ಅಡಿಯಲ್ಲಿ ಕ್ರಮ.
* ಪೆಂಡಾಲ್ ಎತ್ತರ ನಿಯಮಗಳು ಮತ್ತು ವಾಹನ ಸುರಕ್ಷಾ ನಿಯಮ ಪಾಲನೆ: ಪೆಂಡಾಲ್, ಕಾರ್ಯಕ್ರಮದಲ್ಲಿ ಬಳಸುವ ವಾಹನಗಳು ಕಾನೂನು ಅಥವಾ ಮೆಸ್ಕಾಂ ಮಾನದಂಡಗಳನ್ನು ಮೀರಬಾರದು. ವಾಹನಗಳು ನೋಂದಣಿ ಪತ್ರ, ಫಿಟ್ನೆಸ್, ವಿಮೆ ಮತ್ತು ಪಿಯುಸಿ ಪ್ರಮಾಣ ಪತ್ರ ಹೊಂದಿರಬೇಕು.
* ಉಲ್ಲಂಘನೆ: ಬಿಎನ್ಎಸ್ 2023ರ ಕಲಂ 125 ಹಾಗೂ ಮೋಟಾರು ವಾಹನ ಕಾಯ್ದೆ 2019ರ ಕಲಂ 39, 130, 192 ಅಡಿಯಲ್ಲಿ ಕ್ರಮ.
* ಅಗ್ನಿಶಾಮಕ ಮತ್ತು ತುರ್ತು ವ್ಯವಸ್ಥೆಗಳ ಒದಗಿಕೆ: ಅಗ್ನಿ ನಂದಕಗಳು, ಆಂಬುಲೆನ್ಸ್, ಪ್ರಥಮ ಚಿಕಿತ್ಸಾ ಕಿಟ್ ಕಡ್ಡಾಯವಾಗಿರಬೇಕು. ಸುಲಭವಾಗಿ ಹೊತ್ತಿಕೊಳ್ಳುವ ವಸ್ತುಗಳನ್ನು ಬೆಂಕಿಯ ಮೂಲಗಳ ಬಳಿ ಇಡಬಾರದು. ವಿಷಕಾರಿ ಬಣ್ಣಗಳು, ನಿಷೇಧಿತ ರಾಸಾಯನಿಕಗಳು, ಏಕ ಬಳಕೆ ಪ್ಲಾಸ್ಟಿಕ್ ನಿಷಿದ್ಧ.
* ಉಲ್ಲಂಘನೆ: ಬಿಎನ್ಎಸ್ 2023ರ ಕಲಂ 125, 287 ಮತ್ತು ಪರಿಸರ ಕಾಯ್ದೆ 1986ರ ಕಲಂ 15, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳು 2016 ಅಡಿಯಲ್ಲಿ ಕ್ರಮ.
* ವಾಹನ ಸಂಚಾರ ಮುಕ್ತವಾಗಿ ನಿರ್ವಹಣೆ ಮತ್ತು ತುರ್ತು ಮಾರ್ಗಗಳ ನಿರ್ಬಂಧ: ವಾಹನ ಮತ್ತು ಪಾದಚಾರಿ ಸಂಚಾರಕ್ಕೆ ಯಾವುದೇ ತಡೆ ಇಲ್ಲದಂತೆ ವ್ಯವಸ್ಥೆ ಮಾಡಬೇಕು. ತುರ್ತು ಮಾರ್ಗಗಳಿಗೆ ಅಡ್ಡಿಯುಂಟುಮಾಡಬಾರದು ಮತ್ತು ನಿಗದಿತ ಸ್ಥಳದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಇರಬೇಕು.
* ಉಲ್ಲಂಘನೆ: ಬಿಎನ್ಎಸ್ 2023ರ ಕಲಂ 126(2), 285, 194ಇ ಮತ್ತು ಮೋಟಾರು ವಾಹನ ಕಾಯ್ದೆ 2019ರ ಕಲಂ 122, 201 ಅಡಿಯಲ್ಲಿ ಕ್ರಮ.
* ಸಾರ್ವಜನಿಕ/ಖಾಸಗಿ ಆಸ್ತಿಗೆ ಹಾನಿ ಮಾಡಬಾರದು: ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿ ಉಂಟುಮಾಡಬಾರದು.
* ಉಲ್ಲಂಘನೆ: ಬಿಎನ್ಎಸ್ 2023ರ ಕಲಂ 117/118, 324/326 ಮತ್ತು ಕರ್ನಾಟಕ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ 1984ರ ಕಲಂ 3 ಅಡಿಯಲ್ಲಿ ಕ್ರಮ.
* ಮಹಿಳೆಯರ ಸುರಕ್ಷತೆಗೆ ಶೂನ್ಯ ಸಹಿಷ್ಣುತೆ ನೀತಿ: ಕಾರ್ಯಕ್ರಮದ ಸಮಯದಲ್ಲಿ ಮಹಿಳೆಯರ ಚುಡಾವಣೆ, ಹಿಂಬಾಲಿಸುವುದು, ಲೈಂಗಿಕ ಕಿರುಕುಳ ಮುಂತಾದ ಅಪರಾಧಗಳು ನಡೆಯದಂತೆ ನೋಡಿಕೊಳ್ಳಬೇಕು.
* ಉಲ್ಲಂಘನೆ: ಬಿಎನ್ಎಸ್ 2023ರ ಕಲಂ 74, 75, 77, 78 ಅಡಿಯಲ್ಲಿ ಕ್ರಮ.
* ಸ್ವಚ್ಛತೆ, ಪ್ಲೆಕ್ಸ್ ಮತ್ತು ಬ್ಯಾನರ್ ನಿಯಂತ್ರಣ: ಯಾವುದೇ ಬ್ಯಾನರ್ ಅಥವಾ ಪ್ಲೆಕ್ಸ್ ಅನ್ನು ಸಂಬಂಧಿತ ಪ್ರಾಧಿಕಾರದಿಂದ ಅನುಮತಿ ಇಲ್ಲದೆ ಹಾಕಬಾರದು. ಕಾರ್ಯಕ್ರಮ ಮುಗಿದ ತಕ್ಷಣ ಅವುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು.
* ಉಲ್ಲಂಘನೆ: ಕರ್ನಾಟಕ ತೆರೆದ ಸ್ಥಳ (ಅಲಂಕಾರ ತಡೆಯುವಿಕೆ) ಕಾಯ್ದೆ 1981, ಬಿಎನ್ಎಸ್ 2023ರ ಕಲಂ 196, ಪರಿಸರ ಕಾಯ್ದೆ 1986ರ ಕಲಂ 15 ಮತ್ತು ಎಂಸಿಸಿ ಕಸ ನಿರ್ವಹಣಾ ನಿಬಂಧನೆಗಳು ಅಡಿಯಲ್ಲಿ ಕ್ರಮ.
* ಶಸ್ತ್ರಾಸ್ತ್ರಗಳು ಮತ್ತು ಅಪಾಯಕಾರಿಯಾದ ವಸ್ತುಗಳ ನಿಷೇಧ: ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರ, ಹರಿತವಾದ ಆಯುಧಗಳು ಇತ್ಯಾದಿ ಅಪಾಯಕಾರಿ ಆಯುಧಗಳ ಪ್ರದರ್ಶನ ಮತ್ತು ಸಾಗಾಟ ಮಾಡಬಾರದು.
* ಉಲ್ಲಂಘನೆ: ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 25 ಅಡಿಯಲ್ಲಿ ಕ್ರಮ.
* ಡೋನ್ ಬಳಸಲು ಮುಂಚಿತ ಅನುಮತಿ ಕಡ್ಡಾಯ: ಅನುಮತಿ ಇಲ್ಲದೆ ಯಾವುದೇ ಡ್ರೋನ್ ಅಥವಾ ಯುಎವಿ (Unmanned Aerial Vehicle) ಬಳಸುವಂತಿಲ್ಲ.
* ಉಲ್ಲಂಘನೆ: ಡ್ರೋನ್ ನಿಯಮಗಳು 2021ರ ನಿಯಮ 49 ಅಡಿಯಲ್ಲಿ ಕ್ರಮ.
* ಮೆರವಣಿಗೆಯಲ್ಲಿ ಪ್ರಾಣಿಗಳ ಬಳಕೆಗೆ ನಿಯಂತ್ರಣ: ಮೆರವಣಿಗೆ ಅಥವಾ ಪ್ರದರ್ಶನಗಳಲ್ಲಿ ಪ್ರಾಣಿಗಳನ್ನು ಬಳಸಲು ಮುಂಚಿತ ಅನುಮತಿ ಪಡೆಯಬೇಕು ಮತ್ತು ಪ್ರಾಣಿ ಹಕ್ಕುಗಳ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
* ಉಲ್ಲಂಘನೆ: ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಕಲಂ 11 ಮತ್ತು 22 ಅಡಿಯಲ್ಲಿ ಕ್ರಮ.
* ಪೊಲೀಸ್ ತಪಾಸಣೆಗೆ ಅಡ್ಡಿ ಮಾಡುವುದು ನಿಷೇಧ: ಪೊಲೀಸರು ಅಥವಾ ಅಧಿಕೃತ ಅಧಿಕಾರಿಗಳು ಯಾವುದೇ ಸಮಯದಲ್ಲಿ ಸ್ಥಳವನ್ನು ತಪಾಸಣೆ ಮಾಡಬಹುದು.
* ಉಲ್ಲಂಘನೆ: ಬಿಎನ್ಎಸ್ 2023ರ ಕಲಂ 221 ಅಡಿಯಲ್ಲಿ ಕ್ರಮ.
* ಅನುಮಾನಾಸ್ಪದ ಚಟುವಟಿಕೆಗಳ ವರದಿ ನೀಡುವುದು ಕಡ್ಡಾಯ: ಆಯೋಜಕರು ಮತ್ತು ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆ, ಸುಳ್ಳು ಮಾಹಿತಿ ಅಥವಾ ಗಲಭೆಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಅಥವಾ 112ಕ್ಕೆ ಕರೆಮಾಡಿ ವರದಿ ಮಾಡಬೇಕು.
* ಉಲ್ಲಂಘನೆ: ಬಿಎನ್ಎಸ್ 2023ರ ಕಲಂ 217 ಅಡಿಯಲ್ಲಿ ಕ್ರಮ.
ನಗರದಾದ್ಯಂತ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಈ ಷರತ್ತುಗಳನ್ನು ಹೊರಡಿಸಲಾಗಿದ್ದು, ಎಲ್ಲ ಆಯೋಜಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಮಂಗಳೂರು ನಗರ ಪೊಲೀಸ್ ಇಲಾಖೆ ಮನವಿ ಮಾಡಿದೆ. ಯಾವುದೇ ಷರತ್ತುಗಳ ಉಲ್ಲಂಘನೆಯು ಭಾರತೀಯ ನ್ಯಾಯ ಸಂಹಿತೆ 2023, ಕರ್ನಾಟಕ ಪೊಲೀಸ್ ಕಾಯ್ದೆ 1963, ಪರಿಸರ ಸಂರಕ್ಷಣಾ ಕಾಯ್ದೆ 1986, ಮೋಟಾರು ವಾಹನ ಕಾಯ್ದೆ 1988, ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಶಸ್ತ್ರಾಸ್ತ್ರ ಕಾಯ್ದೆ 1959, ಡ್ರೋನ್ ನಿಯಮಗಳು 2021, ಸ್ಫೋಟಕಗಳ ಕಾಯ್ದೆ 1884 ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.